ಆಧ್ಯಾತ್ಮಿಕ ಜ್ಞಾನ ರೂಢಿಸಿಕೊಳ್ಳಬೇಕು: ಪ್ರದೀಪಕುಮಾರ ಹಿರೇಮಠ

| Published : Jan 18 2024, 02:03 AM IST

ಸಾರಾಂಶ

ಶ್ರೀ ಸಿದ್ದಲಿಂಗೇಶ್ವರ ಪುರಾಣ ಪ್ರವಚನ ಸಮಾರಂಭದಲ್ಲಿ ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಮಾತನಾಡಿ ನಿಸ್ವಾರ್ಥ ಭಾವದಿಂದ ಮಾಡಿದಾಗ ಮಾತ್ರ ಆ ದೇವರು ಒಳ್ಳೆಯ ಮಾರ್ಗ ತೋರುತ್ತಾನೆ ಎಂದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಭಗವಂತನ ಸೇವೆಯನ್ನು ನಿಸ್ವಾರ್ಥ ಭಾವದಿಂದ ಮಾಡಿದಾಗ ಮಾತ್ರ ಆ ದೇವರು ಒಳ್ಳೆಯ ಮಾರ್ಗ ತೋರುತ್ತಾನೆ ಎಂದು ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಹೇಳಿದರು.

ಭಾನುವಾರ ಪಟ್ಟಣದ ಬಸ್ ಡಿಪೋ ಬಳಿಯಿರುವ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದಲ್ಲಿ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ 28ನೇ ಜಾತ್ರಾ ಮಹೋತ್ಸವ, ಧರ್ಮಸಭೆ ಕಾರ್ಯಕ್ರಮ ಹಾಗೂ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಪುರಾಣ ಪ್ರವಚನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಆಧ್ಯಾತ್ಮಿಕ ಜ್ಞಾನ ರೂಢಿಸಿಕೊಳ್ಳಬೇಕು. ತಿಳುವಳಿಕೆಗಾಗಿ ಇಂತಹ ಪುರಾಣ ಪ್ರವಚನ ಸಂತ್ಸಂಗಗಳನ್ನು ಆಲಿಸಬೇಕು. ಈ ಮಾನವ ಜನ್ಮ ಬಲು ದೊಡ್ಡದು ಮತ್ತು ಅಪೂರ್ವವಾಗಿದೆ. ಶರಣರ, ಸಂತರ, ಮಹಾಂತರ ಜೀವನ ಚರಿತ್ರೆಗಳನ್ನು ಅರಿತು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.

ವಿಜಯಪುರದ ಬಿಎಲ್‌ಡಿಇ ವೈದ್ಯಕೀಯ ಕಾಲೇಜಿನ ಡಾ.ವಿಜಯಕುಮಾರ ವಾರದ ಮಾತನಾಡಿ, ನಮ್ಮ ಈ ಬದುಕು ನೀರಿನ ಮೇಲಿನ ಗುಳ್ಳೆ ಇದ್ದಂತೆ. ಆಧ್ಯಾತ್ಮಿಕ ಜೀವನ ಕೌಶಲ್ಯಗಳ ಬಗ್ಗೆ ಇಂದಿನ ಪೀಳಿಗೆಯಲ್ಲಿ ಅರಿವು ಮೂಡಿಸುವುದು ಅವಶ್ಯಕ. ಮಾನವ ಸಂಸಾರದ ಸಂಪತ್ತಿಗೆ ಅತಿ ಆಸೆ ಪಡದೆ, ಧರ್ಮ, ಸಂಸ್ಕಾರ ಉಣಬಡಿಸುವ ಮಠ-ಮಂದಿರಗಳಲ್ಲಿ ನಡೆಯುವ ಪುರಾಣ-ಪ್ರವಚನಗಳಲ್ಲಿ ಭಾಗವಹಿಸುವ ಮುಖಾಂತರ ಬದುಕು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.

ಮಾದನ್ ಹಿಪ್ಪರಗಾ ಶ್ರೀಮಠದ ಶಾಂತವೀರ ಶಿವಾಚಾರ್ಯರು ಮಾತನಾಡಿದರು. ನಾಲವಾರ ಶ್ರೀಮಠದ ಶಿವಯೋಗಿ ಡಾ.ಚಂದ್ರಶೇಖರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದ ನೇತೃತ್ವ ಸಿಂದಗಿ ಆದಿಶೇಷ ಶ್ರೀಮಠದ ನಾಗರತ್ನ ರಾಜಯೋಗಿ ವೀರರಾಜೇಂದ್ರ ಸ್ವಾಮಿಗಳು ವಹಿಸಿದ್ದರು.

ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ, ಸತೀಶ ಬಿರಾದಾರ, ಭೋಜಪಗೌಡ ಬಿರಾದಾರ, ಗೊಲ್ಲಾಳಪ್ಪ ಬಗಲಿ, ಪ್ರವಚನಕಾರ ವೆ.ಮೂ.ಸಿದ್ದಯ್ಯ ಶಾಸ್ತ್ರಿಗಳು, ಸಂಗೀತಗಾರ ಶಾಂತಲಿಂಗ ಹೊನ್ನಕಿರಣಗಿ, ತಬಲಾ ಆಕಾಶ ಹೈದ್ರಾ, ಮಹಾಂತೇಶ ನಾಗೋಜಿ, ಆನಂದ ಶಾಬಾದಿ, ಚಂದ್ರಶೇಖರ ನಾಗರಬೆಟ್ಟ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಭೋಜರಾಜ ದೇಸಾಯಿ, ಗುರು ಮಠ, ಸುದರ್ಶನ ಜಂಗಣ್ಣಿ, ವಿದ್ಯಾ ಚೌಕಿಮಠ, ಸಂಗನಗೌಡ ಪಾಟೀಲ ಅಗಸಬಾಳ, ಶಾಂತವೀರ ಹಿರೇಮಠ, ಸಿದ್ದಲಿಂಗ ಕಿಣಗಿ, ಸುರೇಶ ಭಜಂತ್ರಿ ಸೇರಿದಂತೆ ಶ್ರೀಮಠದ ಭಕ್ತರು ಇದ್ದರು. ಪೂಜಾ ಹಿರೇಮಠ ನಿರೂಪಿಸಿದರು. ಪಂಡಿತ ಯಂಪೂರೆ ಸ್ವಾಗತಿಸಿದರು. ಮಾಹಾಂತೇಶ ನೂಲಾನವರ ಪ್ರಾಸ್ತಾವಿಕವಾಗಿ ಮಾತನಾಡಿದರು.