ಶ್ರೀರಾಮ ಭಾರತೀಯರ ನಂಬಿಕೆ, ಪರಂಪರೆಯ ಸಾಕ್ಷಿ ಪ್ರಜ್ಞೆ

| Published : Apr 18 2024, 02:29 AM IST

ಸಾರಾಂಶ

ಚಿತ್ರದುರ್ಗದ ಭೋವಿ ವಿದ್ಯಾರ್ಥಿ ನಿಲಯದ ಆವರಣದಲ್ಲಿರುವ ಶ್ರೀರಾಮ ಮಂದಿರದಲ್ಲಿ ರಾಮನವಮಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶ್ರೀರಾಮ ಭಾರತೀಯರ ನಂಬಿಕೆ ಮತ್ತು ಪರಂಪರೆ ಸಾಕ್ಷಿ ಪ್ರಜ್ಞೆ ಎಂದು ಕುಂಚಿಟಿಗ ಗುರುಪೀಠದ ಶ್ರೀಶಾಂತವೀರ ಸ್ವಾಮೀಜಿ ಬಣ್ಣಿಸಿದರು.

ಚಿತ್ರದುರ್ಗ ನಗರದ ಭೋವಿ ವಿದ್ಯಾರ್ಥಿನಿಲಯದ ಆವರಣದಲ್ಲಿರುವ ರಾಮ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡ ರಾಮನವಮಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರೀರಾಮ ಸರ್ವವ್ಯಾಪಿ, ಭಾರತದ ಕೀರ್ತಿ. ರಾಮನೇ ವಿಶ್ವ ಹಾಗೂ ರಾಮನೇ ವಿಶ್ವಾಸವೆಂದು ಹೇಳಿದರು.

ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ, ರಾಮ ತನ್ನ ಸಂಬಂಧಗಳು, ಆಪ್ತರು, ಪ್ರಜೆಗಳು, ಸ್ನೇಹಿತರು ಹಾಗೂ ವಿರೋಧಿಗಳನ್ನೆಲ್ಲಾ ಧರ್ಮದ ದೃಷ್ಟಿಯಿಂದ ನೋಡುತ್ತಿದ್ದ. ತತ್ವಪ್ರಧಾನವಾಗಿ ನೋಡುವ ನಿರ್ಲಿಪ್ತ ಭಾವ ಶ್ರೀರಾಮನಲ್ಲಿತ್ತು. ಹಾಗಾಗಿ ತನ್ನ ಜೀವನದ ಅವಿಭಾಜ್ಯ ಅಂಗವಾಗಿದ್ದ ಸೀತೆ ಹಾಗೂ ಲಕ್ಷಣನ ಸಂಬಂಧವನ್ನೂ ಕೂಡ ಧರ್ಮದ ನೆಲೆಯಿಂದ ಕಡಿದುಕೊಂಡನು. ಒಂದು ಆದರ್ಶವನ್ನಿಟ್ಟುಕೊಂಡು ಬಾಳಿದವನು ಶ್ರೀರಾಮ ಎಂದರು.

ಹಡಪದ ಗುರುಪೀಠದ ಶ್ರೀ ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ ಮಾತನಾಡಿ, ಪ್ರಜೆಗಳ ವರ್ಣನೆಯಲ್ಲಿ ಚಿತ್ರಿಸಲ್ಪಟ್ಟ ರಾಮನ ಗುಣಗಳು, ಸ್ವಯಂ ರಾಮನಲ್ಲಿಯೇ ಇತ್ತು. ಜಗತ್ತು ಒಂದು ವ್ಯಕ್ತಿತ್ವವ ನಿರೀಕ್ಷೆ ಮಾಡುತ್ತಿರುವಾಗ ಆ ಎತ್ತರಕ್ಕೆ ಮುಟ್ಟಬೇಕಾದ ಅನಿವಾರ್ಯತೆ ನಮಗೆ ನಾವು ಹೇರಿಕೊಳ್ಳಬೇಕಾಗುತ್ತದೆ. ಹೀಗಾಗಿ ರಾಮ, ಆ ಎತ್ತರಕ್ಕೆ ಏರಲು ಧರ್ಮವೆಂಬ ಏಣಿ ಹಾಗೂ ನೀತಿಯೆಂಬ ದಾರಿಯ ಬಳಸಿದೆ. ಈ ಹಾದಿ ಅನುಸರಿಸಿ ಬಂದಿದ್ದರಿಂದ, ಪ್ರಜೆಗಳು ಬಯಸಿದ ರಾಮ ಸಿದ್ಧನಾದ. ಹೀಗಾಗಿ ಯುಗ ಯುಗಗಳಲ್ಲಿ ವಿರಳವಾಗಿ ಕಾಣುವ, ಒಂದು ವಿಶಿಷ್ಟ ವ್ಯಕ್ತಿತ್ವ ರಾಮನದೆಂದರು.

ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಇದು ಪರಿವರ್ತನೆಯ ಯುಗ. ಎಲ್ಲರಲ್ಲೂ ರಾಮ ಹಾಗೂ ರಾವಣನಂತಹ ಗುಣವಿದೆ. ನಮ್ಮಲ್ಲಿನ ಕೆಟ್ಟ ಗುಣ ನಾಶಮಾಡಿ ಉತ್ತಮ ಗುಣ ಅಳವಡಿಸಿಕೊಂಡರೆ ನಾವು ಕೂಡ ರಾಮನ ಸ್ವಭಾವ ಹೊಂದಬಹುದು. ದುಶ್ಚಟಗಳನ್ನೇ ರೂಢಿಸಿಕೊಂಡರೆ ರಾವಣನಂತೆ ಗೋಚರಿಸುತ್ತೇವೆ. ಇಂದಿನಿಂದಲೇ ನಮ್ಮ ಸ್ವಭಾವ ಬದಲಾಯಿಸಿಕೊಳ್ಳೊಣ. ಎಲ್ಲರಲ್ಲೂ ಸದ್ಗುಣಗಳಿವೆ, ಅವುಗಳನ್ನು ಅರಿತು ರೂಢಿಸಿಕೊಂಡು ಮುಂದೆ ಸಾಗೋಣ ಎಂದು ತಿಳಿಸಿದರು.

ಕುಂಬಾರ ಗುರುಪೀಠದ ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಶಿವಶಕ್ತಿ ಗುರುಪೀಠದ ಶ್ರೀ ಬಸವಪ್ರಸಾದ ಸ್ವಾಮೀಜಿ, ಪಾರಮಾರ್ಥಿಕ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕೊರಟಗೆರೆ ಅನ್ನಪೂರ್ಣೇಶ್ವರಿ ಮಠದ ಶ್ರೀ ಬಸವ ಮಹಾಲಿಂಗ ಸ್ವಾಮೀಜಿ, ಬಸವಕಲ್ಯಾಣದ ಶ್ರೀ ಸತ್ಯಕ್ಕ ತಾಯಿ, ನಗರಸಭೆ ನಾಮನಿರ್ದೇಶಿದ ಸದಸ್ಯ ತಿಮ್ಮಣ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.