ಸಾರಾಂಶ
ಗದಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಗದಗ ವಿಭಾಗದಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ವಾ.ಕ.ರ.ಸಾ ಗದಗ ವಿಭಾಗೀಯ ಕಚೇರಿಯ ಎದುರಿಗೆ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕೆ.ಎಸ್.ಆರ್.ಟಿ.ಸಿ ಸ್ಟ್ಯಾಫ್ ಆ್ಯಂಡ್ ವರ್ಕರ್ಸ್ ಯುನಿಯನ್ ಅಧ್ಯಕ್ಷ ಶಾಂತಣ್ಣ ಮುಳವಾಡ ಮಾತನಾಡಿ, ಈ ಹಿಂದೆ ಜಂಟಿ ಸಮಿತಿಯ ಮುಖಂಡರು ಮುಖ್ಯಮಂತ್ರಿ, ಸಾರಿಗೆ ಸಚಿವರನ್ನು ಭೇಟಿಯಾಗಿ ಎಲ್ಲ ಸಮಸ್ಯೆ ಹಾಗೂ ಬೇಡಿಕೆಗಳ ಕುರಿತು ಮನವಿ ಮಾಡಿಕೊಂಡಿದ್ದಾರೆ. ಫೆ.೧೪ರಂದು ಬೆಂಗಳೂರಿನಲ್ಲಿ ಜಂಟಿ ಕ್ರಿಯಾ ಸಮಿತಿಯು ದಿ.ಗುಂಡೂರಾವ್ ಹಾಲ್ದಲ್ಲಿ ಸಭೆ ನಡೆಸಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಲಾಗಿದೆ.ನಮ್ಮ ಬೇಡಿಕೆಗಳಾದ ೨೦೨೪ ಜ.೧ರಿಂದ ಜಂಟಿ ಕ್ರಿಯಾ ಸಮಿತಿ ಜೊತೆ ಚರ್ಚಿಸಿ ಮೂಲ ವೇತನಕ್ಕೆ ಶೇ.೨೫ ರಷ್ಟು ಹೆಚ್ಚಿಸಿ ಇತರ ಸೌಲಭ್ಯಗಳನ್ನು ನೀಡಬೇಕು. ೧-೧-೨೦೨೦ ರಿಂದ ೨೮-೮-೨೦೨೩ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ವೇತನ ಪರಿಷ್ಕರಣೆ ಬಾಕಿ ಜೊತೆಗೆ ನಿವೃತ್ತಿ ಸೌಲಭ್ಯಗಳ ಬಾಕಿ ಹಣ ಪಾವತಿಸಬೇಕು. ಹಾಲಿ ಸಿಬ್ಬಂದಿಗೆ ೨೦೨೦ಜ.೧ರಿಂದ ೩೮ ತಿಂಗಳ ವೇತನ ಪರಿಷ್ಕರಿಸಿ, ಬಾಕಿ ಉಳಿದ ವೇತನವನ್ನು ಕೂಡಲೇ ಪಾವತಿಸಬೇಕು. ಶಕ್ತಿ ಯೋಜನೆ ಅನುದಾನವನ್ನು ಕೂಡಲೇ ಸಾರಿಗೆ ನಿಗಮಗಳಿಗೆ ಪಾವತಿಸಬೇಕು. ಶಕ್ತಿ ಯೋಜನೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಹೆಚ್ಚು ಬಸ್ಸುಗಳನ್ನು ನೀಡಬೇಕು, ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಬೇಕು. ಇತರ ಬೇಡಿಕೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ, ಸರಕಾರಕ್ಕೆ ಕಳುಹಿಸುವದಾಗಿ ಹೇಳಿದರು.ಈ ವೇಳೆ ಪ್ರಧಾನ ಕಾರ್ಯದರ್ಶಿ ಗೋಪಾಲ ರಾಯರು, ಅಖಿಲ ಕರ್ನಾಟಕ ರಸ್ತೆ ಸಾರಿಗೆ ನೌಕರರ ಮಹಾಮಂಡಳ ಅಧ್ಯಕ್ಷ ಬಿ.ಎಚ್.ರಾಮೇನಹಳ್ಳಿ, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಅಯ್ಯನಗೌಡರ, ಕ.ರಾ.ರ.ಸಾ ಸಂಸ್ಥೆ ಪಜಾ/ಪಪಂ ನೌಕರರ ಸಂಘದ ಉಪಾಧ್ಯಕ್ಷ ನಾಗರಾಜ ಬಳ್ಳಾರಿ, ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕೊಪ್ಪಳ, ಎಂ.ಆಂಜನೇಯ, ಎಸ್.ಎಫ್.ಸಂಗಣ್ಣವರ ಹಾಗೂ ಇತರರು ಇದ್ದರು.