ಗ್ರಾಮೀಣ ಭಾಗದಲ್ಲಿ ಆಯೋಜಿಸುವ ಕ್ರೀಡಾಕೂಟ ಸಾಮರಸ್ಯದ ಜೊತೆಗೆ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಎಡಿಕೇರಿ ಪ್ರಸನ್ನ ಹೇಳಿದರು.
ನಾಪೋಕ್ಲು: ಗ್ರಾಮೀಣ ಭಾಗದಲ್ಲಿ ಆಯೋಜಿಸುವ ಕ್ರೀಡಾಕೂಟ ಸಾಮರಸ್ಯದ ಜೊತೆಗೆ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಎಡಿಕೇರಿ ಪ್ರಸನ್ನ ಹೇಳಿದರು.
ಸಮೀಪದ ಬಲ್ಲಮಾವಟಿ ಗ್ರಾಮದ ನಮೋ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಎರಡನೇ ವರ್ಷದ ಹೊನಲು ಬೆಳಕಿನ ಶಟಲ್ ಬ್ಯಾಡ್ಮಿಂಟನ್ ಟೂರ್ನಿ-2026ರಲ್ಲಿ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಬಗ್ಗೆಯೂ ಯುವ ಪೀಳಿಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.ಕಾಫಿ ಬೆಳೆಗಾರ ಕರವಂಡ ಲವ ನಾಣಯ್ಯ ಮಾತನಾಡಿ, ಯುವಜನತೆ ವಿಭಿನ್ನವಾಗಿ ಸಮಾಜಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ನಮೋ ಯುವಕ ಸಂಘದ ಅಧ್ಯಕ್ಷ ಬೈರುಡ ವಸಂತ ವಹಿಸಿದ್ದರು. ಈ ಸಂದರ್ಭ ಉದ್ಯಮಿ ಎಡಿಕೇರಿ ಪ್ರಸನ್ನ ಅವರನ್ನು ನಮೋ ಯುವಕರ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು. ಗ್ರಾಪಂ ಉಪಾಧ್ಯಕ್ಷ ಚೋಕಿರ ಭಾಭಿ ಭೀಮಯ್ಯ, ಮಾಜಿ ಅಧ್ಯಕ್ಷ ಮಣವಟ್ಟೀರ ಹರೀಶ್ ಕುಶಾಲಪ್ಪ, ನಾಲ್ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್, ಉಪಾಧ್ಯಕ್ಷ ಕರವಂಡ ನಾಣಯ್ಯ, ಗ್ರಾಪಂ ಮಾಜಿ ಸದಸ್ಯ ಮಚ್ಚುರ ರವೀಂದ್ರ, ಮಾಜಿ ಅಧ್ಯಕ್ಷ ಮುಕ್ಕಾಟಿರ ಸುತನ್ ಸುಬ್ಬಯ್ಯ, ಹೊಸೊಕ್ಲು ಶ್ರೀಕಾಂತ್, ಗೌರವ ಕಾರ್ಯದರ್ಶಿ ಚೀಯಂಡ ದಿನೇಶ್, ಖಜಾಂಚಿ ರೋಷನ್ ಪಾಲ್ಗೊಂಡಿದ್ದರು.ವಿನೋದ್ ಮೂಡಗದ್ದೆ, ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಿ, ಕಡ್ಲೇರ ತುಳಸಿ ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಬೊಳ್ಳುಮಾನಿ ರೋಶನ್ ಸ್ವಾಗತಿಸಿ, ಹೊಸೊಕ್ಲು ಶ್ರೀಕಾಂತ್ ವಂದಿಸಿದರು.ವಿಜೇತರು: ನಮೋ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಎರಡನೇ ವರ್ಷದ ಹೊನಲು ಬೆಳಕಿನ ಶಟಲ್ ಬ್ಯಾಡ್ಮಿಂಟನ್ ಟೂರ್ನಿ-2026ರಲ್ಲಿ ಮೈಸೂರಿನ ಟೀಮ್ ಆಕಾಶ್ ಫ್ರೆಂಡ್ಸ್ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಭಾಗಮಂಡಲದ ಆರ್ಸಿಸಿಬಿ ಬಾಯ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿತು. ಪುರುಷರ ವಿಭಾಗದ ಟೂರ್ನಿ ವಿಜೇತರಿಗೆ ಪ್ರಥಮ ಬಹುಮಾನ 5555 ರು. ನಗದು ಹಾಗೂ ಟ್ರೋಫಿ ದ್ವಿತೀಯ ಬಹುಮಾನ 4444 ರು. ನಗದು ಹಾಗೂ ಟ್ರೋಫಿ ವಿತರಿಸಲಾಯಿತು. ಮಹಿಳೆಯರ ವಿಭಾಗದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ನಾಪೋಕ್ಲುವಿನ ನಿತ್ಯ ನೀಲಮ್ಮ ತಂಡ ಪ್ರಥಮ ಸ್ಥಾನ ಗಳಿಸಿದರೆ ನಾಪೋಕ್ಲುವಿನ ಪ್ರಜ್ಞಾ ತಂಡ ದ್ವಿತೀಯ ಸ್ಥಾನ ಗಳಿಸಿತು. ಮಹಿಳಾ ವಿಭಾಗದ ಟೂರ್ನಿ ವಿಜೇತರಿಗೆ ಪ್ರಥಮ ಬಹುಮಾನ 3333 ರು. ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 2222 ರು. ನಗದು ಹಾಗೂ ಟ್ರೋಫಿ ವಿತರಿಸಲಾಯಿತು.