ಶೃಂಗೇರಿ: ಶೃಂಗೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಸಂಜೆ ಸುಪ್ರಿಂ ಕೋರ್ಟ್‌ನಲ್ಲಿ ರಾಜೇಗೌಡರ ಪರ ಮಹತ್ವದ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪಟ್ಟಣದ ವೆಲ್ ಕಂ ಗೇಟ್‌ನಲ್ಲಿ ಸಮಾವೇಶಗೊಂಡ ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ರಮೇಶ್ ಭಟ್, ಇದು ಸಂವಿಧಾನಕ್ಕೆ,ಸತ್ಯಕ್ಕೆ ಸಂದ ಜಯವಾಗಿದೆ. ಯಾರೇ ಆಗಲಿ ನ್ಯಾಯಾಲಯದ ತೀರ್ಪಿಗೆ ತಲೆ ಬಾಗಬೇಕು. ನಮಗೆ ನ್ಯಾಯಾಲಯ,ನ್ಯಾಯದ ಮೇಲೆ ನಂಬಿಕೆ ಇದೆ. ಕಾನೂನಿಗೆ ಗೌರವ ನೀಡಬೇಕು ಎಂದರು.

ನಾವು ಕಾನೂನಾತ್ಮಕವಾಗಿ ಹೋರಾಟ ಮಾಡಿದ್ದೇವೆ. ನಮಗೆ ಅನ್ಯಾಯವಾಗಿದೆ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದೇವು, ಚುನಾವಣಾ ಆಯೋಗದ ಅಂಚೆಮತಗಳ ಮರುಎಣಿಕೆ ಪಲಿತಾಂಶಕ್ಕೆ ತಡೆ ನೀಡಿದ್ದಲ್ಲದೇ, ರಾಜೇಗೌಡರೇ ಕ್ಷೇತ್ರದ ಶಾಸಕರಾಗಿ ಮುಂದುವರಿಕೆಗೆ ಮಹತ್ವದ ಆದೇಶ ನೀಡಿರುವುದು ನಮ್ಮೆಲ್ಲರ ಗೆಲುವಾಗಿದೆ. ಇಷ್ಟು ದಿನಗಳ ಕಾಲ ಗೊಂದಲ, ಆತಂಕದಲ್ಲಿದ್ದ ಕಾರ್ಯಕರ್ತರಲ್ಲಿ ಉತ್ಸಾಹ, ಹುಮ್ಮಸ್ಸು ಮೂಡಿದೆ ಎಂದರು.

ಪಟ್ಟಣದ ಭಾರತೀ ಬೀದಿ,ಸಂತೇಮಾರುಕಟ್ಟೆ, ಬಸ್ ನಿಲ್ದಾಣ ಸರ್ಕಲ್‌ನಲ್ಲಿ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ ಶಾಸಕ ಟಿ.ಡಿ.ರಾಜೇಗೌಡರ ಪರ ಘೋಷಣೆ ಕೂಗಿದರು. ನೆಮ್ಮಾರು, ತಾಲೂಕಿನ ವಿವಿಧೆಡೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ತ್ರಿಮೂರ್ತಿ, ದೇವೇಂದ್ರ ಕಾವಡಿ, ದಿನೇಶ್ ಹೆಗ್ಡೆ, ವೆಂಕಟೇಶ್ ನೂರಾರು ಕಾರ್ಯಕರ್ತರು ಇದ್ದರು.


ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ವಿಜಯೋತ್ಸವ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರ ಶಾಸಕ ಸ್ಥಾನ ಕಳೆದುಕೊಳ್ಳುವುದಕ್ಕೆ ಕಾರಣವಾಗಿದ್ದ, ಅಂಚೆಮತ ಮರುಎಣಿಕೆ, ಫಲಿತಾಂಶ ಸೇರಿದಂತೆ ಇಡೀ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್‌ ಸೋಮವಾರ ತಡೆಯಾಜ್ಞೆ ನೀಡುತ್ತಿದ್ದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.ಕಳೆದ ಮೂರು ವರ್ಷದಿಂದ ಶಾಸಕರಾಗಿದ್ದ ಟಿ.ಡಿ.ರಾಜೇಗೌಡ ಮೇ 2 ರಂದು ಹೈಕೋರ್ಟ್‌ ಆದೇಶದನ್ವಯ ನಡೆದ ಅಂಚೆ ಮತ ಮರು ಎಣಿಕೆಯಲ್ಲಿ ಹಿನ್ನಡೆ ಅನುಭವಿಸಿ ಶಾಸಕ ಸ್ಥಾನ ಕಳೆದುಕೊಳ್ಳುವಂತಾಗಿತ್ತು. ಅದನ್ನು ಪ್ರಶ್ನಿಸಿ ಟಿ.ಡಿ.ರಾಜೇಗೌಡ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, 2023ರ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆಮತ ಎಣಿಕೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ನಡೆಸಲಾದ ವಿಚಾರಣೆ, ಆದೇಶ ಹಾಗೂ ಚುನಾವಣಾ ಆಯೋಗ ನಡೆಸಿದ ಅಂಚೆ ಮತಗಳ ಮರು ಎಣಿಕೆ, ಫಲಿತಾಂಶ, ಬಿಜೆಪಿ ಅಭ್ಯರ್ಥಿಗೆ ನೀಡಲಾದ ಪ್ರಮಾಣ ಪತ್ರ ಸೇರಿದಂತೆ ಒಟ್ಟಾರೆ ಪ್ರಕ್ರಿಯೆ ತಡೆಯಾಜ್ಞೆ ನೀಡಿದೆ. ಹೀಗಾಗಿ, ಮತ್ತೆ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡರೇ ಶೃಂಗೇರಿ ಶಾಸಕರಾದಂತೆ ಆಗಿದೆ.ಈ ಹಿನ್ನೆಲೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಪಾಳ್ಯೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಸೋಮವಾರ ‘ಸತ್ಯಮೇವ ಜಯತೆ’ ಹೆಸರಿನಲ್ಲಿ ಮತ್ತೆ ಟಿಡಿಆರ್‌ ಶಾಸಕರು ಎಂಬ ಘೋಷಣೆಯೊಂದಿಗೆ ವಿಜಯೋತ್ಸವ ಆಚರಿಸಿದ್ದಾರೆ.10 ದಿನದಲ್ಲಿ ಮತ್ತೆ ಟಿಡಿಆರ್‌ ಶಾಸಕ:ಮೇ 2ರಂದು ಅಂಚೆಮತ ಮರುಎಣಿಕೆ ಆಗಲಿದೆ. ಮೇ 3 ರ ತಡ ರಾತ್ರಿ ಚುನಾವಣಾ ಆಯೋಗದಿಂದ ಬಿಜೆಪಿ ಅಭ್ಯರ್ಥಿ ಡಿ.ಎನ್‌.ಜೀವರಾಜ್‌ ಅವರಿಗೆ ಶಾಸಕರ ಪ್ರಮಾಣ ಪತ್ರ ನೀಡುವ ಬಗ್ಗೆ ಇ ಮೇಲ್‌ ಸಂದೇಶ ರವಾನೆ ಆಗಲಿದೆ. ಮೇ 6ರಂದು ವಿಧಾನಸೌಧದಲ್ಲಿ ಸ್ಪೀಕರ್‌ ಯು.ಟಿ.ಖಾದರ್‌ ಪ್ರಮಾಣ ವಚನ ಬೋಧಿಸಿದ್ದರು. ಮೇ 11 ರಂದು ಸುಪ್ರೀಂ ಕೋರ್ಟ್‌ ಇದೀಗ ಇಡೀ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿರುವುದರಿಂದ ಮೇ 3ರಿಂದ ಮಾಜಿ ಆಗಿದ್ದ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಮತ್ತೆ ಹಾಲಿ ಶಾಸಕರಾಗಿದ್ದಾರೆ.ಇಂಥದ್ದೊಂದು ಅಪರೂಪದ ಸನ್ನಿವೇಶಕ್ಕೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರ ಸಾಕ್ಷಿಯಾಗಿದೆ. ಒಂದು ವಾರದಿಂದ ಕ್ಷೇತ್ರದಲ್ಲಿ ಆಣೆ, ಪ್ರಮಾಣದ್ದೇ ಮಾತುಅಂಚೆ ಮತಗಳ ಮರುಎಣಿಕೆ ಬಳಿಕ ಫಲಿತಾಂಶವೇ ಬದಲಾದ ಹಿನ್ನೆಲೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದಾದ್ಯಂತ ಆಣೆ ಪ್ರಮಾಣ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಒಂದೆಡೆ ಬಿಜೆಪಿ ನಾಯಕರು ಮರು ಮತ ಎಣಿಕೆಯಲ್ಲಿ ಯಾವುದೇ ಲೋಪವಾಗಿಲ್ಲ. ಎಣಿಕೆ ಪಾರದರ್ಶಕವಾಗಿ ನಡೆದಿದೆ ಎಂದು ವಿವಿಧ ದೇವಾಲಯಗಳಲ್ಲಿ ಆಣೆ ಪ್ರಮಾಣ ಮಾಡಿದ್ದರು. ಇದರ ಬೆನ್ನಿಗೆ ಕಾಂಗ್ರೆಸ್‌ನ ರಾಜೇಗೌಡ ಸೇರಿದಂತೆ ವಿವಿಧ ಮುಖಂಡರು ಮರು ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಮಾಡಿ ದೇವಾಲಯಗಳಲ್ಲಿ ಆಣೆ ಪ್ರಮಾಣ ಮಾಡಿದ್ದರು.ಹಿಂದೆ ನಡೆದ ಮತ ಎಣಿಕೆಯಲ್ಲಿ ಅಂಚೆ ಮತಗಳು ಯಾವ ಅಭ್ಯರ್ಥಿಗೆ ಎಷ್ಟು ಬಂದಿವೆಯೋ ಅವು ಮಾನ್ಯ ಎಂಬ ಬಗ್ಗೆ ಅಂದು ಮತ ಎಣಿಕೆ ವೇಳೆ ಇದ್ದ ಅಭ್ಯರ್ಥಿಗಳು ಹಾಗೂ ಕೆಲ ಅಭ್ಯರ್ಥಿಗಳ ಪರವಾಗಿ ಬಂದಿದ್ದ ಏಜೆಂಟರು ಸಹಿ ಮಾಡಿದ್ದಾರೆ. ಹೀಗಿರುವಾಗ ಅಕ್ರಮ ನಡೆಸಿದವರು ಯಾರು ಎಂಬುದನ್ನು ದೇವರೇ ನಿರ್ಧರಿಸಲಿ ಎಂದು ಕಾಂಗ್ರೆಸ್ ನಾಯಕರು ದೇವಾಲಯಗಳಲ್ಲಿ ಆಣೆ ಪ್ರಮಾಣ ಮಾಡಿದ್ದರು. ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಎಣಿಕೆಗೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಅರ್ಜಿ ಸೇರಿದಂತೆ ಎಲ್ಲ ಪ್ರಕ್ರಿಯೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಟಿ.ಡಿ.ರಾಜೇಗೌಡರು ಮತ್ತೆ ಶಾಸಕರಾಗಿ ಮುಂದುವರೆಯುವುದಕ್ಕೆ ಅವಕಾಶ ಸಿಕ್ಕಿದೆ. ಶೃಂಗೇರಿ ಕ್ಷೇತ್ರದ ಜನರಿಗೆ ಈ ಮೂಲಕ ನ್ಯಾಯ ಸಿಕ್ಕಿದೆ..ಸುಧೀರ್ ಕುಮಾರ್ ಮುರೊಳ್ಳಿ, ಕಾಂಗ್ರೆಸ್ ಮುಖಂಡ, ವಕೀಲ. ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರು ಎಣಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಅದನ್ನು ಪಾಲನೆ ಮಾಡುತ್ತೇವೆ. ಮೇ 21ಕ್ಕೆ ಮತ್ತೆ ವಿಚಾರಣೆ ನಡೆಯಲಿದೆ, ಆಗ ಬಿಜೆಪಿಯ ಅಭ್ಯರ್ಥಿ ಪರವಾದ ಆದೇಶ ಬರಲಿದೆ ಎಂಬ ಆಶಾಭಾವನೆ ಇದೆ.ಕಲ್ಮಡಪ್ಪ ಪ್ರಧಾನ ಕಾರ್ಯದರ್ಶಿ, ಬಿಜೆಪಿ ರಾಜ್ಯ ರೈತ ಮೋರ್ಚಾ.