ಸಾರಾಂಶ
- ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕ್ಯಾನ್ಸರ್ ತಪಾಸಣೆ ಶಿಬಿರ - - - ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ಜನತೆಯ ಆರೋಗ್ಯ ಸಬಲೀಕರಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು 2019 ರಿಂದ ಎಸ್ಎಸ್ ಕೇರ್ ಟ್ರಸ್ಟ್ ಮೂಲಕ ಆಯೋಜಿಸುತ್ತಾ ಬಂದಿದ್ದೇವೆ. ನಮ್ಮೆಲ್ಲರ ನಡೆ ಆರೋಗ್ಯದ ಕಡೆ ಧ್ಯೇಯ ವಾಕ್ಯದಂತೆ ಕೆಲಸ ಮಾಡಲಾಗುತ್ತಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ಕೆ.ಆರ್. ರಸ್ತೆಯ ಶಾಮನೂರು ಶಿವಶಂಕರಪ್ಪ ಆಸ್ಪತ್ರೆಯಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣ ಕಚೇರಿ, ಎನ್ಸಿಡಿ ಕೋಶ ಹಾಗೂ ಎಸ್ಎಸ್ ಕೇರ್ ಟ್ರಸ್ಟ್ ಆಶ್ರಯದಲ್ಲಿ ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮ ಹಿನ್ನೆಲೆ ಆಯೋಜಿಸಿದ್ದ ಉಚಿತ ಸಕ್ಕರೆ ಕಾಯಿಲೆ, ರಕ್ತದೊತ್ತಡ ಹಾಗೂ ಕ್ಯಾನ್ಸರ್ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಜನರಿಗೆ ಸಮರ್ಪಕ ಆರೋಗ್ಯ ಸೇವೆ ಸೇರಿದಂತೆ ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾವ ರೀತಿ ಕೆಲಸ ಮಾಡಬಹುದು ಎಂಬ ಬಗ್ಗೆ ಆರು ವರ್ಷಗಳಿಂದ ಸಭೆ ನಡೆಸಿ ಸಿದ್ಧತೆ ಕೈಗೊಳ್ಳಲಾಗಿದೆ. ಎಸ್ಎಸ್ ಕೇರ್ ಟ್ರಸ್ಟ್ನಡಿ ಈಗಾಗಲೇ ಟಿ.ಬಿ. ಬಗ್ಗೆ ಅರಿವು ಮೂಡಿಸಲು ಚಿಕಿತ್ಸೆ ನೀಡಲು ಜಾಥಾ ಮಾಡಲಾಗಿದೆ. ಎಸ್ಎಸ್ ಜನರಲ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯುನಿಟ್ ಇದ್ದು. ಟ್ರಸ್ಟ್ನಿಂದ ಇಲ್ಲಿಯವರೆಗೂ 20 ಸಾವಿರ ಉಚಿತ ಡಯಾಲಿಸಿಸ್ ಮಾಡಲಾಗಿದೆ. ಒಂದು ಬಾರಿ ಡಯಾಲಿಸಿಸ್ ಗೆ ಕನಿಷ್ಠ ಮೂರು ಸಾವಿರ ವೆಚ್ಚ ತಗಲುತ್ತದೆ. ಆದರೆ ನಮ್ಮ ಟ್ರಸ್ಟ್ ಮೂಲಕ ಸಾರ್ವಜನಿಕರಿಗೆ ಅದರಲ್ಲೂ ಬಡಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತವಾಗಿ ಡಯಾಲಿಸಿಸ್ ಮಾಡಲಾಗುತ್ತಿದೆ. ಇಲ್ಲಿ ಸುಮಾರು 16 ಡಯಾಲಿಸ್ ಯಂತ್ರಗಳನ್ನು ಅಳವಡಿಸಲಾಗಿದೆ ಎಂದರು.
ಸಂಸದೆ ಆದಾಗಿನಿಂದಲೂ ಕ್ಷೇತ್ರದಲ್ಲಿ ಆರೋಗ್ಯ ಶಿಬಿರಗಳ ಆಯೋಜಿಸಲಾಗುತ್ತಿದೆ. ಕ್ಯಾನ್ಸರ್ ಬಗ್ಗೆ ಸ್ಪಂದನಾ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಈಗಾಗಲೇ 180 ಆಶಾ ಕಾರ್ಯಕರ್ತರೊಂದಿಗೆ ಕಾರ್ಯಾಗಾರ ಮಾಡಲಾಗಿದ್ದು, ಅವರಿಗೆ ಸ್ತನದ ಕ್ಯಾನ್ಸರ್, ಗರ್ಭದ ಕ್ಯಾನ್ಸರ್ ಕುರಿತು ಮಾಹಿತಿ ಹಾಗೂ ಆರೋಗ್ಯಕರ ಜೀವನಶೈಲಿ ಕುರಿತು ಆರಂಭಿಕ ಹಂತದಲ್ಲಿ ತಡೆಗಟ್ಟುವ ಬಗ್ಗೆ ಅರಿವು ಮೂಡಿಸಲಾಗಿದೆ. 3000ಕ್ಕೂ ಹೆಚ್ಚು ಮಹಿಳೆಯರು ಕ್ಯಾನ್ಸರ್ ತಪಾಸಣೆ ಮಾಡಿಸಿಕೊಂಡಿದ್ದಾರೆ ಎಂದು ವಿವರಿಸಿದರು.ಡಿಎಚ್ಒ ಡಾ.ಷಣ್ಮುಖಪ್ಪ, ಡಾ.ರಾಘವನ್, ಡಾ.ದೇವರಾಜ್, ಡಾ.ಶುಕ್ಲಾ ಶೆಟ್ಟಿ, ಡಾ.ಸೋಮಶೇಖರ್, ಡಾ.ಅನುರೂಪ, ಡಾ.ನಂದೀಶ್ವರ್, ಡಾ.ಲತಾ ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
- - --29ಕೆಡಿವಿಜಿ42, 43:
ದಾವಣಗೆರೆಯ ಎಸ್ಎಸ್ ಜನರಲ್ ಆಸ್ಪತ್ರೆಯಲ್ಲಿ ಉಚಿತ ಸಕ್ಕರೆ ಖಾಯಿಲೆ, ರಕ್ತದೊತ್ತಡ ಹಾಗೂ ಕ್ಯಾನ್ಸರ್ ತಪಾಸಣಾ ಶಿಬಿರಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಿ ಮಾತನಾಡಿದರು.