ಉಡುಪಿ: ಬೆಂಗಳೂರಿನ ಬಸವನಗುಡಿಯ ಶ್ರೀ ಗೋವರ್ಧನ ಕ್ಷೇತ್ರ-ಉಡುಪಿ ಶ್ರೀ ಪುತ್ತಿಗೆ ಮಠದ ಶಾಖೆಯಲ್ಲಿ ತ್ರಿಮತಸ್ಥ ವಿಪ್ರ ಸಮುದಾಯದ ಮಕ್ಕಳಿಗಾಗಿ ‘ಶ್ರೀ ಪುತ್ತಿಗೆ ಸುಗುಣ ಸ್ಕೂಲ್’, ಮಹಿಳೆಯರಿಗಾಗಿ ‘ಶ್ರೀ ಪುತ್ತಿಗೆ ಮಹಿಳಾ ವಿದ್ಯಾಪೀಠ’ ಹಾಗೂ ಪುರುಷರಿಗಾಗಿ ‘ಶ್ರೀ ಪುತ್ತಿಗೆ ಸಂಧ್ಯಾ ವಿದ್ಯಾಪೀಠ’ವನ್ನು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿದರು.ಈ ಸಂದರ್ಭ ಆಶೀರ್ವಚನ ನೀಡಿದ ಶ್ರೀಗಳು, ಆಧುನಿಕ ವಿದ್ಯೆಗಿಂತ ಆಧ್ಯಾತ್ಮಿಕ ವಿದ್ಯೆಯ ಆಧಿಕ್ಯವನ್ನು ಪ್ರತಿಪಾದಿಸಿದರು. “ಇಂದಿನ ಜನತೆಯು ಹಿಂದೆಂದಿಗಿಂತಲೂ ಬಹಿರ್ಮುಖವಾಗುತ್ತಿದ್ದು, ಆಂತರಿಕವಾಗಿ ಕುಂಠಿತವಾಗಿ ಕುಬ್ಜವಾಗುತ್ತಿದೆ. ಜೀವನದ ಪರಿಪೂರ್ಣತೆಗೆ ಆಧ್ಯಾತ್ಮಿಕತೆಯೇ ಪೂರ್ಣಕುಂಭ ವೆನಿಸಿದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಆಧ್ಯಾತ್ಮಿಕತೆಗೆ ಅತಿಶಯತೆಯನ್ನು ನೀಡಲು ಈ ವಿದ್ಯಾಪೀಠಗಳು ಅತ್ಯಂತ ಅವಶ್ಯವೆನಿಸಿದೆ” ಎಂದರು. ಶ್ರೀ ಪುತ್ತಿಗೆ ವಿದ್ಯಾಪೀಠಗಳು ಚೆನ್ನೈ, ಕೋಲ್ಕೊತಾ, ಉಡುಪಿ ಮೊದಲಾದ ಕಡೆ ಈಗಾಗಲೇ ಅತ್ಯುತ್ತಮ ಸೇವೆ ಸಲ್ಲಿಸಿ ಪ್ರಸಿದ್ಧವಾಗಿವೆ ಎಂದು ಹೇಳಿದರು.ಸಾನಿಧ್ಯ ವಹಿಸಿದ್ದ ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಮಾತನಾಡಿ, “ರಾಷ್ಟ್ರ ನಿರ್ಮಾಣದ ಮಹತ್ ಕಾರ್ಯವಾಗಬೇಕಾದರೆ ಸನಾತನ ಧರ್ಮದ ರೀತಿಯಲ್ಲಿ ಕುಟುಂಬ ನಿರ್ವಹಣೆ ಅತ್ಯಗತ್ಯ ಹಾಗೂ ಈ ಕಾರ್ಯದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಶ್ರೀ ಪುತ್ತಿಗೆ ಮಹಿಳಾ ವಿದ್ಯಾಪೀಠ ಒಂದು ಕ್ರಾಂತಿಕಾರಿ ಚಿಂತನೆಯಾಗಿದೆ” ಎಂದು ಶ್ಲಾಘಿಸಿದರು.

ಕರ್ನಾಟಕ ಸಂಸ್ಕೃತ ವಿವಿ ಉಪಕುಲಪತಿ ಅಹಲ್ಯಾ ಶರ್ಮಾ, ಒಂದು ಅಂದಾಜಿನಲ್ಲಿ ಭವಿಷ್ಯದಲ್ಲಿ ಶೇ. 40ರಷ್ಟು ಜನರು ವಿವಾಹ ವಿಮುಖರಾಗುವ ಆತಂಕ ತಲೆದೋರಿದ್ದು, ಈ ನಿಟ್ಟಿನಲ್ಲಿ ಸಮಾಜ ಎಚ್ಚೆತ್ತು ಈಗಿಂದೀಗಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.

ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಸಗೋಡು ಜಯಸಿಂಹ ಹಾಗೂ ಡಾ. ಕೆ.ಪಿ. ಪುತ್ತೂರಾಯರು ಶ್ರೀ ಪುತ್ತಿಗೆ ಶ್ರೀಗಳ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು. ಶ್ರೀ ಪುತ್ತಿಗೆ ವಿದ್ಯಾಪೀಠಕ್ಕೆ ಸೇರ ಬಯಸುವವರು ಬೆಂಗಳೂರು ಬಸವನಗುಡಿ ಗೋವರ್ಧನದ ಕಾರ್ಯಾಲಯವನ್ನು +91 9880491323: +91 97432 92161 +91 99451 00948 ಈ ದೂರ ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.