ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ನಾಡ ದೇವತೆ ಶ್ರೀಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ಅಂಗವಾಗಿ ಚಾಂಶುಗರ್ಸ್ ಕಾರ್ಖಾನೆ ಆವರಣದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ತಾಯಿಗೆ ವಿಶೇಷ ಅಲಂಕಾರದೊಂದಿಗೆ ಪೂಜಾ ಕೈಂಕರ್ಯಗಳು ಜರುಗಿದವು.ಮುಂಜಾನೆ 5.30 ರಿಂದ ರಾತ್ರಿ 8.30ರವರೆಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ ಪೂಜೆಗಳು ಹಾಗೂ ಉತ್ಸವಗಳು ವೈಭವದಿಂದ ಜರುಗಿದರೇ ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸಿ ತಾಯಿ ದರ್ಶನ ಪಡೆದರು.
ದೇವಾಲಯದ ಪ್ರಧಾನ ಅರ್ಚಕ ಕಾರ್ತಿಕ ಆರಾಧ್ಯ ಅವರ ನೇತೃತ್ವದಲ್ಲಿ ಅಷ್ಟವಿಧ ಅಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ, ವಿಶೇಷ ಪೂಜೆ, ಸಹಸ್ರನಾಮಾರ್ಚನೆ ಸೇರಿದಂತೆ ನಾನಾ ಧಾರ್ಮಿಕ ವಿಧಿವಿಧಾನಗಳು ಸಂಗವಾಗಿ ನೆರವೇರಿದವು.ಶ್ರೀಚಾಮುಂಡೇಶ್ವರಿ ತಾಯಿಗೆ ಅರಿಶಿನ ಸೇರಿದಂತೆ ವಿವಿಧ ಬಗೆಯ ಹೂವುಗಳು ಹಾಗೂ ಆಭರಣಗಳಿಂದ ಅಲಂಕರಿಸಿ ಮಹಾಮಂಗಳಾರತಿ ಸಲ್ಲಿಸಲಾಯಿತು. ಈ ವೇಳೆ ಅಣ್ಣೂರಿನ ಉಪನ್ಯಾಸಕಿ ಜ್ಯೋತಿ ಸಂದೀಪ್ ಅವರು ಭಕ್ತರಿಗೆ ಪ್ರಸಾದ ವಿನಿಯೋಗದ ನೇತೃತ್ವ ವಹಿಸಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿ ತಾಯಿಗೆ ಧನ್ಯತೆ ಮೆರದರು.
ಸಂಜೆ ಗೋಧೂಳಿ ಲಗ್ನದಲ್ಲಿ ಉತ್ಸವ ಮೂರ್ತಿಯ ಭವ್ಯ ಪಲ್ಲಕ್ಕಿ ಉತ್ಸವ, ಊಯಾಲೋತ್ಸವ ಹಾಗೂ ವಿಶೇಷ ಮೆರವಣಿಗೆ ನಡೆಯಿತು. ಕಾರ್ಖಾನೆ ಆವರಣದ ಸುತ್ತ ಉತ್ಸವ ಮೂರ್ತಿಯನ್ನು ಮೆರವಣಿಗೆ ನಡೆಸಲಾಯಿತು. ರಾತ್ರಿ ಶಯನೋತ್ಸವ ಹಾಗೂ ಶಾಂತಿ ಸಾಧನೆಯೊಂದಿಗೆ ದಿನದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಈ ವೇಳೆ ಚಾಂಶುಗರ್ಸ್ ಕಾರ್ಖಾನೆ ಹಿರಿಯ ಉಪಾಧ್ಯಕ್ಷ ಆರ್.ಮಣಿ, ಹಿರಿಯ ಪ್ರಧಾನ ವ್ಯವಸ್ಥಾಪಕ ಸೆಂಥಿಲ್, ಪ್ರಧಾನ ವ್ಯವಸ್ಥಾಪಕ ರವಿ, ಸಹಾಯಕ ಪ್ರಧಾನ ವ್ಯವಸ್ಥಾಪಕ ಮಣಿಮಾರನ್, ಷಣ್ಮುಗಂ, ಅಧಿಕಾರಿಗಳಾದ ನಿತೇಶ್, ನಿಂಗಯ್ಯ ಸೇರಿದಂತೆಸಾವಿರಾರು ಭಕ್ತರು ಭಾಗವಹಿಸಿದ್ದರು.ಆಷಾಢ ಶುಕ್ರವಾರ: ನಾಳೆ ಶ್ರೀ ಪಟ್ಟಲದಮ್ಮಗೆ ವಿಶೇಷ ಪೂಜೆ
ಮಂಡ್ಯ: ಆಷಾಢ ಮಾಸದ ಕೊನೆಯ ಶುಕ್ರವಾರದ ಅಂಗವಾಗಿ ತಾಲೂಕಿನ ತುಂಬಕೆರೆ ಶ್ರೀಪಟ್ಟಲದಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಆ.೭ರಂದು ಹಮ್ಮಿಕೊಳ್ಳಲಾಗಿದೆ. ತುಂಬಕೆರೆ ಗ್ರಾಮದಿಂದ ದೇವಸ್ಥಾನಕ್ಕೆ ಕುಂಭ ಕಳಸ ಮತ್ತು ಮೀಸಲು ನೀರು ತರಲಾಗುವುದು. ಬೆಳಗ್ಗೆ ೮ಕ್ಕೆ ಪಂಚಾಮೃತಾದಿ ಅಭಿಷೇಕ, ಬೆಳಗ್ಗೆ ೧೦ ಗಂಟೆಗೆ ತುಂಬಕೆರೆ ಗ್ರಾಮದಿಂದ ದೇವಿಗೆ ತಂಬಿಟ್ಟಿನಾರತಿ, ವೀರಗಾಸೆ ಕುಣಿತ, ಶ್ರೀ ಪಟ್ಟಲದಮ್ಮ ದೇವಿಯ ಪೂಜಾ ಮೆರವಣಿಗೆ ಏರ್ಪಡಿಸಲಾಗಿದೆ. ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ಬಳಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ತುಂಬಕೆರೆ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇಗುಲದ ಆಡಳಿತ ಮಂಡಳಿ ಮನವಿ ಮಾಡಿದೆ.