ಯುವಕರನ್ನು ವ್ಯಸನದಿಂದ ದೂರವಿರಿಸಲು ಕ್ರೀಡೆ ಸಹಕಾರಿ

| Published : Nov 19 2025, 01:00 AM IST

ಯುವಕರನ್ನು ವ್ಯಸನದಿಂದ ದೂರವಿರಿಸಲು ಕ್ರೀಡೆ ಸಹಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಇತ್ತೀಚೆಗೆ ಸಮಾಜದಲ್ಲಿ ಯುವಕರು ಮಾದಕ ವ್ಯಸನಗಳತ್ತ ಜಾರುತ್ತಿರುವುದು ಆತಂಕಕಾರಿ. ಯುವಕರನ್ನು ಇಂತಹ ದುಶ್ಚಟಗಳಿಂದ ದೂರವಿಡಲು ಕ್ರೀಡಾಕೂಟಗಳು ಸಹಕಾರಿ ಎಂದು ನಿವೃತ್ತ ಯೋಧ ಅನಂತರಾಜ ಗೋಪಾಲ್ ಹೇಳಿದರು.

ದೊಡ್ಡಬಳ್ಳಾಪುರ: ಇತ್ತೀಚೆಗೆ ಸಮಾಜದಲ್ಲಿ ಯುವಕರು ಮಾದಕ ವ್ಯಸನಗಳತ್ತ ಜಾರುತ್ತಿರುವುದು ಆತಂಕಕಾರಿ. ಯುವಕರನ್ನು ಇಂತಹ ದುಶ್ಚಟಗಳಿಂದ ದೂರವಿಡಲು ಕ್ರೀಡಾಕೂಟಗಳು ಸಹಕಾರಿ ಎಂದು ನಿವೃತ್ತ ಯೋಧ ಅನಂತರಾಜ ಗೋಪಾಲ್ ಹೇಳಿದರು.

ತಾಲೂಕಿನ ತೂಬಗೆರೆ ಸರ್ಕಾರಿ ಶಾಲಾ ಮೈದಾನದಲ್ಲಿ ತೂಬಗೆರೆ ವಾಲಿಬಾಲ್ ಸ್ಟ್ರೈಕರ್ಸ್ ಆಯೋಜಿಸಿದ್ದ ಪ್ರೈಮ್ ವಾಲಿಬಾಲ್ ಲೀಗ್‌ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಗೆಲುವು- ಸೋಲು ಮುಖ್ಯವಲ್ಲ, ಭಾಗವಹಿಸುವುದೇ ಮುಖ್ಯ. ಒಬ್ಬ ಕ್ರೀಡಾಪಟುವಿನ ಹಿಂದೆ ಪರಿಶ್ರಮ, ಶಿಸ್ತು ಮತ್ತು ತಪಸ್ಸು ಅಡಗಿದೆ. ಪ್ರತಿಯೊಬ್ಬ ಆಟಗಾರನಿಗೂ ಸಮರ್ಪಕ ಗೌರವ ದೊರೆಯಬೇಕು ಎಂದರು.

ಗ್ರಾಮೀಣ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ, ಈ ಬಾರಿ ಗ್ರಾಮಗಳ ನಡುವಿನ ಪಂದ್ಯಗಳ ಬದಲು, ಮೊದಲ ಬಾರಿಗೆ ಲೀಗ್ ಮಾದರಿ ಅನುಸರಿಸಲಾಗಿತ್ತು. ಆಗಮಿಸಿದ್ದ ಎಲ್ಲಾ ಆಟಗಾರರನ್ನು ಹರಾಜು ಪ್ರಕ್ರಿಯೆ ಮೂಲಕ 6 ತಂಡಗಳಿಗೆ ವಿಭಜಿಸಲಾಗಿದ್ದು, ನಾಕೌಟ್ ಪದ್ಧತಿಯ ಮೂರು ಸೆಟ್‌ಗಳ ಪಂದ್ಯಗಳು ದಿನವಿಡೀ ನಡೆದವು.

ವಿಜೇತ ತಂಡಕ್ಕೆ ₹25,000 ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ಮತ್ತು ರನ್ನರ್ ಅಫ್ ತಂಡಕ್ಕೆ ₹15,000 ನಗದು ಮತ್ತು ಪ್ರಶಸ್ತಿ ಫಲಕ ವಿತರಿಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಸಿದ್ದಪ್ಪ, ವಕೀಲ ಪ್ರತಾಪ್, ಯುವ ಮುಖಂಡ ಉದಯ ಆರಾಧ್ಯ, ಹಿರಿಯ ವಾಲಿಬಾಲ್ ಆಟಗಾರ ಎಸ್.ಆರ್. ಅಶೋಕ್, ಹಾಗೂ ಆಯೋಜಕ ವಿಕಾಸ್, ರವಿ ಟಿ.ಡಿ., ಶ್ರೀಕಾಂತ, ಮಂಜುನಾಥ, ರಾಘವೇಂದ್ರ ಮನೋಹರ್, ಜಾಲಿ ವೆಂಕಟೇಶ್ ಮತ್ತಿತರರು ಹಾಜರಿದ್ದರು.

ಫೋಟೋ-

17ಕೆಡಿಬಿಪಿ1- ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಪ್ರೈಮ್‌ ವಾಲಿಬಾಲ್‌ ಲೀಗ್‌ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.