ಸಾರಾಂಶ
ಗ್ರಾಮೀಣ ಪ್ರದೇಶಗಳು ಮುಳುಗಿವೆ ಕಗ್ಗತ್ತಲಲ್ಲಿ.
ಕನ್ನಡಪ್ರಭ ವಾರ್ತೆ, ಶೃಂಗೇರಿತಾಲೂಕಿನಾದ್ಯಂತ ಗುರುವಾರವೂ ಗಾಳಿ ಮಳೆ ಆರ್ಭಟದಿಂದ ಗುಡ್ಡ, ಭೂಮಿ ಕುಸಿತ ಮುಂದುವರಿದು ಜನ ಕಂಗಾಲಾಗಿರುವ ನಡುವೆ ಕೆರೆಕಟ್ಟೆ, ಕಿಗ್ಗಾ, ನೆಮ್ಮಾರು, ಮೆಣಸೆ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕಳೆದೆರೆಡು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು ಕಗ್ಗತ್ತಲಲ್ಲಿ ದಿನ ದೂಡುವಂತಾಗಿದೆ.
ಭಾರೀ ಮಳೆಗೆ ತುಂಬಿರುವ ತುಂಗಾನದಿ ಅಪಾಯದ ಮಟ್ಟ ಮೀರಿದೆ. ಆನೆಗುಂದ, ಸಂಕ್ಲಾಪುರ, ನೆಮ್ಮಾರು, ತನಿಕೋಡು ಸೇರಿದಂತೆ ಹಲವೆಡೆ ಗುಡ್ಡ , ಭೂಮಿ ಕುಸಿಯುತ್ತಿದೆ. ಕುಸಿದ ಗುಡ್ಡ ರಸ್ತೆ ಮೇಲೆ ಬೀಳುತ್ತಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗಿದೆ. ಗಾಳಿ ಆರ್ಭಟಕ್ಕೆ ಮರಗಳು ಉರುಳಿ ರಸ್ತೆ, ವಿದ್ಯುತ್ ಕಂಬ, ಲೈನ್ ಗಳ ಮೇಲೆ ಬೀಳುತ್ತಿವೆ. ಇದರಿಂದ ವಿದ್ಯುತ್ ಲೈನ್ಗೆ ಹಾನಿಯಾಗಿ ವಿದ್ಯುತ್ ವ್ಯತ್ಯಯಕ್ಕೂ ಕಾರಣವಾಗಿದೆ.ಎತ್ತರ ಪ್ರದೇಶದ ಕೆಲ ಮನೆಗಳು ಗುಡ್ಡ ಕುಸಿತದಂತಾ ಸಮಸ್ಯೆಯಿಂದ ಅಪಾಯದ ಅಂಚಿನಲ್ಲಿವೆ. ರಸ್ತೆ ಸಂಪರ್ಕವೂ ಕಡಿತಗೊಳ್ಳುತ್ತಿದೆ. ಗಾಳಿಗೆ ಕೆಲವೆಡೆ ಮನೆ, ಕೊಟ್ಟಿಗೆಗಳ ಶೀಟ್, ಛಾವಣಿಗಳು ಹಾರಿ ಹೋಗಿ ಎಲ್ಲಿ ಯಾವಾಗ, ಏನಾಗುತ್ತದೆ ಎಂಬ ಆತಂಕ ಎದುರಾಗಿದೆ.
ವಿದ್ಯಾರಣ್ಯಪುರ ವ್ಯಾಪ್ತಿಯ ರಾ.ಹೆ 169 ರ ಮಂಗಳೂರು- ಶಿವಮೊಗ್ಗ ಸಂಪರ್ಕ ತ್ಯಾವಣ ಕೆಎಸ್ಆರ್ ಟಿಸಿ ಡಿಪೋ ಬಳಿ ಗುಡ್ಡದ ಮಣ್ಣು ರಸ್ತೆಯ ಮೇಲೆ ಉರುಳಿ ರಸ್ತೆಯೆಲ್ಲ ಕೆಸರುಮಯವಾಗಿ ಸಂಚಾರಕ್ಕೂ ಅಡ್ಡಿಯಾಗಿದೆ. ಗ್ರಾಮೀಣ ಪ್ರದೇಶದ ಕೆಲವೆಡೆ ಹಳ್ಳ ಉಕ್ಕಿ ಹರಿದು ಕಾಲು ಸಂಕಗಳು ತುಂಡಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ.ಸತತ ಮಳೆಯಿಂದ ತಾಲೂಕಿನ ಪ್ರಮುಖ ನದಿಗಳಾದ ತುಂಗೆ, ನಳಿನಿ, ನಂದಿನಿ ತುಂಬಿ ಕಳೆದೆರೆಡು ದಿನಗಳಿಂದ ತಗ್ಗು ಪ್ರದೇಶಗಳು, ಹೊಲಗೆದ್ದೆಗಳು ಜಲಾವೃತಗೊಂಡಿವೆ. ಮುಳುಗಡೆಯಾದ ಶ್ರೀಮಠದ ತುಂಗಾ ನದಿ ದಡದ ಕಪ್ಪೆ ಶಂಕರ ದೇವಾಲಯಕ್ಕೆ ಇನ್ನು ನೀರಿನಿಂದ ಮುಕ್ತಿ ಸಿಕ್ಕಿಲ್ಲ. ಗಾಳಿಗೆ ಅಡಕೆ, ಬಾಳೆ ತೋಟದ ಮರಗಳು ಧರೆಗುರುಳುತ್ತಿದ್ದು ಹಾನಿಯುಂಟಾಗಿದೆ.
26 ಶ್ರೀ ಚಿತ್ರ 3-ಶೃಂಗೇರಿ ತಾಲೂಕಿನ ಸಂಕ್ಲಾಪುರ ಬಳಿ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿರುವುದು.
26 ಶ್ರೀ ಚಿತ್ರ 3-ಶೃಂಗೇರಿ ತಾಲೂಕಿನಲ್ಲಿ ಭಾರಿ ಗಾಳಿ ಮಳೆಯ ಆರ್ಭಟದಿಂದ ಮನೆಯೊಂದರ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದು ಹಾನಿಯುಂಟಾಗಿರುವುದು.