ವಿವಾಹ ನೋಂದಣಾಧಿಕಾರಿಗೆ ಶ್ರೀರಾಮಸೇನೆ ಮನವಿ

| Published : May 25 2024, 12:55 AM IST

ಸಾರಾಂಶ

ಇತ್ತೀಚೆಗೆ ರಾಜ್ಯದಲ್ಲಿ ಹೆಚ್ಚುತ್ತಿರುವ ಅಂತರ ಧರ್ಮೀಯ ವಿವಾಹಗಳು ಕೋಮು ಸ್ವರೂಪ ಪಡೆಯುತ್ತಿದ್ದು, ಸಮಾಜದ ಸಾಮರಸ್ಯ ಹಾಳು ಮಾಡುತ್ತಿವೆ. ಕೆಲವು ವಿವಾಹ ನೋಂದಣಿ ಕಚೇರಿಗಳಲ್ಲಿ ಸರಿಯಾದ ಕ್ರಮದಲ್ಲಿ ದಾಖಲೆ ಪರಿಶೀಲೀಸದೆ, ನೋಟೀಸ್ ಬೋರ್ಡ್ ಗೆ ಪ್ರಕಟಣೆಯನ್ನೂ ಹಾಕದೇ ವಿವಾಹ ಮಾಡುವ ಬಗ್ಗೆ ದೂರುಗಳಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಹಿರಿಯ ವಿವಾಹ ನೋಂದಣಾಧಿಕಾರಿ ಶ್ರೀ ಪಣೀಂದ್ರ ಅವರಿಗೆ ಉಡುಪಿ ಜಿಲ್ಲಾ ಶ್ರೀರಾಮಸೇನೆ ಮನವಿ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ಉಡುಪಿ

ಲವ್ ಜಿಹಾದ್ ವಿರುದ್ಧ, ಹಿಂದೂ ಹೆಣ್ಣುಮಕ್ಕಳ ರಕ್ಷಣೆಗಾಗಿ ಶ್ರೀರಾಮ ಸೇನೆಯು ಐತಿಹಾಸಿಕ ಹೆಜ್ಜೆ ಇಟ್ಟಿದ್ದು, 24× 7 ಕಾರ್ಯನಿರ್ವಹಿಸುವ ‘ಸಹಾಯ ವಾಣಿ’ ಮೇ 29ರಂದು ಹುಬ್ಬಳ್ಳಿ ಕೇಂದ್ರೀಕೃತವಾಗಿ ರಾಜ್ಯದ 6 ಕಡೆಗಳಲ್ಲಿ ಉದ್ಘಾಟನೆಗೊಳ್ಳಲಿದೆ.

ಇದರ ಪೂರ್ವಭಾವಿಯಾಗಿ, ಜಿಲ್ಲಾ ಹಿರಿಯ ವಿವಾಹ ನೋಂದಣಾಧಿಕಾರಿ ಶ್ರೀ ಪಣೀಂದ್ರ ಅವರಿಗೆ ಉಡುಪಿ ಜಿಲ್ಲಾ ಶ್ರೀರಾಮಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.

ಇತ್ತೀಚೆಗೆ ರಾಜ್ಯದಲ್ಲಿ ಹೆಚ್ಚುತ್ತಿರುವ ಅಂತರ ಧರ್ಮೀಯ ವಿವಾಹಗಳು ಕೋಮು ಸ್ವರೂಪ ಪಡೆಯುತ್ತಿದ್ದು, ಸಮಾಜದ ಸಾಮರಸ್ಯ ಹಾಳು ಮಾಡುತ್ತಿವೆ. ಕೆಲವು ವಿವಾಹ ನೋಂದಣಿ ಕಚೇರಿಗಳಲ್ಲಿ ಸರಿಯಾದ ಕ್ರಮದಲ್ಲಿ ದಾಖಲೆ ಪರಿಶೀಲೀಸದೆ, ನೋಟೀಸ್ ಬೋರ್ಡ್ ಗೆ ಪ್ರಕಟಣೆಯನ್ನೂ ಹಾಕದೇ ವಿವಾಹ ಮಾಡುವ ಬಗ್ಗೆ ದೂರುಗಳಿವೆ, ಆದ್ದರಿಂದ ವಿವಾಹ ನೋಂದಣಿ ಕಚೇರಿಯಲ್ಲಿ ಮತಾಂತರ ತಡೆ -2022 ಕಾಯ್ದೆಯೂ ಸೇರಿದಂತೆ, ಯಾವುದೇ ಕಾನೂನಿನ ಲೋಪಗಳು ಜರುಗದಂತೆ ಜಾಗ್ರತೆ ವಹಿಸಬೇಕು. ಈ ಕೋಮು ಸೂಕ್ಷ್ಮ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ಮನವಿಯಲ್ಲಿ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು, ಜಿಲ್ಲಾ ವಕ್ತಾರ ಶರತ್ ಮಣಿಪಾಲ, ಪ್ರ. ಕಾರ್ಯದರ್ಶಿ ಸುಧರ್ಶನ್ ಕಪ್ಪೆಟ್ಟು, ಕಾರ್ಯದರ್ಶಿ ವಿಕ್ರಂ ವಿ, ಜಿಲ್ಲಾ ಸಂಪರ್ಕ ಪ್ರಮುಖ್ ಸುಜಿತ್ ನಿಟ್ಟೂರು, ನಗರ ಅಧ್ಯಕ್ಷ ಸುದೀಪ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.