ಸಾರಾಂಶ
ಕೊಡಗಿನ ಸೋಮವಾರಪೇಟೆಯ ಶ್ರೀಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಜಾತ್ರೋತ್ಸವವು ಮಂಗಳವಾರ ಸಂಪನ್ನಗೊಂಡಿತು. ಸೋಮವಾರ ರಾತ್ರಿ ಭಗವತಿ ದೇವಿಯ ಕೋಲ, ಬೆಳಗಿನ ಜಾವ 2 ಗಂಟೆಗೆ ಕಂಡಕರ್ಣ ದೇವರ ಕೋಲ ನೆರೆದಿದ್ದ ಸಾವಿರಾರು ಭಕ್ತಾದಿಗಳಿಗೆ ದೈವದ ದರ್ಶನ ಮಾಡಿಸಿತು
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಇಲ್ಲಿನ ಶ್ರೀಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಜಾತ್ರೋತ್ಸವವು ಮಂಗಳವಾರ ಸಂಪನ್ನಗೊಂಡಿತು. ಸೋಮವಾರ ರಾತ್ರಿ ಭಗವತಿ ದೇವಿಯ ಕೋಲ, ಬೆಳಗಿನ ಜಾವ 2 ಗಂಟೆಗೆ ಕಂಡಕರ್ಣ ದೇವರ ಕೋಲ ನೆರೆದಿದ್ದ ಸಾವಿರಾರು ಭಕ್ತಾದಿಗಳಿಗೆ ದೈವದ ದರ್ಶನ ಮಾಡಿಸಿತು. ನಂತರ ಪೊಟ್ಟನ್ ದೇವರು ಕೋಲ, ಕರಿಂಗುಟ್ಟಿ ಚಾತನ್ ದೇವರ ಕೋಲ ಜರುಗಿತು. ಬೆಳಗಿನ ಜಾವ 5 ಗಂಟೆಗೆ ಪೊಟ್ಟನ್ ದೇವರು ಅಗ್ನಿಗೇರುವ ದೃಶ್ಯ ಗಮನಸೆಳೆಯಿತು.ಮುಂಜಾನೆ 7 ಗಂಟೆಗೆ ಶ್ರೀಮುತ್ತಪ್ಪನ್ ಹಾಗೂ ತಿರುವಪ್ಪನ್ ದೇವರ ಕೋಲ ಜರುಗಿತು. ನಂತರ ರಕ್ತಚಾಮುಂಡಿದೇವಿಯ ಕೋಲ, ವಿಷ್ಣುಮೂರ್ತಿ ದೇವರ ಕೋಲ, ಕಂಡಕರ್ಣ ದೇವರ ಗುರು ಶ್ರೀದರ್ಪಣ ನೆರವೇರಿತು. ಮಧ್ಯಾಹ್ನ ಗುಳಿಗ ದೇವರ ಕೋಲ ಮುಗಿದ ನಂತರ ಗುಳಿಗ ದೇವರ ಬಲಿ ಅರ್ಪಣೆ ನಡೆಯಿತು. ಸಂಜೆ ೪.೩೦ಕ್ಕೆ ವಿಷ್ಣುಮೂರ್ತಿ ದೇವರು ದೇವಾಲಯದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕುವ ಜಾತ್ರೋತ್ಸವ ತೆರೆಕಂಡಿತು. ಭಾನುವಾರದಿಂದ ಮೂರು ದಿನಗಳಲ್ಲಿಯೂ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತಾದಿಗಳು ರಾತ್ರಿಯಿಡೀ ವೆಳ್ಳಾಟಂ ಮತ್ತು ಕೋಲಗಳನ್ನು ವೀಕ್ಷಿಸಿದರು. ಸೋಮವಾರ ರಾತ್ರಿ ಶ್ರೀಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಜಾತ್ರೋತ್ಸವದ ಅಂಗವಾಗಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಕ್ಷೇತ್ರದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ, ಅರ್ಚಕರಾದ ಜಗದೀಶ್ ಉಡುಪ, ವೆಂಕಟೇಶ್ಹೊಳ್ಳ, ಚಂದ್ರಶೇಖರ್, ಪ್ರಸಾದ್ ಭಟ್ ಮತ್ತಿತರರು ಪೂಜಾ ಕಾರ್ಯ ನೆರವೇರಿಸಿದರು.
ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್ಕುಮಾರ್ ಮತ್ತು ಪದಾಧಿಕಾರಿಗಳು, ಸದಸ್ಯರು, ಮುತ್ತಪ್ಪನ್ ದೇವಾಲಯದ ಮಡಯನ್ ಸುಧೀಶ್, ಕ್ಷೇತ್ರದ ಭಕ್ತಾದಿಗಳು ಸಹಕರಿಸಿದರು.