ಸಾರಾಂಶ
ಕನಕಗಿರಿ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪಟ್ಟಣದ ನಾನಾ ದೇವಸ್ಥಾನಗಳಲ್ಲಿ ಶುಕ್ರವಾರ ವಿಶೇಷ ಪೂಜೆ ನಡೆಯಿತು.ಪಟ್ಟಣದ ಕನಕಾಚಲಪತಿ ದೇವಸ್ಥಾನದಲ್ಲಿನ ಮಹೇಶ್ವರಮೂರ್ತಿಗೆ, ರಾಮಲಿಂಗೇಶ್ವರ, ರಾಜಬೀದಿಯಲ್ಲಿನ ನಗರೇಶ್ವರ, ನೀಲಕಂಠೇಶ್ವರ, ಪಂಪಾಪತಿ, ಕಲ್ಮಠದ ಶಿವಲಿಂಗಕ್ಕೂ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿದವು.ಇನ್ನು ಪಟ್ಟಣದಲ್ಲಿ ಜೀವಂತ ಲಿಂಗೈಕ್ಯರಾಗಿರುವ ಅವಧೂತ ಸಚ್ಚಿದಾನಂದರ ಕರ್ತೃ ಗದ್ದುಗೆ ಹಾಗೂ ಪವಾಡ ಪುರುಷ ಹಾಲಪ್ಪಯ್ಯ ಶರಣರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ನಡೆದವು. ಹಬ್ಬದ ಪ್ರಯುಕ್ತ ಸಂಜೆ ವೇಳೆ ಮಹಿಳೆಯರು ತಂಡೋಪ ತಂಡವಾಗಿ ವಿವಿಧ ದೇಗುಲಗಳಿಗೆ ತೆರಳಿ ಫಲಹಾರ, ನೈವೇದ್ಯ ಸಮರ್ಪಿಸಿದರು.ಉಪವಾಸ ಹರಕೆ ಹೊತ್ತ ಭಕ್ತರು ಶಿವನಾಮ ಸ್ಮರಣೆ, ಭಜನೆ, ಶಿವನ ಸ್ತುತಿ, ಮಂತ್ರಗಳನ್ನು ಪಠಿಸಿ ಶಿವನನ್ನು ನೆನೆದು, ಭಕ್ತಿ ಸಮರ್ಪಿಸಿದರು.ಪಟ್ಟಣದ ಆರಾಧ್ಯ ದೈವ ಕನಕಾಚಲಪತಿ ಹಾಗೂ ಲಕ್ಷ್ಮೀದೇವಿಗೂ ವಿಶೇಷ ಅಲಂಕಾರದ ಜತೆಗೆ ಪೂಜಾ ವಿಧಿ-ವಿಧಾನಗಳು ನಡೆದವು. ತೀರ್ಥ ಪ್ರಸಾದದ ಜತೆಗೆ ಮುಜರಾಯಿ ಇಲಾಖೆಯಿಂದ ಬಂದ ಗಂಗಾಜಲವನ್ನು ಭಕ್ತರಿಗೆ ಹಂಚಿದರು.ಶಿವರಾತ್ರಿ ಹಬ್ಬಕ್ಕೆ ಶಿವನಮೂರ್ತಿ ಅಥವಾ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುವುದು ಸಾಮಾನ್ಯ. ಆದರೆ ಪಟ್ಟಣದ ಆಂಜನೇಯಸ್ವಾಮಿ ದೇಗುಲಗಳಲ್ಲಿ ಶಿವನ ಹೆಸರಿನಲ್ಲಿ ವೈಶಿಷ್ಟ್ಯಪೂರ್ಣ ಪೂಜೆ ನಡೆದಿರುವುದು ಕಂಡು ಬಂದಿತು.ತಾಲೂಕಿನಾದ್ಯಂತ ವಿವಿಧ ಭಜನಾ ತಂಡದ ಕಲಾವಿದರು ಸೇರಿಕೊಂಡು ರಾತ್ರಿಯಿಡೀ ರುದ್ರದೇವರ ಸ್ಮರಣೆ ಮಾಡಿ, ಈ ವರ್ಷ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿದರು.ಕನಕಾಚಲಪತಿ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ದೇವಸ್ಥಾನ ಅಧ್ಯಕ್ಷ ನಾಗರಾಜ ತೆಗ್ಗಿಹಾಳ, ಸದಸ್ಯರಾದ ಕಿರ್ತಿ ಸೋನಿ, ವೆಂಕಟೇಶ ಸೌದ್ರಿ, ನಾಗಪ್ಪ ಕೊರೆಡ್ಡಿ, ವಿರೇಶ ಕಡಿ, ಪ್ರಥಮ ದರ್ಜೆ ಸಹಾಯಕ ಸಿದ್ದಲಿಂಗಯ್ಯಸ್ವಾಮಿ, ದೇವಸ್ಥಾನ ಸಿಬ್ಬಂದಿ ಪಾಲ್ಗೊಂಡಿದ್ದರು.