ಉಪ್ಪಾರ ಸಮಾಜಕ್ಕೆ ಮೀಸಲಾತಿ ಕೊಡಿಸಲು ಪ್ರಮಾಣಿಕ ಪ್ರಯತ್ನ: ಬಾಲಚಂದ್ರ ಜಾರಕಿಹೊಳಿ

| Published : Aug 06 2024, 12:34 AM IST / Updated: Aug 06 2024, 12:35 AM IST

ಉಪ್ಪಾರ ಸಮಾಜಕ್ಕೆ ಮೀಸಲಾತಿ ಕೊಡಿಸಲು ಪ್ರಮಾಣಿಕ ಪ್ರಯತ್ನ: ಬಾಲಚಂದ್ರ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡಲಗಿ ಕ್ರಾಸ್‌ನಲ್ಲಿ ನೂತನವಾಗಿ ನಿರ್ಮಿಸಿದ ಮಹರ್ಷಿ ಭಗೀರಥ ಮೂರ್ತಿಯನ್ನು ಅನಾವರಣಗೊಳಿಸಿ ಬಳಿಕ ಮಹರ್ಷಿ ಉಪ್ಪಾರ ಸಮಾಜದ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಕಳೆದ ಹಲವಾರು ವರ್ಷಗಳಿಂದ ಭಗೀರಥ ಉಪ್ಪಾರ ಸಮಾಜ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದು, ಈ ಸಮಾಜಕ್ಕೆ ಸಿಗಬೇಕಿರುವ ಸರ್ಕಾರದ ಮೀಸಲಾತಿ ದೊರಕಿಸಿಕೊಡುವ ಸಂಬಂಧ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದರೆ ನಾವೂ ಕೂಡ ಕೇಂದ್ರ ಮಟ್ಟದಲ್ಲಿ ಒತ್ತಡ ಹಾಕಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಸೋಮವಾರ ಪಟ್ಟಣದ ಹೊರವಲಯದಲ್ಲಿರುವ ಮೂಡಲಗಿ ಕ್ರಾಸ್‌ನಲ್ಲಿ ನೂತನವಾಗಿ ನಿರ್ಮಿಸಿದ ಮಹರ್ಷಿ ಭಗೀರಥ ಮೂರ್ತಿಯನ್ನು ಅನಾವರಣಗೊಳಿಸಿ ನಂತರ ಸತ್ಯಭಾಮಾ ರುಕ್ಮೀಣಿ ಬಾಳಪ್ಪ ಹಂದಿಗುಂದ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ಉಪ್ಪಾರ ಸಮಾಜದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಗೀರಥ ಉಪ್ಪಾರ ಸಮಾಜದ ಬೇಡಿಕೆಗಳಿಗೆ ನಾವು ಸದಾ ಬದ್ಧರಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ತಿಳಿಸಿದರು.

ಅನೇಕ ವರ್ಷಗಳಿಂದ ಈ ಸಮಾಜ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಮೀಸಲಾತಿಯ ಹೋರಾಟ ಮಾಡುತ್ತಿದೆ. ಈ ಹೋರಾಟದಲ್ಲಿಯೂ ನಾವು ಸಕ್ರಿಯರಾಗಿ ತೊಡಗಿಕೊಂಡು ಭಗೀರಥ ಸಮಾಜಕ್ಕೆ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ಮುಂದಿನ ದಿನಗಳಲ್ಲಿಯೂ ಸಹ ಈ ಸಮಾಜಕ್ಕೆ ಸಿಗಬೇಕಿರುವ ಎಲ್ಲ ಸೌಲಭ್ಯ ಕಲ್ಪಿಸಿಕೊಡಲು ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ. ಯಾರು ಏಷ್ಟೇ ವದಂತಿ ಹಬ್ಬಿಸುತ್ತಿದ್ದರೂ ಸಮಾಜಕ್ಕೆ ಸಿಗಬೇಕಿರುವ ಮೀಸಲಾತಿ ಹೋರಾಟದಲ್ಲಿ ಪ್ರಾಮಾಣಿಕವಾಗಿ ನಮ್ಮ ಕುಟುಂಬವು ಸ್ಪಂದಿಸಲಿದ್ದು, ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಭಗೀರಥ ಉಪ್ಪಾರ ಸಮಾಜಕ್ಕೆ ಮೀಸಲಾತಿ ಕಲ್ಪಿಸಲು ಅತ್ಯಂತ ಉತ್ಸಾಹ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತೇನೆಂದು ಅವರು ಸಮಾಜ ಬಾಂಧವರಿಗೆ ವಾಗ್ದಾನ ನೀಡಿದರು.

ಉಪ್ಪಾರ ಸಮಾಜವು ಶಿಕ್ಷಣ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕಿದೆ. ಈ ಸಮಾಜಕ್ಕೆ ಸೂಕ್ತ ಸ್ಥಾನಮಾನ ಸಿಗಬೇಕಿದೆ. ನಂಬಿಕೆಗೆ ಹೆಸರಾಗಿರುವ ಉಪ್ಪಾರ ಸಮಾಜದ ಶ್ರೇಯೋಭಿವೃದ್ದಿಗೆ ಕಟಿಬದ್ಧನಾಗಿರುವೆ. ಮಹರ್ಷಿ ಭಗೀರಥ ಜಯಂತಿಯನ್ನು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಸಂಘಟಿತರಾಗಿ ಅದ್ದೂರಿಯಾಗಿ ಮಾಡಬೇಕೆಂಬ ಆಸೆಯಿಂದ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಸಮಾಜ ಬಾಂಧವರನ್ನು ಒಗ್ಗೂಡಿಸಿ ಮೂಡಲಗಿಯಲ್ಲಿಂದು ದೊಡ್ಡ ಪ್ರಮಾಣದಲ್ಲಿ ಭಗೀರಥ ಮೂರ್ತಿ ಅನಾವರಣ ಮಾಡಿದ್ದೇವೆ. ಇದು ಈ ಸಮಾಜದ ಶಕ್ತಿ ಪ್ರದರ್ಶನವಾಗಿ ಹೊರಹೊಮ್ಮಿದೆ ಎಂದು ಬಣ್ಣಿಸಿದರು.

ಸರ್ಕಾರದ ಸೌಲಭ್ಯಕ್ಕಾಗಿ, ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸಂಘಟಿತರಾಗಿ. ನಿಮ್ಮೊಂದಿಗೆ ಸದಾ ನಾವಿದ್ದೇವೆ. ನಿಮ್ಮ ಯಾವುದೇ ಕೆಲಸವಿರಲಿ. ಅದನ್ನು ಮಾಡಿಕೊಡುವ ಜವಾಬ್ದಾರಿ ನಮ್ಮದು. ಭಗೀರಥ ಉಪ್ಪಾರ ಸಮಾಜ ಸೇರಿದಂತೆ ಎಲ್ಲ ಸಮಾಜಗಳ ಹಿತರಕ್ಷಣೆಗೆ ನಮ್ಮ ಕುಟುಂಬ ಸದಾ ಬದ್ಧವಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಹೊಸದುರ್ಗ ಭಗೀರಥ ಪೀಠದ ಜಗದ್ಗುರು ಪುರುಷೋತ್ತಮಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಸಮಾಜ ಶ್ರಮಿಕ ಸಮಾಜವಾಗಿದೆ. ರುಚಿ-ರುಚಿಯಾದ ಭಕ್ಷ್ಯ-ಭೋಜನ ಕೊಟ್ಟು, ಭೂಮಿಗೆ ಜೀವಜಲ ಹರಿಸಿರುವ ಸಮಾಜವಾಗಿದೆ. ಮೀಸಲಾತಿಗಾಗಿ ಕುಲಶಾಸ್ತ್ರದ ಅಧ್ಯಯನ ವರದಿ ಸರ್ಕಾರಕ್ಕೆ ಸಲ್ಲಿಸಿದ್ದು, ಕೇಂದ್ರ ಸರ್ಕಾರಕ್ಕೆ ವರದಿ ಶಿಫಾರಸ್ಸುಗೊಳ್ಳಬೇಕಿದೆ. ಈ ದಿಸೆಯಲ್ಲಿ ಜಾರಕಿಹೊಳಿ ಕುಟುಂಬ ನಮ್ಮ ಸಮಾಜಕ್ಕೆ ಬೆನ್ನೆಲುಬಾಗಿ ನಿಂತಿದೆ. ಅದರಲ್ಲೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಮಗೆ ದೊಡ್ಡ ಆಸರೆಯಾಗಿ ನಿಂತಿದ್ದಾರೆ. ನಮಗಷ್ಷೇ ಅಲ್ಲ. ಎಲ್ಲ ಸಮಾಜಗಳಿಗೂ ಬಾಲಚಂದ್ರ ಜಾರಕಿಹೊಳಿ ಅವರು ಶಕ್ತಿಯಾಗಿದ್ದಾರೆ ಎಂದು ಶ್ಲಾಘಿಸಿದರು. ಗೋಕಾಕದಲ್ಲಿಯೂ ಭಗೀರಥ ಪೀಠದ ಶಾಖಾ ಮಠ ನಿರ್ಮಿಸಲಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಚಾಮರಾಜನಗರ ಶಾಸಕ ಹಾಗೂ ಭಗೀರಥ ಉಪ್ಪಾರ ಸಮಾಜದ ನಾಯಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಸಿದ್ದರಾಮಯ್ಯನವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರ್ಕಾರದಿಂದ ಭಗೀರಥ ಜಯಂತಿ ಆಚರಿಸುವ ಸುತ್ತೋಲೆ ಹೊರಡಿಸಿದ್ದರು. ಸರ್ಕಾರ ವಿವಿಧ ಸಮಾಜಗಳ ಅಭಿವೃದ್ಧಿಗಾಗಿ ನಿಗಮ ಮಂಡಳಿ ರಚಿಸಿದ್ದು, ಈಗ ನೀಡುತ್ತಿರುವ ಅನುದಾನ ಯಾವುದಕ್ಕೂ ಸಾಲುತ್ತಿಲ್ಲ. ಪ್ರತಿ ಸಮಾಜಗಳ ನಿಗಮಗಳಿಗೆ ₹50 ಕೋಟಿ ಅನುದಾನವನ್ನು ಪ್ರತಿ ವರ್ಷ ನೀಡಬೇಕು. ಇದರಿಂದ ಸಮಾಜಗಳು ಆರ್ಥಿಕವಾಗಿ ಸುಧಾರಣೆಯಾಗಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಶಿವಬೋಧರಂಗ ಮಠದ ದತ್ತಾತ್ರೇಯ ಬೋಧ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು.

ಸುಣಧೋಳಿಯ ಶಿವಾನಂದ ಸ್ವಾಮೀಜಿ, ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಕಟಕಭಾವಿಯ ಧರೇಶ್ವರ ಮಹಾಸ್ವಾಮಿಗಳು, ಉಪ್ಪಾರಹಟ್ಟಿಯ ನಾಗೇಶ್ವರ ಮಹಾಸ್ವಾಮಿಗಳು, ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಯುವ ಮುಖಂಡರಾದ ರಾಹುಲ್‌ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಮಾಜಿ ಸಚಿವ ಆರ್.ಎಂ. ಪಾಟೀಲ, ಹಿರಿಯ ಸಹಕಾರಿ ಬಿ.ಆರ್. ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಶ ಢವಳೇಶ್ವರ, ಜಿಪಂ ಮಾಜಿ ಸದಸ್ಯರಾದ ಶಂಕರ ಬಿಲಕುಂದಿ, ರಾಜೇಂದ್ರ ಸಣ್ಣಕ್ಕಿ, ವಿಠ್ಠಲ ಸವದತ್ತಿ, ಟಿ.ಆರ್. ಕಾಗಲ, ಮಡ್ಡೆಪ್ಪ ತೋಳಿನವರ, ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ರಾಮಣ್ಣ ಹಂದಿಗುಂದ, ಹಿರಿಯ ವಕೀಲ ಎಸ್.ಎಮ್.ಹತ್ತಿಕಟಗಿ, ಪರಸಪ್ಪ ಚೂನಣ್ಣವರ, ಅಡಿವೆಪ್ಪ ಕಿತ್ತೂರ, ರವಿ ಸೋನವಾಲ್ಕರ, ಚಂದ್ರು ಬೆಳಗಲಿ, ಲೆಕ್ಕಪರಿಶೋಧಕ ಸೈದೆಪ್ಪ ಗದಾಡಿ, ಮುತ್ತೇಪ್ಪ ಕುಳ್ಳೂರ, ಪರಸಪ್ಪ ಬಬಲಿ, ಬಸವರಾಜ ಮಾಳೇದವರ ಸೇರಿದಂತೆ ಭಗೀರಥ ಉಪ್ಪಾರ ಸಮಾಜದ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಹಲವಾರು ಮುಖಂಡರು, ವಿವಿಧ ಸಮಾಜದ ಮುಖಂಡರಗಳು ಉಪಸ್ಥಿತರಿದ್ದರು.

ಫೋಟೋ ಕ್ಯಾಪ್ಸನ್> ಮೂಡಲಗಿ: ಪಟ್ಟಣದ ಹೊರವಲಯದಲ್ಲಿರುವ ಮೂಡಲಗಿ ಕ್ರಾಸ್‌ನಲ್ಲಿ ನೂತನವಾಗಿ ನಿರ್ಮಿಸಿದ ಮಹರ್ಷಿ ಭಗೀರಥ ಮೂರ್ತಿಯನ್ನು ಅನಾವರಣಗೊಳಿಸಿ ನಂತರ ಸತ್ಯಭಾಮಾ ರುಕ್ಮೀಣಿ ಬಾಳಪ್ಪ ಹಂದಿಗುಂದ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ಉಪ್ಪಾರ ಸಮಾಜದ ಕಾರ್ಯಕ್ರಮವನ್ನು ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿ ಮಾತನಾಡಿದರು. ವಿವಿಧ ಮಹಾಸ್ವಾಮಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.