Sports, game,winning,losing, essential, part,

ನ್ಯಾಮತಿ: ಕ್ರೀಡೆ ಎನ್ನುವುದು ಕೇವಲ ಗೆಲವು ಮತ್ತು ಸೋಲಿನ ಆಟವಲ್ಲ ಅವು ಜೀವನದ ಒಂದು ಅತ್ಯಗತ್ಯ ಭಾಗವಾಗಿದ್ದು, ನಮ್ಮ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಬಹಳ ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ. ನಿಂಗಪ್ಪ ತಿಳಿಸಿದರು.

ಕರ್ನಾಟಕ ಪಬ್ಲಿಕ್‌ ಶಾಲೆಯ ಆವರಣದಲ್ಲಿ ಮಂಗಳವಾರ ವಲಯ ಮಟ್ಟದ ಕ್ರೀಡಾಕೂಟವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪ್ರತಿ ದಿನ ಓದು, ಬರಹ ಪರೀಕ್ಷೆಗಳ ಒತ್ತಡಗಳಲ್ಲಿರುವ ವಿದ್ಯಾರ್ಥಿಗಳಿಗೆ ಕ್ರೀಡಾ ಕೂಟದಲ್ಲಿ ಭಾಗವಹಿಸುವುದರಿಂದ ಹೊಸ ಉತ್ಸಾಹ, ಚೈತನ್ಯ ನೀಡುವುದಲ್ಲದೇ ಸಮಯ ಪ್ರಜ್ಞೆ, ಮೈದಾನದಲ್ಲಿ ನಿಯಮಗಳನ್ನು ಪಾಲಿಸುವುದು, ಜೀವನದಲ್ಲಿ ಶಿಸ್ತು ಕಲಿಸುತ್ತದೆ. ಒಬ್ಬರಿಗೊಬ್ಬರು ಸಹಕರಿಸುವ ಮನೋಭಾವದಿಂದ ಒಟ್ಟಾಗಿ ಗುರಿ ತಲುಪುವುದನ್ನು ಹೇಳಿಕೊಡುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾ ಪಟುಗಳು ಕ್ರೀಡೆಯಲ್ಲಿ ಗೆಲ್ಲುವುದೊಂದೆ ಮುಖ್ಯವಲ್ಲ, ಕ್ರೀಡಾ ಮನೋಭಾವದಿಂದ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.

ಕ್ರೀಡಾಕೂಟ ಉದ್ಘಾಟನೆ ಕಾರ್ಯಕ್ರಮದ ಆಧ್ಯಕ್ಷತೆಯನ್ನು ನ್ಯಾಮತಿ ಕೆಪಿಎಸ್‌ ಕಾಲೇಜಿನ ಪ್ರಾಚಾರ್ಯ ವಿ.ಪಿ.ಪೂರ್ಣಾನಂದ ವಹಿಸಿದ್ದರು.

ಕೆಪಿಎಸ್‌ ಶಾಲೆಯ ಮುಖ್ಯ ಶಿಕ್ಷಕ ಎಂ.ಸಿದ್ದಪ್ಪ, ದಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಉಮಾಪತಿ, ತಿಮ್ಮಪ್ಪ ಜಿ., ನ್ಯಾಮತಿ ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಗುರುಮೂರ್ತಿ, ರವಿಕುಮಾರ್‌, ಕೆಪಿಎಸ್‌ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಹೊನ್ನಾಳಿ ನ್ಯಾಮತಿ ತಾಲೂಕಿನ ದೈಹಿಕ ಶಿಕ್ಷಕರು ಇದ್ದರು.

ಪೋಟೊ

ನ್ಯಾಮತಿ ಕರ್ನಾಟಕ ಪಬ್ಲಿಕ್‌ ಶಾಲೆಯ ಆವರಣದಲ್ಲಿ ವಲಯ ಮಟ್ಟದ ಕ್ರೀಡಾಕೂಟವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ. ನಿಂಗಪ್ಪ ಉದ್ಘಾಟಿಸಿದರು.