ಸಾರಾಂಶ
ಧಾರವಾಡ:
ಹಿಂದೂ ಮಹಿಳೆಯರ ರಕ್ಷಣೆಗೆ ಶ್ರೀರಾಮಸೇನೆ ಈಗಾಗಲೇ ಉಚಿತ ಸಹಾಯವಾಣಿ ಸ್ಥಾಪಿಸಿದ್ದು, ಮುಂದುವರಿದ ಭಾಗವಾಗಿ ಮಹಿಳೆಯರ ಸ್ವಯಂ ರಕ್ಷಣೆಗೊಸ್ಕರ ತ್ರಿಶೂಲ ದೀಕ್ಷೆ ನೀಡಲು ಮುಂದಾಗಿದೆ.ಇತ್ತೀಚಿನ ದಿನಗಳಲ್ಲಿ ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಕೊಲೆಗಳಾಗುತ್ತಿವೆ. ಮಹಿಳೆಯರಿಗೆ ಸುರಕ್ಷತೆ ಇಲ್ಲದಾಗಿದೆ. ರಾಜ್ಯ ಸರ್ಕಾರ ಹಾಗೂ ಪೊಲೀಸ ಇಲಾಖೆಯಿಂದ ಸೂಕ್ತ ರಕ್ಷಣೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಕಳೆದ ಮೇ 29ರಂದು ಸಹಾಯವಾಣಿ ಆರಂಭಿಸಿತ್ತು. ಒಂದೇ ವಾರದಲ್ಲಿ 600ಕ್ಕೂ ಹೆಚ್ಚು ಕರೆಗಳು ಬಂದಿದ್ದು ಮಹಿಳೆಯರು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಇದೀಗ ಮಂದುವರೆದ ಭಾಗವಾಗಿ ಮಹಿಳೆಯರಿಗೆ ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ಸ್ವಯಂ ರಕ್ಷಣೆಗೋಸ್ಕರ ತ್ರಿಶೂಲ ದೀಕ್ಷೆ ನೀಡಲಾಗುತ್ತಿದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಜೂ. 9ರಂದು ವಿದ್ಯಾಗಿರಿ ಸಭಾಂಗಣದಲ್ಲಿ ಪ್ರಾರಂಭಿಕವಾಗಿ 50 ಜನ ಮಹಿಳೆಯರಿಗೆ ತ್ರಿಶೂಲ ದೀಕ್ಷಾ ನೀಡಲಾಗುವುದು. ಬೀಳಗಿ ಮಠದ ವಚನಶ್ರೀ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ, ನ್ಯಾಯವಾದಿ ಸಚಿನ ಕುಲಕರ್ಣಿ ಮಹಿಳೆಯರಿಗೆ ಕಾನೂನು ಸಲಹೆ ನೀಡಲಿದ್ದಾರೆ. ಐದುವರೆ ಇಂಚಿನ ತ್ರಿಶೂಲ ಇದಾಗಿದ್ದು, ಸ್ವಯಂ ರಕ್ಷಣೆಗೆ ಇದು ಸಹಾಯವಾಗಲಿದೆ. ರಾಕ್ಷಕರ ಸಂಹಾರಕ್ಕೆ ಕಾಳಿಕಾದೇವಿ ತ್ರಿಶೂಲ ಬಳಸಿದ ಹಿನ್ನೆಲೆಯಲ್ಲಿ ಮಹಿಳೆಯರು ಸಹ ರಾಕ್ಷಸರ ಗುಣದ ಜನರನ್ನು ಮಟ್ಟ ಹಾಕಲು ಈ ತ್ರಿಶೂಲ ಬಳಸಲಿದ್ದಾರೆ ಎಂದರು.ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಿಂದೂ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುತ್ತಿಲ್ಲ. ದೀಕ್ಷಾ ಮಾಡಲು ಕಾರಣ ಕಾಳಿಯ ಆರಾಧನೆ ಅವಳ ಶಕ್ತಿ ಮಹಿಳೆಯರಲ್ಲಿ ಬರಲಿ ಎಂಬುವುದಕ್ಕೆ ತ್ರಿಶೂಲ ದೀಕ್ಷಾ ನೀಡಲಾಗುತ್ತಿದೆ. ಈ ವಿಷಯ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲವೇ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಗೆ ನೀಡಿದ ಗಂಗಾಧರ ಕುಲಕರ್ಣಿ, ಶ್ರೀರಾಮ ಸೇನೆಯು ತೊಂದರೆಗೆ ಒಳಗಾದ ಹಿಂದೂ ಮಹಿಳೆಯರ ಸಹಾಯಕ್ಕೆ ಸಹಾಯವಾಣಿ (9090443444) ಆರಂಭಿಸಿದ್ದು, ಅಗತ್ಯ ಇದ್ದವರು ಈ ಸಹಾಯವಾಣಿ ಸದುಪಯೋಗ ಪಡೆಯಬೇಕು. ಜೊತೆಗೆ ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗಾಗಿ ಎಲ್ಲಾ ರೀತಿಯಲ್ಲೂ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಟಕರ, ಧಾರವಾಡ ಗ್ರಾಮೀಣ ಅಧ್ಯಕ್ಷ ಮೈಲಾರ ಗುಡ್ಡಪ್ಪನರ, ಹುಬ್ಬಳ್ಳಿ ನಗರ ಉಪಾಧ್ಯಕ್ಷ ಗುಣಧರ ದಡೌತಿ, ಪುಟ್ಟು ಜೋಶಿ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.ಪಾಕ್ ಪ್ರೇಮಿಗಳನ್ನು ಒದ್ದು ಓಡಿಸಿ:ಭಾರತದ ಅನ್ನ ಉಂಡು, ನೀರು ಕುಡಿದು, ಪುಕ್ಕಟೆ ಸೌಲಭ್ಯ ಪಡೆದು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವ, ದೇಶದ್ರೋಹಿ ಕಾರ್ಯ ಮಾಡುವವರನ್ನು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅವರ ಮನೆಗಳನ್ನು ಕೆಡುವಬೇಕು. ಸೌಲಭ್ಯಗಳನ್ನು ಕಸಿದುಕೊಂಡು ಪಾಕಿಸ್ಥಾನಕ್ಕೆ ಒದ್ದು ಕಳುಹಿಸಬೇಕು. ಇಲ್ಲದೇ ಹೋದಲ್ಲಿ ಶ್ರೀರಾಮ ಸೇನೆ ವತಿಯಿಂದ ಪಾಕ್ ಪ್ರೇಮಿಗಳ ಮನೆಗೆ ನುಗ್ಗಿ ಬೆಂಕಿ ಹಚ್ಚುವ ಕೆಲಸ ಮಾಡಬೇಕಾಗುತ್ತದೆ ಎಂದು ಗಂಗಾಧರ ಕುಲಕರ್ಣಿ ಎಚ್ಚರಿಕೆ ನೀಡಿದರು.