ಸಾರಾಂಶ
ಸುದ್ದಿ ಗೋಷ್ಠಿಯಲ್ಲಿ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ಮಾಹಿತಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಜಂಟಿ ಸರ್ವೆ ಕಾರ್ಯ ಆಗುವುವರೆಗೆ ರೈತರು ಸಾಗುವಳಿ ಮಾಡುತ್ತಿರುವ ಅರಣ್ಯ ಹಾಗೂ ಕಂದಾಯ ಭೂಮಿ ತೆರವು ಕಾರ್ಯಾಚರಣೆ ಸ್ಥಗಿತ ಮಾಡಬೇಕು, ಅರಣ್ಯ ಹಾಗೂ ಕಂದಾಯ ಕಾಯ್ದೆ ಹೆಸರಿನಲ್ಲಿ ಮಲೆನಾಡಿನ ರೈತರ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿ ಆ. 17 ರ ಶನಿವಾರ ಮಲೆನಾಡು ರೈತ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಪಕ್ಷಾತೀತವಾಗಿ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕು ಹಾಗೂ ಖಾಂಡ್ ಹೋಬಳಿಗೆ ಬಂದ್ ಕರೆ ನೀಡಿದ್ದೇವೆ ಎಂದು ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎನ್ ನಾಗೇಶ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶನಿವಾರ ಬೆಳಿಗ್ಗೆ ಆಯಾ ತಾಲೂಕು ಕೇಂದ್ರಗಳಿಂದ ರೈತರು ವಾಹನದ ಮೆರವಣಿಗೆಯಲ್ಲಿ ಬಂದು ಕೊಪ್ಪ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ 10ಕ್ಕೆ ಸೇರಲಿದ್ದೇವೆ. 11 ಗಂಟೆಯಿಂದ ಕೊಪ್ಪ ಟೌನ್ ಹಾಲ್ ನಿಂದ ಬಸ್ ನಿಲ್ದಾಣವರೆಗೆ ಪಾದ ಯಾತ್ರೆ ನಡೆಯಲಿದೆ. ನಂತರ ಪ್ರತಿಭಟನಾ ಸಭೆ ನಡೆಯಲಿದೆ. ಪ್ರತಿಭಟನಾ ಸಭೆಯಲ್ಲಿ ಭಾಗವಹಿಸುವಂತೆ ಲೋಕಸಭಾ ಸದಸ್ಯರು, ಶಾಸಕರು, ಎಲ್ಲಾ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳಿಗೆ, ರೈತ ಮುಖಂಡರಿಗೆ ಆಹ್ವಾನ ನೀಡಿದ್ದೇವೆ ಎಂದರು.ಶನಿವಾರ ಬೆಳಿಗ್ಗೆ 8 ರಿಂದ ಸಂಜೆವರೆಗೆ ಬಂದ್ಗೆ ಕರೆ ನೀಡಿದ್ದೇವೆ. ಆಸ್ಪತ್ರೆ, ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್, ಹಾಲಿನ ಅಂಗಡಿ ಬಿಟ್ಟು ಎಲ್ಲಾ ಅಂಗಡಿ, ಹೋಟೆಲ್, ಬಸ್ಸು, ಶಾಲಾ ಕಾಲೇಜು ಬಂದ್ ಮಾಡಿ ರೈತರಿಗೆ ಬೆಂಬಲ ನೀಡಬೇಕು. ಬಂದ್ ಸಮಯದಲ್ಲಿ ಎಲ್ಲರೂ ಶಾಂತಿ ಯುತವಾಗಿ ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಸುದ್ದಿ ಗೋಷ್ಠಿಯಲ್ಲಿ ಮಲೆನಾಡು ರೈತ ಹಿತ ರಕ್ಷಣಾ ಸಮಿತಿ ಉಪಾಧ್ಯಕ್ಷ ದೇವಂತರಾಜ್, ಕಾರ್ಯದರ್ಶಿ ಪುರುಶೋತ್ತಮ್, ಸದಸ್ಯರಾದ ಎನ್.ಶೇಖರ್, ಎಲಿಯೇಸ್, ಅಭಿಲಾಸ್, ರೈತ ಮುಖಂಡ ಗೇರ್ ಬೈಲು ನಟರಾಜ ಇದ್ದರು.