ಕಟ್ಟೆ ಸಮರ್ಪಕವಾಗಿಸಿ ಹಿಂದೂಗಳ ಭಾವನೆಗೆ ಗೌರವ ಕೊಡಲು ಆಗ್ರಹಕನ್ನಡಪ್ರಭ ವಾರ್ತೆ ಭಟ್ಕಳ

ಪಟ್ಟಣದ ಮುರಿನಕಟ್ಟೆ ಪ್ರದೇಶಕ್ಕೆ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ ಮಂಗಳವಾರ ಸಂಜೆ ಭೇಟಿ ನೀಡಿ ವೀಕ್ಷಿಸಿದರು.

ನಂತರ ಮಾತನಾಡಿದ ಅವರು, ಮುರಿನಕಟ್ಟೆ ಪ್ರದೇಶ ಹಿಂದೂಗಳಿಗೆ ನೂರಾರು ವರ್ಷಗಳಿಂದ ಭಾವನಾತ್ಮಕ ಶ್ರದ್ಧೆ, ಭಕ್ತಿ ಹೊಂದಿರುವ ಪ್ರದೇಶವಾಗಿದೆ. ಇಲ್ಲಿ ನೂರಾರು ವರ್ಷಗಳಿಂದ ಸಂಪ್ರದಾಯವನ್ನು ನಡೆಸಿಕೊಂಡು ಬರಲಾಗಿದೆ. ಮುರಿನಟ್ಟೆಯನ್ನು ಮೂಲ ಸ್ಥಾನದಲ್ಲಿ ನಿರ್ಮಿಸುವುದನ್ನು ಬಿಟ್ಟು ಬೇರೆ ಕಡೆ ರಸ್ತೆ ಮಧ್ಯೆ ನಿರ್ಮಿಸುವುದು ಸರಿ ಅಲ್ಲ. ಇದು ಸುಪ್ರೀಂ ಕೋರ್ಟ್‌ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಸುಪ್ರೀಂ ಕೋರ್ಟ್‌ ಆದೇಶ ಹಿಂದೂಗಳಿಗೆ ಮಾತ್ರವೇ, ಉಳಿದವರಿಗಿಲ್ಲವೇ ಎಂದ ಅವರು, ಈಗ ಮಾಡಿರುವ ಮುರಿನಕಟ್ಟೆ ಸಮರ್ಪಕವಾಗಿಲ್ಲ. ಈಗ ಕಟ್ಟೆ ವೀಕ್ಷಿಸಿದರೆ ಭಕ್ತಿ ಭಾವ ಬರುವುದಿಲ್ಲ. ಕಟ್ಟೆಯನ್ನು ಮೂಲ ಸಂಪ್ರದಾಯಕ್ಕೆ ತಕ್ಕಂತೆ ಸಮರ್ಪಕವಾಗಿ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ಸರಕಾರ, ಜಿಲ್ಲಾಡಳಿತ ಕೂಡಲೇ ಈಗ ಹೊಸದಾಗಿ ರಸ್ತೆ ಮಧ್ಯೆ ನಿರ್ಮಿಸಿರುವ ಮುರಿನಕಟ್ಟೆ ಬಗ್ಗೆ ಒಂದು ಅಡಿ ಎತ್ತರ ಮಾಡಬೇಕು ಮತ್ತು ಎತ್ತರಕ್ಕೆ ಅಳವಡಿಸಲಾದ ಗ್ರಿಲ್ ನ್ನು ಕತ್ತರಿಸಿ ಸಣ್ಣದಾಗಿ ಮಾಡಿ ಇಲ್ಲಿ ನೂರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಂಪ್ರದಾಯಕ್ಕೆ ಗೌರವ ಕೊಡುವ ಕೆಲಸ ಮಾಡಬೇಕು ಎಂದರು. ಹೊಸದಾಗಿ ನಿರ್ಮಿಸಲಾದ ಕಟ್ಟೆ ಮತ್ತು ಗ್ರಿಲ್ ಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಇಷ್ಟೊಂದು ವೆಚ್ಚ ಮಾಡಿ ಎಂದು ಹೇಳಿದವರು ಯಾರು ಎಂದು ಪ್ರಶ್ನಿಸಿದರು.

ಮುರಿನಕಟ್ಟೆಗೂ ಮುಸ್ಲಿಮರಿಗೂ ಏನು ಸಂಬಂಧವಿದೆ. ಏಕಾಏಕಿ ನಮ್ಮ ಕಟ್ಟೆಯನ್ನು ತೆಗೆದು ಹಾಕಲಾಗಿದೆ. ಕಟ್ಟೆ ತೆಗೆದು ಹಾಕಿದವರ ಮೇಲೆ ಕಠಿಣ ಕಾನೂನು ಕ್ರಮ ಆಗಬೇಕು. ಮುಂದೆ ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಮೂಲ ಪ್ರದೇಶದಲ್ಲೇ ಕಟ್ಟೆ ನಿರ್ಮಾಣ ಮಾಡುತ್ತೇವೆ ಎಂದರು. ಈ ಸಂದರ್ಭ ಶ್ರೀರಾಮ ಸೇನೆಯ ಉಪಾಧ್ಯಕ್ಷ ಜಯಂತ ನಾಯ್ಕ ಮುರುಡೇಶ್ವರ, ಪ್ರಮುಖರಾದ ರಾಜು ನಾಯ್ಕ ಮುಂತಾದವರಿದ್ದರು.