ಶೃಂಗೇರಿ-ಹಾಗಲಗಂಚಿ ಸಂಪರ್ಕ ರಸ್ತೆ ದುರಸ್ತಿಗೆ ಒತ್ತಾಯ

| Published : Jun 26 2024, 12:38 AM IST

ಸಾರಾಂಶ

ತಾಲೂಕಿನ ಗಡಿಕಲ್ಲು, ಹಂಚಿನಕೊಡಿಗೆ, ಹಾಗಲಗಂಚಿ ಸಂಪರ್ಕ ರಸ್ತೆ ಕಳೆದ ಹಲವು ವರ್ಷಗಳಿಂದ ಡಾಂಬಾರೀಕರಣಗೊಳ್ಳದೇ ಗ್ರಾಮಸ್ಥರ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ. ಅಲ್ಲದೆ ಇತ್ತೀಚೆಗೆ ಭಾರೀ ಮಳೆಯಿಂದಾಗಿ ರಸ್ತೆ ಕೊಚ್ಚಿಕೊಂಡು ಹೋಗಿದ್ದು ಗ್ರಾಮಸ್ಥರು ನರಕ ಯಾತನೆ ಅನುಭವಿಸುವಂತಾಗಿದೆ.ಈ ರಸ್ತೆ ಮೇಗೂರು, ನೆಮ್ಮಾರು ಸುತ್ತಮುತ್ತಲ ಊರುಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಕಳೆದ ಅನೇಕ ವರ್ಷಗಳಿಂದ ಡಾಂಬರೀಕರಣಗೊಳ್ಳದೇ ಈಗ ಮಣ್ಣು ರಸ್ತೆಯಾಗಿ ಮಾರ್ಪಟ್ಟಿದೆ.

ಕನ್ನಡಪ್ರಭವಾರ್ತೆ ಶೃಂಗೇರಿ

ತಾಲೂಕಿನ ಗಡಿಕಲ್ಲು, ಹಂಚಿನಕೊಡಿಗೆ, ಹಾಗಲಗಂಚಿ ಸಂಪರ್ಕ ರಸ್ತೆ ಕಳೆದ ಹಲವು ವರ್ಷಗಳಿಂದ ಡಾಂಬಾರೀಕರಣಗೊಳ್ಳದೇ ಗ್ರಾಮಸ್ಥರ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ. ಅಲ್ಲದೆ ಇತ್ತೀಚೆಗೆ ಭಾರೀ ಮಳೆಯಿಂದಾಗಿ ರಸ್ತೆ ಕೊಚ್ಚಿಕೊಂಡು ಹೋಗಿದ್ದು ಗ್ರಾಮಸ್ಥರು ನರಕ ಯಾತನೆ ಅನುಭವಿಸುವಂತಾಗಿದೆ.ಈ ರಸ್ತೆ ಮೇಗೂರು, ನೆಮ್ಮಾರು ಸುತ್ತಮುತ್ತಲ ಊರುಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಕಳೆದ ಅನೇಕ ವರ್ಷಗಳಿಂದ ಡಾಂಬರೀಕರಣಗೊಳ್ಳದೇ ಈಗ ಮಣ್ಣು ರಸ್ತೆಯಾಗಿ ಮಾರ್ಪಟ್ಟಿದೆ.

ಕಳೆದ ಕೆಲದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ಹೊಂಡ-ಗುಂಡಿಗಳು ಬಿದ್ದಿವೆ. ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಇಲ್ಲಿಗೆ ಬಾಡಿಗೆ ವಾಹನಗಳು ಬರಲು ಹಿಂದೇಟು ಹಾಕುತ್ತಿರುವುದರಿಂದ ಗ್ರಾಮಸ್ಥರಿಗೆ ಇನ್ನಷ್ಟು ಸಂಕಷ್ಟ ಉಂಟಾಗುತ್ತಿದೆ. ಗ್ರಾಮಸ್ಥರು ಶ್ರಮದಾನದ ಮೂಲಕ ಹೊಂಡ-ಗುಂಡಿಗಳಿಗೆ ಮಣ್ಣನ್ನು ತುಂಬಿಸಿ ದುರಸ್ತಿ ಮಾಡಿಕೊಂಡು ಸಂಚರಿಸುತ್ತಿದ್ದು, ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಈ ಬಗ್ಗೆ ಗ್ರಾಮಸ್ಥರಾದ ಮನು, ರವಿ ಜೋಗಿಬೈಲು, ಅರವಿಂದ ಹಾಗಲಗಂಚಿ ಮತ್ತಿತರರು ಮಾತನಾಡಿ, ನಮಗೆ ರಸ್ತೆ ದುರಸ್ತಿಯಾಗದಿರುವುದರಿಂದ ಓಡಾಡಲು ಸಾಕಷ್ಟು ತೊಂದರೆಯಾಗುತ್ತಿದೆ. ಈಗಾಗಲೇ ಅನೇಕ ಬಾರಿ ಗಮನಕ್ಕೆ ತಂದು, ಮನವಿ ಮಾಡಿದ್ದರೂ ರಸ್ತೆ ದುರಸ್ತಿಯಾಗಿಲ್ಲ. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ರಸ್ತೆ ದುರಸ್ತಿಗಾಗಿ ಕಳೆದ ಬಾರಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಕೂಡ ಮಾಡಿದ್ದರು. ಇನ್ನಾದರೂ ಸಂಬಂಧಪಟ್ಟ ಇಲಾಖೆ ರಸ್ತೆ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.--------------

25 ಶ್ರೀ ಚಿತ್ರ 1-

ಶೃಂಗೇರಿ ತಾಲೂಕಿನ ಗಡಿಕಲ್ಲು ಹಂಚಿನಕೊಡಿಗೆ -ಹಾಗಲಗಂಚಿ ಸಂಪರ್ಕ ರಸ್ತೆ ಹಾಳಾಗಿದ್ದು, ಹೊಂಡಗುಂಡಿಗಳಿಗೆ ಮಣ್ಣು ತುಂಬುತ್ತಿರುವ ಗ್ರಾಮಸ್ಥರು.