ಶ್ರೀಕಾಲಭೈರವೇಶ್ವರ ತಿರುಗಣಿ ಉತ್ಸವ ಮತ್ತು ಪುಷ್ಕರಣಿಯಲ್ಲಿ ನಡೆದ ತೆಪ್ಪೋತ್ಸವ

| Published : Mar 25 2024, 12:47 AM IST

ಶ್ರೀಕಾಲಭೈರವೇಶ್ವರ ತಿರುಗಣಿ ಉತ್ಸವ ಮತ್ತು ಪುಷ್ಕರಣಿಯಲ್ಲಿ ನಡೆದ ತೆಪ್ಪೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಜಾತ್ರಾ ಮಹೋತ್ಸವವು ಈ ಬಾರಿ ಅತ್ಯಂತ ವಿಜೃಂಭಣೆ ಮತ್ತು ವೈಭವಯುತವಾಗಿ ನೆರವೇರಿದ ಹಿನ್ನಲೆಯಲ್ಲಿ ನಾಡಿನ ವಿವಿಧೆಡೆಗಳಿಂದ ಭಕ್ತ ಸಮೂಹ ಸಾಗರೋಪಾದಿಯಲ್ಲಿ ಹರಿದುಬಂದಿತ್ತು. ಕ್ಷೇತ್ರದ ರಥದ ಬೀದಿ, ಕಲ್ಯಾಣಿ ಬೀದಿ ಸೇರಿದಂತೆ ಶ್ರೀಮಠದ ಬೆಟ್ಟದ ತಪ್ಪಲಿನ ಇಕ್ಕೆಲಗಳಲ್ಲಿ ಭಕ್ತರು ತುಂಬಿ ತುಳುಕಿತ್ತಿದ್ದ ದೃಶ್ಯ ಕಂಡುಬಂದಿತು.

ಕನ್ನಡಪ್ರಭ ವಾರ್ತೆ ನಾಗಮಂಗಲತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನಮಠದಲ್ಲಿ 9 ದಿನಗಳ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ರಾತ್ರಿ ಶ್ರೀಕಾಲಭೈರವೇಶ್ವರ ತಿರುಗಣಿ ಉತ್ಸವ ಮತ್ತು ಪುಷ್ಕರಣಿಯಲ್ಲಿ ನಡೆದ ತೆಪ್ಪೋತ್ಸವವನ್ನು ಅಪಾರಸಂಖ್ಯೆಯ ಭಕ್ತರು ವೀಕ್ಷಿಸಿ ಕಣ್ತುಂಬಿಕೊಂಡರು.

ವಿವಿಧ ಬಗೆಯ ಹೂವು ಮತ್ತು ವಿದ್ಯುತ್‌ ದೀಪಗಳಿಂದ ಸಿಂಗರಿಸಿದ್ದ ತೆಪ್ಪೋತ್ಸವಕ್ಕೆ ಪೂಜೆ ಸಲ್ಲಿಸಿದ ನಿರ್ಮಲಾನಂದನಾಥ ಶ್ರೀಗಳು ತೆಪ್ಪದಲ್ಲಿ ಕುಳಿತು ನೆರೆದಿದ್ದ ಭಕ್ತಾದಿಗಳಿಗೆ ದರ್ಶನಾಶೀರ್ವಾದ ನೀಡಿದರು. ಚಿನ್ನದ ಕಿರೀಟ ಧರಿಸಿ ಸರ್ವಾಲಂಕಾರ ಭೂಷಿತರಾಗಿ ತೆಪ್ಪೋತ್ಸವದಲ್ಲಿ ಕುಳಿತ್ತಿದ್ದ ಶ್ರೀಗಳನ್ನು ನೋಡಿ ಕಣ್ತುಂಬಿಕೊಂಡ ಭಕ್ತರು ತಮ್ಮ ಭಕ್ತಿಭಾವ ಸಮರ್ಪಿಸಿದರು.

ತೆಪ್ಪೋತ್ಸವ ಆರಂಭಗೊಳ್ಳುತ್ತಿದ್ದಂತೆ ಬಣ್ಣ ಬಣ್ಣದ ಪಟಾಕಿಗಳು ಸಿಡಿದು ಬಾನಂಗಳದಲ್ಲಿ ಚಿತ್ತಾರಗಳು ಬಿಡಿಸಿದವು. ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ಆದಿಚುಂಚನಗಿರಿ ಮಹಾಸಂಸ್ಥಾನಮಠ ಈ ಬಾರಿ ಜಾತ್ರಾ ಮಹೋತ್ಸವದಲ್ಲಿ ನೆರೆದಿದ್ದ ಭಕ್ತರಿಗೆ ವಿಶೇಷ ಮೆರಗು ನೀಡಿತ್ತು.

ಜಾತ್ರಾ ಮಹೋತ್ಸವವು ಈ ಬಾರಿ ಅತ್ಯಂತ ವಿಜೃಂಭಣೆ ಮತ್ತು ವೈಭವಯುತವಾಗಿ ನೆರವೇರಿದ ಹಿನ್ನಲೆಯಲ್ಲಿ ನಾಡಿನ ವಿವಿಧೆಡೆಗಳಿಂದ ಭಕ್ತ ಸಮೂಹ ಸಾಗರೋಪಾದಿಯಲ್ಲಿ ಹರಿದುಬಂದಿತ್ತು. ಕ್ಷೇತ್ರದ ರಥದ ಬೀದಿ, ಕಲ್ಯಾಣಿ ಬೀದಿ ಸೇರಿದಂತೆ ಶ್ರೀಮಠದ ಬೆಟ್ಟದ ತಪ್ಪಲಿನ ಇಕ್ಕೆಲಗಳಲ್ಲಿ ಭಕ್ತರು ತುಂಬಿ ತುಳುಕಿತ್ತಿದ್ದ ದೃಶ್ಯ ಕಂಡುಬಂದಿತು.

ಚಾಮರಾಜನಗರ - ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶ್ರೀ ಕ್ಷೇತ್ರದ ಮುಖ್ಯದ್ವಾರದಿಂದ ತುಮಕೂರು ಹಾಗೂ ಮೈಸೂರು ಮಾರ್ಗಗಳ ಎರಡೂ ಬದಿಯಲ್ಲಿ ಕಿಲೋಮೀಟರ್‌ವರೆಗೆ ವಾಹನಗಳು ಭಕ್ತರನ್ನು ಹೊತ್ತುತಂದು ನಿಂತಿದ್ದವು. ಜಾತ್ರಾ ಮಹೋತ್ಸವ ದೃಶ್ಯಾವಳಿಗಳನ್ನು ಭಕ್ತಾದಿಗಳು ವೀಕ್ಷಿಸಲು ದೊಡ್ಡ ದೊಡ್ಡ ಎಲ್.ಇ.ಡಿ. ಪರದೆಗಳನ್ನು ಹತ್ತಾರು ಸ್ಥಳದಲ್ಲಿ ಅಳವಡಿಸಲಾಗಿತ್ತು.

ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ:

ಜಾತ್ರಾ ಮಹೋತ್ಸವದ ಪ್ರಯುಕ್ತ ಭಾನುವಾರ ರಾತ್ರಿ ಬಿಜಿಎಸ್ ಸಭಾ ಭವನ ಹಾಗೂ ಶ್ರೀಮಠದ ಕೆಳಭಾಗದಲ್ಲಿರುವ ಮೂರು ಸ್ಥಳಗಳಲ್ಲಿ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡು ನೆರೆದಿದ್ದ ಭಕ್ತ ಸಮೂಹದ ಭಕ್ತಿ ಸಂತಸವನ್ನು ಹೆಚ್ಚಿಸಿದವು. ಜಾತ್ರೆಗೆ ಆಗಮಿಸುವ ಎಲ್ಲ ಭಕ್ತರಿಗೆ ಅಡಚಣೆಯಾಗದಂತೆ ಹತ್ತಾರು ಸ್ಥಳಗಳಲ್ಲಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಜಾತ್ರೆಗೆ ಗಣ್ಯರು, ಸಾಧುಸಂತರು ಹಾಗೂ ಸಹಸ್ರಾರು ಸಂಖ್ಯೆ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಸುರಕ್ಷತೆ ಹಾಗೂ ವಾಹನಗಳ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾ ಎಸ್ಪಿ ಎನ್.ಯತೀಶ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು.