ಸಾರಾಂಶ
ಜೀವನದ ಜಂಜಾಟದಲ್ಲಿರುವ ಜನತೆಗೆ ಆಧ್ಯಾತ್ಮ ಅವಶ್ಯ. ಅದರಿಂದ ನೆಮ್ಮದಿ ಕಾಣಲು ಸಾಧ್ಯ ಎಂದು ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಜೀವನದ ಜಂಜಾಟದಲ್ಲಿರುವ ಜನತೆಗೆ ಆಧ್ಯಾತ್ಮದ ಅವಶ್ಯವಿದ್ದು, ಅದರಿಂದ ನೆಮ್ಮದಿ ಕಾಣಲು ಸಾಧ್ಯವೆಂದು ಕೊಡ್ಲಿಪೇಟೆ ಕಿರಿಕೂಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.ಅಕ್ಕನ ಬಳಗ ವತಿಯಿಂದ ಪಟ್ಟಣದ ಅಕ್ಕಮಹಾದೇವಿ ಸಭಾಂಗಣದಲ್ಲಿ ಈಚೆಗೆ ಆಯೋಜಿಸಲಾಗಿದ್ದ ಸಾಮೂಹಿಕ ಇಷ್ಟ ಲಿಂಗ ಪೂಜೆ ನೆರವೇರಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಹಾಗೂ ಬಿಡುವಿಲ್ಲದ ಕೆಲಸದಿಂದ ಜನರಿಗೆ ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರವೆಂದರೆ ಪೂಜೆ ಹಾಗೂ ಧ್ಯಾನವಾಗಿದ್ದು ಆದ್ದರಿಂದ ಭಗವಂತನ ಮೊರೆಹೋಗಿ ನೆಮ್ಮದಿಯನ್ನು ಕಾಣಬಹುದಾಗಿದೆ ಎಂದರು.ದೇಹದ ಮೇಲೆ ಇಷ್ಟಲಿಂಗ ಧರಿಸಿ ಪೂಜಿಸುವ ದರ್ಮವೊಂದು ಇದ್ದರೆ, ಅದು ವೀರಶೈವ ಲಿಂಗಾಯತ ಧರ್ಮವಾಗಿದ್ದು, ಇಲ್ಲಿ ಯಾವುದೇ ಸೂತಕಕ್ಕೂ ಆಸ್ಪದವಿಲ್ಲ. ಲಿಂಗಪೂಜೆ ಮುಖ್ಯವೆಂದರು.
ಇಷ್ಟಲಿಂಗ ಪೂಜೆಗೆ ಪ್ರಾತಃಕಾಲ ಸೂಕ್ತವಾದದ್ದು. ಮನೆಯಲ್ಲಿ ತಮ್ಮ ಮಕ್ಕಳಿಗೆ ಪೂಜೆಯನ್ನು ಕಲಿಸಿ, ವಚನ ಹೇಳಿಸಿ ಆ ಮೂಲಕ ಶಿವ ಶರಣರ ಆಶಯವನ್ನು ಈಡೇರಿಸಬೇಕು. 2, 3 ತಿಂಗಳಿಗೊಮ್ಮೆ ಇಂತಹ ಸಾಮೂಹಿಕ ಇಷ್ಟಲಿಂಗ ಪೂಜೆ, ವಚನಕಮ್ಮಟಗಳನ್ನು ಏರ್ಪಡಿಸಿದಲ್ಲಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಸಾಧ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಅಧ್ಯಕ್ಷೆ ಗೀತಾರಾಜು, ಉಪಾಧ್ಯಕ್ಷೆ ಸರಿತಾ ಮಲ್ಲಿಕಾರ್ಜುನ, ಕಾರ್ಯದರ್ಶಿ ಮಾಯಾ ಗಿರೀಶ್, ಖಜಾಂಚಿ ಆಶಾ ಹೂವಯ್ಯ, ನಿರ್ದೇಶಕರಾದ ಜಗದಾಂಬ,ರಜಿನಿ, ಮಂಜುಳಾ ಇದ್ದರು.