ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ರಾಮಭಕ್ತ ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ. ಪರಮೇಶ್ವರ್ ಸುಳ್ಳು ಹೇಳಿರುವುದು ಸಾಬೀತಾಗಿದೆ. ಅವರು ರಾಜ್ಯದ ಕ್ಷಮೆ ಕೋರಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಆಗ್ರಹಪಡಿಸಿದರು.
ಶ್ರೀಕಾಂತ್ ಪೂಜಾರಿ ಮೇಲೆ ಇದ್ದುದು ಒಟ್ಟು 16 ಕೇಸುಗಳು, ಇದರಲ್ಲಿ 12 ಕೇಸುಗಳು ಖುಲಾಸೆಯಾಗಿವೆ. ಮೂರು ಪ್ರಕರಣದಲ್ಲಿ ಮುಚ್ಚಳಿಕೆ ಬರೆಸಿಕೊಂಡು ಪೊಲೀಸರೇ ಬಿಡುಗಡೆ ಮಾಡಿದ್ದಾರೆ. ಉಳಿದ ಒಂದು ಪ್ರಕರಣ ಎಂದರೆ ಅದೇ 1992ರಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಹೋರಾಟದ ಪ್ರಕರಣ. ಇದರಲ್ಲಿ ಶ್ರೀಕಾಂತ್ ಪೂಜಾರಿ ಅವರು ನಾಪತ್ತೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ, ಆ ಬಳಿಕ ಮೂರು ಬಾರಿ ಶ್ರೀಕಾಂತ್ ಪೂಜಾರಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ, ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದಾರೆ. ಪ್ರಕರಣ ಹೀಗಿರುವಾಗ ಅವರ ಮೇಲೆ 16 ಪ್ರಕರಣಗಳಿವೆ ಎಂದು ಸಾರ್ವಜನಿಕವಾಗಿ ಹೇಳುವ ಮೂಲಕ ತಮ್ಮ ಪೂರ್ವಾಗ್ರಹಪೀಡಿತ ಮನಸ್ಸನ್ನು ಅನಾವರಣಗೊಳಿಸಿದ್ದಾರೆ. ಈ ರೀತಿ ಸುಳ್ಳು ಹೇಳಿರುವುದಕ್ಕಾಗಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜ್ಯದ ಜನತೆಯ ಕ್ಷಮೆ ಕೋರಬೇಕು. ಪೂಜಾರಿ ಮೇಲಿರುವ ಈ ಎಲ್ಲ ಕೇಸುಗಳು ಖುಲಾಸೆ ಆಗಿವೆ. ಈ ಪ್ರಕರಣವೇ ಸಿದ್ದರಾಮಯ್ಯ ಎಂದರೆ ಸುಳ್ಳು ರಾಮಯ್ಯ ಎಂಬುದನ್ನು ಸಾಬೀತು ಮಾಡಿದೆ ಎಂದು ವ್ಯಂಗ್ಯವಾಡಿದರು.ದತ್ತಪೀಠ ಪ್ರಕರಣ:
ದತ್ತಪೀಠಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, 2017ನೇ ಇಸವಿಯ ಕೇಸನ್ನು 7 ವರ್ಷದ ನಂತರ ಮತ್ತೆ ತೆಗೆದುಕೊಂಡು ಗೊಂದಲ ಹುಟ್ಟಿಸಿದ್ದಾರೆ. ಇದು ಸರಿಯಲ್ಲ. ಸರ್ಕಾರ ಹೇಗೆ ರೀ ಓಪನ್ ಮಾಡಿದೆ ಎಂಬುವುದು ಗೊತ್ತಿದೆ. ಹಿಂದೂ ಕಾರ್ಯಕರ್ತರಿಗೆ, ರಾಮಭಕ್ತರಿಗೆ ಕಿರುಕುಳ ನೀಡುವುದೇ ಕಾಂಗ್ರೆಸ್ನು ಕೆಲಸವಾಗಿದೆ. ಸಂತೋಷ್ ಕೇಸ್ನಲ್ಲಿ ನನ್ನ ಪಾತ್ರ ಇಲ್ಲ ಎಂದು ಕೋರ್ಟ್ ಹೇಳಿದ್ದರೂ ಪುನಃ ಅದೇ ಮಾತನಾಡುತ್ತಿದ್ದಾರೆ. ಅವರಿಗೆ ಕೋರ್ಟ್ ಬಗ್ಗೆ ಕೂಡ ಅವರಿಗೆ ಗೌರವಿಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಜಗದೀಶ್, ರತ್ನಾಕರ ಶೆಣೈ, ಚಂದ್ರಶೇಖರ್, ಕೆ.ವಿ.ಅಣ್ಣಪ್ಪ, ಮಾಲತೇಶ್ ಇದ್ದರು.
- - -ಕೋಟ್ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರು ರಾಮ ಮಂದಿರಕ್ಕೆ ದೇಣಿಗೆ ಕೊಟ್ಟಿರಬಹುದು. ದೇಣಿಗೆ ಕೊಟ್ಟವರು ಕೋಟ್ಯಂತರ ಜನರಿದ್ದಾರೆ. ಇವರಿಬ್ಬರೇ ಏನೂ ಅಲ್ಲ. ಆಗ ಇವರಿಬ್ಬರು ಮೋದಿ ಭಕ್ತರಾಗಿದ್ದರು. ಈಗ ಮಸೀದಿ ಕಟ್ಟಲು ದೇಣಿಗೆ ಕೊಡಲು ಮುಂದಾಗಿದ್ದಾರೆ
- ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ- - - ಟಾಪ್ ಕೋಟ್ಮಂತ್ರಾಕ್ಷತೆಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಈಶ್ವರಪ್ಪ ಅಂತ ಇರಲ್ಲ. ಅದು ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ, ಅದನ್ನು ಹಂಚುತ್ತಿದ್ದೇವೆ. ಈ ಕಾಂಗ್ರೆಸ್ಸಿಗರಿಗೆ ಏನು ಮಾಡಬೇಕು ಎಂದು ಗೊತ್ತಿಲ್ಲ. ವಿಲಿವಿಲಿ ಒದ್ದಾಡುತ್ತಿದ್ದಾರೆ. ಗಲಭೆ ಮಾಡಿ, ಲೋಕಸಭಾ ಚುನಾವಣೆ ಗೆಲ್ಲಬಹುದು ಎಂದು ಮಾಡಿದ್ದಾರೆ. ಈ ಸುಳ್ಳುಬುರುಕರನ್ನು ಜನರು ನಂಬುವುದಿಲ್ಲ
- ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ- - - -ಪೋಟೋ:
ಶಿವಮೊಗ್ಗದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.