ಉಡುಪಿ: ಇಲ್ಲಿನ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಶ್ರೀ ದೇವರ ಸನ್ನಿಧಿಯಲ್ಲಿ ಶುಕ್ರವಾರ ಶ್ರೀ ದೇವರ ಚಾತುರ್ಮಾಸ್ಯ ಸಂಪ್ರೋಕ್ಷಣೆ ಅಂಗವಾಗಿ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಶತ ಕಲಶಾಭಿಷೇಕ, ಸಾನಿಧ್ಯ ಹವನ, ವಿಶೇಷ ಅಲಂಕಾರ, ಅಷ್ಟಮಂಗಲ ನಿರೀಕ್ಷಣೆ, ಪಟ್ಟ ಕಾಣಿಕೆ, ಸೇವಾದಾರರಿಗೆ ಪ್ರಸಾದ ವಿತರಣೆ ನಡೆಯಿತು. ಇದೇ ಸಂದರ್ಭ ಶ್ರೀದೇವರ ಸನ್ನಿಧಿಯಲ್ಲಿ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಪಂಚಮ ಪುಣ್ಯತಿಥಿ ಆರಾಧನೆಯೂ ಜರುಗಿತು. ಶ್ರೀ ದೇವರಿಗೆ ಮಹಾಪೂಜೆ ಬಳಿಕ ಸಮಾರಾಧನೆ ನಡೆಯಿತು.
ದೇವಳದ ಅರ್ಚಕ ವಿನಾಯಕ ಭಟ್, ದಯಾಘನ್ ಭಟ್, ರವೀಂದ್ರ ಭಟ್, ಶರತ್ ಭಟ್ ಮಲ್ಪೆ, ವಿದ್ವಾನ್ ಹರಿಪ್ರಸಾದ್ ಶರ್ಮ, ರಮೇಶ ಭಟ್, ದೀಪಕ್ ಭಟ್, ಲಕ್ಷೀನಾರಾಯಣ ಭಟ್ ಧಾರ್ಮಿಕ ಪೂಜಾ ವಿಧಾನಗಳನ್ನು ನಡೆಸಿಕೊಟ್ಟರು, ಗಿರೀಶ್ ಭಟ್, ಸುರೇಶ ಭಟ್, ಪ್ರಸನ್ನ ಭಟ್ ಸಹಕರಿಸಿದರು.ಕಾರ್ಯಕ್ರಮದಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಗುಜ್ಜಾಡಿ ಪ್ರಭಾಕರ ನಾಯಕ್, ಆಡಳಿತ ಮಂಡಳಿ ಸದಸ್ಯರು, ಸ್ವಯಂ ಸೇವಕರು, ಸೇವಾದಾರರು, ಜಿಎಸ್ ಬಿ ಯುವಕ ಮತ್ತು ಮಹಿಳಾ ಮಂಡಳಿಯ ಸದಸ್ಯರು, ಸಮಾಜ ಬಾಂದವರು ಉಪಸ್ಥಿತರಿದ್ದರು.