ದಾಸ ಪರಂಪರೆಗೆ ಶ್ರೀಪಾದರಾಜರ ಕೊಡುಗೆ ಅಪಾರ

| Published : Jun 13 2025, 02:38 AM IST

ಸಾರಾಂಶ

ಶ್ರೀಪಾದರಾಜರು 64 ಖಾದ್ಯಗಳನ್ನು ಭಗವಂತನಿಗೆ ನೈವೇದ್ಯ ಅರ್ಪಿಸುತ್ತಿದ್ದರು. ಇವರು ದಾಸಕೂಟದ ಮೂಲ ಎಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಯಾವುದೇ ಸಾಂಪ್ರದಾಯಿಕ ಹರಿಕಥಾ ಪ್ರವಚನದ ಆರಂಭದಲ್ಲಿ ಹಾಡುವ ಈ ಕೆಳಗಿನ ಸ್ತೋತ್ರದಲ್ಲಿ ಅವರ ಹೆಸರು ಅಗ್ರಸ್ಥಾನದಲ್ಲಿರುತ್ತದೆ.

ಕನಕಗಿರಿ:

ಶ್ರೀಪಾದರಾಜರು ದಾಸ ಪರಂಪರೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪಂ. ಪಾಂಡುರಂಗ ರಾಜಪುರೋಹಿತ ಹೇಳಿದರು.

ತಾಲೂಕಿನ ನವಲಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀಭೋಗಾಪುರೇಶ ದೇವಸ್ಥಾನದಲ್ಲಿ ಹುಲಿಹೈದರ ರಾಜಪುರೋಹಿತ ಕುಟುಂಬದಿಂದ ಹಮ್ಮಿಕೊಂಡಿದ್ದ ಶ್ರೀಪಾದರಾಜರ ಮಧ್ಯಾರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ಶ್ರೀಪಾದರು 64 ಖಾದ್ಯಗಳನ್ನು ಭಗವಂತನಿಗೆ ನೈವೇದ್ಯ ಅರ್ಪಿಸುತ್ತಿದ್ದರು. ಇವರು ದಾಸಕೂಟದ ಮೂಲ ಎಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಯಾವುದೇ ಸಾಂಪ್ರದಾಯಿಕ ಹರಿಕಥಾ ಪ್ರವಚನದ ಆರಂಭದಲ್ಲಿ ಹಾಡುವ ಈ ಕೆಳಗಿನ ಸ್ತೋತ್ರದಲ್ಲಿ ಅವರ ಹೆಸರು ಅಗ್ರಸ್ಥಾನದಲ್ಲಿರುತ್ತದೆ. ‘ರಂಗ ವಿಠಲ’ ಎಂಬ ಅಂಕಿತದಲ್ಲಿ ಶ್ರೀಪಾದರಾಜರು ಹಲವು ಕೃತಿಗಳನ್ನು ರಚಿಸಿ ಜನಮಾನಸದಲ್ಲಿ ಉಳಿದಿದ್ದಾರೆ ಎಂದರು.

ದೇಗುಲದ ಪ್ರಾಂಗಣ ಸುತ್ತಲೂ ಶ್ರೀಪಾದರಾಯರ ಭಾವಚಿತ್ರವನ್ನು ಭಜನೆಯೊಂದಿಗೆ ಮೆರವಣಿಗೆ ಮಾಡಲಾಯಿತು. ಶ್ರೀರಾಘವೇಂದ್ರಸ್ವಾಮಿ ಭಜನಾ ಮಂಡಳಿಯಿಂದ ಭಜನಾ ಪದಗಳನ್ನು ಹಾಡಿ, ಕುಣಿದು ಕುಪ್ಪಳಿಸಿದರು.

ಶ್ರೀಭೋಗಾಪುರೇಶ ಮುಖ್ಯ ಪ್ರಾಣ ದೇವರಿಗೆ ಮಧು ಅಭಿಷೇಕ, ಪಂಚಾಮೃತ ಅಭಿಷೇಕ, ಗಂಧ ಲೇಪನ, ಪುಷ್ಪಾರ್ಚನೆ ನೈವೈದ್ಯ ನಡೆಯಿತು. ವೆಂಕಟೇಶ ರಾಜಪುರೋಹಿತ, ನರಸಿಂಗ ರಾಜಪುರೋಹಿತ, ಸುರೇಶರೆಡ್ಡಿ ಮಹಲಿನಮನಿ, ಭೀಮರೆಡ್ಡಿ ಓಣಿಮನಿ, ಶ್ರೀನಿವಾಸರೆಡ್ಡಿ, ಪರಂಧಾಮರೆಡ್ಡಿ ಬೀರಳ್ಳಿ, ರಾಮಣ್ಣ ಗುಂಜಳ್ಳಿ, ಮಂಜುನಾಥ ಕಮ್ಮಾರ, ಹನುಮಂತರೆಡ್ಡಿ ಮಹಲಿನಮನಿ, ಭೀಮರಾವ್ ಮರಾಠಿ, ಕಲೀಲಸಾಬ ತಿಪ್ಯಾಳ್, ಈರಣ್ಣ ಶ್ರೇಷ್ಠಿ, ಶರಣಪ್ಪ ಕೊರೆಡ್ಡಿ ಸೇರಿದಂತೆ ಹುಲಿಹೈದರ ರಾಜಪುರೋಹಿತ ಹಾಗೂ ಹೈದ್ರಾಬಾದಿನ ರಾಜಪುರೋಹಿತ ಕುಟುಂಬದವರು, ಬ್ರಾಹ್ಮಣ ಸಮಾಜದ ಮಹಿಳೆಯರು ಇದ್ದರು.