ವೇದ ಘೋಷ, ಛದ್ಮವೇಷ, ಭಜನಾ ತಂಡಗಳೊಂದಿಗೆ ಭವ್ಯಮೆರವಣಿಗೆಕನ್ನಡಪ್ರಭ ವಾರ್ತೆ ಕೋಲಾರ
ನಗರದ ಶೃಂಗೇರಿ ಶಂಕರ ಮಠದ ಶಂಕರ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಶಂಕರಜಯಂತಿಯ ಭವ್ಯ ರಥೋತ್ಸವ ಕಲಾತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂತು.ನಗರದ ಶೃಂಗೇರಿ ಶಂಕರ ಮಠ ಹಾಗೂ ಶಂಕರಸೇವಾ ಸಮಿತಿಯಿಂದ ಕಾರ್ಯಕ್ರಮದಲ್ಲಿ ಬೆಳಗ್ಗೆ ೮.೩೦ಕ್ಕೆ ಶಂಕರ ಭಗವಾತ್ಪಾದರ ಮೂರ್ತಿಯನ್ನು ಭವ್ಯವಾಗಿ ಅಲಂಕರಿಸಿದ ಪಲ್ಲಕ್ಕಿಯೊಂದಿಗೆ ಅಲಂಕರಿಸಿದ ರಥದಲ್ಲಿ ಕುಳ್ಳರಿಸಿ ನಗರದ ಮುಖ್ಯಬೀದಿಗಳಲ್ಲಿ ನಗರ ಸಂಕೀರ್ತನೆಯೊಂದಿಗೆ ಮೆರವಣಿಗೆ ನಡೆಸಲಾಯಿತು.
ವಾದ್ಯ ಮೇಳ, ಕಲಾತಂಡಗಳೊಂದಿಗೆ ಮೆರವಣಿಗೆ ಸಾಗಿ ಬಂದಿದ್ದು, ಮಾರ್ಗದುದ್ದಕ್ಕೂ ನೂರಾರು ಮಂದಿಯ ವೇದಘೋಷ, ಶಂಕರರಿಗೆ ಜೈಕಾರ ಘೋಷಣೆಗಳೊಂದಿಗೆ ರಥೋತ್ಸವ ಸಾಗಿ ಬಂತು. ಮೆರವಣಿಗೆ ನಗರದ ಕಾಲೇಜು ವೃತ್ತ, ಬ್ರಾಹ್ಮಣರ ಬೀದಿ, ದೊಡ್ಡಪೇಟೆ, ಕಾಳಮ್ಮ ಗುಡಿ ರಸ್ತೆ ಮೂಲಕ ರಥ ನಗರದಲ್ಲಿ ಸಂಚರಿಸಿ ಶಂಕರಮಠವನ್ನು ಸೇರಿತು.ನಾದ, ವೇದಘೋಷ, ಭಜನೆ, ತಾಳಗಳೊಂದಿಗೆ ಮೆರವಣಿಗೆಯಲ್ಲಿ ನಗರದ ನೂರಾರು ವಿಪ್ರ ಬಾಂಧವರು ಭಾಗವಹಿಸಿದ್ದು, ಶಂಕರರ ಪಲ್ಲಕ್ಕಿಗೆ ದಾರಿಯುದ್ದಕ್ಕೂ ಜನತೆ ಪೂಜೆ ಸಲ್ಲಿಸಿದರು.
ಶೃಂಗೇರಿ ಶಂಕರ ಸೇವಾ ಟ್ರಸ್ಟ್ ಶಂಕರಾಚಾರ್ಯರ ಜಯಂತೋತ್ಸವದ ಉಸ್ತುವಾರಿ ವಹಿಸಿದ್ದು, ಸಮಾಜಕ್ಕೆ ಶಂಕರರ ಕೊಡುಗೆಯನ್ನು ಸ್ಮರಿಸಲಾಯಿತು.
ಮಹಿಳಾ ಮಂಡಳಿ ಮತ್ತು ಶಂಕರ ಸೇವಾ ಸಮಿತಿಯಿಂದ ಸಾಮೂಹಿಕ ಶಂಕರ ಸ್ತೋತ್ರ ಗಾಯನ, ಅನ್ನದಾಸೋಹ ಏರ್ಪಡಿಸಲಾಗಿತ್ತು.
ರಥೋತ್ಸವದ ನಂತರ ಶಂಕರಮಠದಲ್ಲಿ ನಡೆದ ವೇದ ಪಾರಾಯಣದಲ್ಲಿ ಅನೇಕರು ಮಾತನಾಡಿ, ಶಂಕರರ ತತ್ವಗಳ ಪಾರಾಯಣ ನಡೆಸಿದರು.ಛದ್ಮವೇಷಧಾರಿಸ್ಪರ್ಧೆ:ಶಂಕರ ಮಠದಲ್ಲಿ ಶಂಕರ ಜಯಂತಿ ಅಂಗವಾಗಿ ಶಂಕರಾಚಾರ್ಯರು ಹಾಗೂ ಶಾರದಾಮಾತೆಯ ಛದ್ಮವೇಷಧಾರಿ ಸ್ಪರ್ಧೆಯಲ್ಲಿ ಅನೇಕ ಮಕ್ಕಳು ವೇಷ ಧರಿಸಿ ಪಾಲ್ಗೊಂಡು ಗಮನ ಸೆಳೆದರು.
ಮೆರವಣಿಗೆಯಲ್ಲಿ ಶಂಕರ ಸೇವಾ ಸಮಿತಿಯ ಅಧ್ಯಕ್ಷ ಡಾ.ಜಯರಾಂ, ಕಾರ್ಯಾಧ್ಯಕ್ಷ ವಿಷ್ಣು, ಧರ್ಮಾಧಿಕಾರಿ ಜೆ.ಎನ್.ರಾಮಕೃಷ್ಣ, ಖಜಾಂಚಿ ಮುರಳಿ ಸುಂದರ್, ಅರ್ಚಕರಾದ ಅಪ್ಪಣ್ಣಶಾಸ್ತ್ರಿ, ಸುರೇಶ್, ಪದಾಧಿಕಾರಿಗಳಾದ ವರುಣ್, ಶಿವಶಂಕರ್, ಉದಯಕುಮಾರ್, ಹಾಬಿ ರಮೇಶ್, ಪಿ.ಚಂದ್ರಪ್ರಕಾಶ್, ರಾಮಕೃಷ್ಣಭಟ್ಟರು, ರುಕ್ಮಿಣಿ ಶ್ರೀಕಂಠನ್, ಬಿಜೆಪಿಯ ಸತ್ಯನಾರಾಯಣರಾವ್ ಇದ್ದರು.