ಗುಂಪು ವಿಮೆ ಮೊತ್ತದ (ಜಿ.ಐ.ಎಸ್) ಬಿಲ್ ಮಾಡಿಕೊಡಲು ₹3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಸೋಮವಾರ ಹಣ ಪಡೆಯುವಾಗ ಹಾವೇರಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಅಕ್ಕಮ್ಮ ಎನ್. ಬಿದರೇರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಹಾವೇರಿ: ಗುಂಪು ವಿಮೆ ಮೊತ್ತದ (ಜಿ.ಐ.ಎಸ್) ಬಿಲ್ ಮಾಡಿಕೊಡಲು ₹3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಸೋಮವಾರ ಹಣ ಪಡೆಯುವಾಗ ಹಾವೇರಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಅಕ್ಕಮ್ಮ ಎನ್. ಬಿದರೇರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.ಮೇ 31ರಂದು ವಯೋನಿವೃತ್ತಿ ಹೊಂದಿದ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ನಿವೃತ್ತ ಎಫ್ಡಿಎ ಮಹದೇವ ಹನುಮಂತಪ್ಪ ಜೇಕಿನಕಟ್ಟಿ ಎಂಬ ದೂರುದಾರರು ಗುಂಪು ವಿಮೆ ಮೊತ್ತದ ಬಿಲ್ ಮಾಡಿಕೊಡಲು ತಿಳಿಸಿದ್ದಾರೆ. ಜಿ.ಐ.ಎಸ್ ಬಿಲ್ ಮಾಡಿಕೊಡಲು ಆರೋಪಿತೆ ₹3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಸೋಮವಾರ ಬೆಳಗ್ಗೆ ಹಾವೇರಿ ಜಿಲ್ಲಾಡಳಿತ ಭವನದಲ್ಲಿರುವ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯಲ್ಲಿ ಹಣವನ್ನು ಪಡೆದುಕೊಳ್ಳುವಾಗ ಲೋಕಾಯುಕ್ತ ಅಧಿಕಾರಿಗಳು ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದಾರೆ. ಆರೋಪಿತರನ್ನು ವಶಕ್ಕೆ ಪಡೆದು, ತನಿಖೆಯನ್ನು ಮುಂದುವರೆಸಿದ್ದಾರೆ.ದಾವಣಗೆರೆಯ ಕರ್ನಾಟಕ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. ತನಿಖಾಧಿಕಾರಿಗಳಾದ ಲೋಕಾಯುಕ್ತ ಡಿವೈಎಸ್ಪಿ ಸಿ.ಮಧುಸೂದನ್ ಸೇರಿದಂತೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.