ಸಾರಾಂಶ
ಕುಕನೂರು: ಸತತ 9 ವರ್ಷದಿಂದ ಸಾಮೂಹಿಕ ವಿವಾಹ ಕಾರ್ಯ ಮಾಡುತ್ತಿರುವ ರೈತ ಯುವಕ ಪರಶುರಾಮ ಕಾರ್ಯ ನಿಜಕ್ಕೂ ಮೆಚ್ಚುಗೆ ಪಾತ್ರರಾಗಿದ್ದಾರೆ ಎಂದು ಮಾಜಿ ಡಿಸಿಎಂ ಶ್ರೀರಾಮುಲು ಹೇಳಿದರು.
ತಾಲೂಕಿನ ಯಡಿಯಾಪೂರ ಗ್ರಾಮದಲ್ಲಿ ಗ್ರಾಮದ ರೈತ ಯುವಕ ಪರಶುರಾಮ ಸಿದ್ದಪ್ಪ ಮ್ಯಾಗೇರಿ ಅವರಿಂದ ಜರುಗಿದ 9ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರವನ್ನೂದ್ದೇಶಿಸಿ ಮಾತನಾಡಿದ ಅವರು, ನನಗೆ ದೇವರು ಹಣ ನೀಡಿದ್ದಾನೆ. ಸಾಮೂಹಿಕ ವಿವಾಹ ಮಾಡಿದ್ದೇನೆ. ಆದರೆ ಬಡ ಯುವಕ ಸತತ 9 ವರ್ಷದಿಂದ ಸಾಮೂಹಿಕ ವಿವಾಹ ಮಾಡುತ್ತಾ ಬಂದಿರುವುದು ಸಾಮಾನ್ಯದ ಮಾತಲ್ಲ. ಮನೆಯಲ್ಲಿ ಒಂದು ಮದುವೆ ಮಾಡುವುದು ಎಷ್ಟು ಕಷ್ಟಕರ. ಅಷ್ಟೇ ಕಷ್ಟಕರ ಸಾಮೂಹಿಕ ಮದುವೆ ತಯಾರಿ ಸಹ ಆಗಿರುತ್ತದೆ.
ಸಾಮೂಹಿಕ ವಿವಾಹ ಕಾರ್ಯವನ್ನು ರೈತ ಪರಶುರಾಮ ಸ್ವಂತ ಹಣದಲ್ಲಿ ಮಾಡುತ್ತಾ ಬಂದಿದ್ದಾನೆ. ಬಡವನಿಂದ ಇಂತಹ ಕಾರ್ಯ ಆಗುತ್ತಿರುವುದು ನಿಜಕ್ಕೂ ಮೆಚ್ಚುವ ಕಾರ್ಯ. ಪರಶುರಾಮ ತಗಡಿನ ಮನೆಯಲ್ಲಿದ್ದಾನೆ. ಆತನು ಜಮೀನಿನಲ್ಲಿ ಬೀಜೋತ್ಪಾದನೆ ಕೃಷಿ ಕೆಲಸ ಮಾಡಿ ಬಂದ ಹಣದಲ್ಲಿ ಸಮಾಜದ ಸಹಭಾಗಿತ್ವದಲ್ಲಿ ಸಾಮೂಹಿಕ ವಿವಾಹ ಕಾರ್ಯ ಮಾಡುತ್ತಾ ಬಂದಿದ್ದಾನೆ. ಆತನ ಕಾರ್ಯ ಕೇಳಿ ನಾನು ಸಹ ಈ ವರ್ಷ ಸಾಮೂಹಿಕ ವಿವಾಹ ಕಾರ್ಯದಲ್ಲಿ ಭಾಗಿಯಾಗಿದ್ದೇನೆ ಎಂದರು.
ಸಾಧ್ಯವಾದರೆ ಬದುಕಿನಲ್ಲಿ ಒಮ್ಮೆಯಾದರೂ ಸಾಮೂಹಿಕ ವಿವಾಹ ಕಾರ್ಯ ಮಾಡಬೇಕು.ಇದರಿಂದ ಸಾಮಾಜಿಕ ಅಭಿವೃದ್ಧಿ ಸಾಧ್ಯ. ನವ ದಂಪತಿಗಳ ಬಾಳು ಹಸನವಾಗಿರಬೇಕು. ಮಕ್ಕಳನ್ನು ಶಿಕ್ಷಣವಂತರನ್ನಾಗಿಸಬೇಕು ಎಂದರು.
11 ಜೋಡಿ ಸಾಮೂಹಿಕ ವಿವಾಹ ಜರುಗಿದವು. ಶ್ರೀ ಪ್ರಭುಲಿಂಗ ದೇವರು ಸಾನ್ನಿಧ್ಯ ವಹಿಸಿದ್ದರು. ಆರ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಗೌರಾ ಬಸವರಾಜ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಅಂದಪ್ಪ ಜವಳಿ, ಶಂಕರಗೌಡ ಇತರರಿದ್ದರು.
ಪರಶುರಾಮ ಕಾರ್ಯಕ್ಕೆ ಫೀದಾ ಆದ ರಾಮುಲು: ಯಡಿಯಾಪೂರ ಗ್ರಾಮದ ಪರಶುರಾಮ ಸತತ 9 ನೇ ವರ್ಷ ಸಾಮೂಹಿಕ ವಿವಾಹ ಕಾರ್ಯ ಮಾಡುತ್ತಾ ಬಂದಿರುವುದನ್ನು ಕಂಡು ಶ್ರೀರಾಮುಲು ಮಂತ್ರಮುಗ್ದರಾದರು. ಆತನನ್ನು ತಮ್ಮ ತೊಡೆಯ ಮೇಲೆ ಕುಡಿಸಿಕೊಂಡು ಬೆನ್ನು ತಟ್ಟಿದರು.