ದೊಡ್ಡಬಳ್ಳಾಪುರ: ಮೂರುವರೆ ಕೋಟಿಗೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರು ನಮ್ಮ‌ ದೇಶಕ್ಕೆ ಲೂಟಿ ಮಾಡಲು ಬಂದಿದ್ದು, ಅವರನ್ನು ಹೊರಹಾಕುವ ಕೆಲಸಕ್ಕೆ ನಮ್ಮಲ್ಲಿರುವ ಕೆಲವರು ವಿರೋಧಿಸುತ್ತಿರುವುದು ದುರಂತ ಮತ್ತು ಇದು ದೇಶದ್ರೋಹಕ್ಕೆ ಸಮ ಎಂದು ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೇಂಡೆ ಹೇಳಿದರು

ದೊಡ್ಡಬಳ್ಳಾಪುರ: ಮೂರುವರೆ ಕೋಟಿಗೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರು ನಮ್ಮ‌ ದೇಶಕ್ಕೆ ಲೂಟಿ ಮಾಡಲು ಬಂದಿದ್ದು, ಅವರನ್ನು ಹೊರಹಾಕುವ ಕೆಲಸಕ್ಕೆ ನಮ್ಮಲ್ಲಿರುವ ಕೆಲವರು ವಿರೋಧಿಸುತ್ತಿರುವುದು ದುರಂತ ಮತ್ತು ಇದು ದೇಶದ್ರೋಹಕ್ಕೆ ಸಮ ಎಂದು ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೇಂಡೆ ಹೇಳಿದರು.

ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಹಿಂದೂ ಸಮಾಜೋತ್ಸವ ಸಮಿತಿ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಹಾಗೂ ಇತರೆ ಹಿಂದೂ ಪರ ಸಂಘಟನೆಗಳು ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವದ ದಿಕ್ಸೂಚಿ ಭಾಷಣ ಮಾಡಿದ ಅವರು, ಒಂದು ದೇಶದ ರಕ್ಷಣೆ ಹಾಗೂ ಅಭಿವೃದ್ಧಿ ಕೇವಲ ಒಬ್ಬ ವ್ಯಕ್ತಿಯಿಂದ ಆಗುವುದಿಲ್ಲ, ಅಲ್ಲಿನ ಸಮಾಜದಿಂದ ಮಾತ್ರ ಸಾಧ್ಯ. ‌ಅಸ್ಪೃಶ್ಯತೆ ನಮ್ಮ ದೇಶಕ್ಕೆ ದೊಡ್ಡ ಶಾಪವಿದ್ದಂತೆ. ಇದೊಂದು ಸಾಮಾಜಿಕ ಪಿಡುಗು. ನಾವೆಲ್ಲರೂ ಭಾರತಮಾತೆಯ ಮಕ್ಕಳಾದಾಗ ನಮ್ಮಲ್ಲಿ ತಾರತಮ್ಯ ಇರಬಾರದು, ಪ್ರತಿ ಮನೆಯಲ್ಲೂ ಆದರ್ಶ ಹಿಂದುಗಳಾಗಿ ಬದುಕಬೇಕು ಎಂದರು.

ಭರತ ಭೂಮಿ ಸಾಕ್ಷಾತ್ ದೈವಭೂಮಿ. ಈ ಭೂಮಿಯಲ್ಲಿ ಹುಟ್ಟಿದ ಪ್ರತಿ ಮನುಷ್ಯನೂ ಭಗವಂತನಾಗಲು ಸಾಧ್ಯ ಎಂಬ ಅನನ್ಯ ನಂಬಿಕೆ ಜನರಲ್ಲಿದೆ. ಈ ಭೂಮಿಯಲ್ಲಿ ಮನುಷ್ಯ ಪುಣ್ಯದ ಕೆಲಸ ಮಾಡುತ್ತಾ ಭಗವಂತನಾಗಲು ಸಾಧ್ಯ. ನಮ್ಮ ಪುರಾತನ ಕಾಲದ ಹಿಂದೂ ಋಷಿಮುನಿಗಳು ಸದಾ ಜಗತ್ತಿನ ಹಿತವನ್ನೇ ಬಯಸಿದರು. ನಮ್ಮ ಪೂರ್ವಜರು ಕೂಡ ಜಗತ್ತಿನ ಹಿತವನ್ನೇ ಬಯಸಿದರು. ಜಗತ್ತಿಗೂ ಹಿತವನ್ನು ಬಯಸುವಂತಹ ಒಂದು ಸಮಾಜ ಎಂದರೆ ಅದು ಹಿಂದೂ ಸಮಾಜ. ವಸುದೈವ ಕುಟುಂಬಕಂ- ಜಗತ್ತೇ ಒಂದು ಕುಟುಂಬ ಎಂದು ಹೇಳಲಾಗಿದೆ ಎಂದರು.

ಪುಷ್ಪಾಂಡಜ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ ಮಾತನಾಡಿ, ಹಿಂದೂ ಸಮಾಜೋತ್ಸವ ಕೇವಲ ಒಂದು ಧಾರ್ಮಿಕ ಉತ್ಸವವಲ್ಲ. ಅದು ಸಮಾಜದ ಏಕತೆ, ಸಂಸ್ಕೃತಿ ಉಳಿವು ಮತ್ತು ಧಾರ್ಮಿಕ ಜಾಗೃತಿಯ ಪ್ರತೀಕವಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಧರ್ಮ ಭಾವನೆ, ಶಾಂತಿ ಮತ್ತು ಸಹಕಾರ ಬೆಳೆಸುತ್ತವೆ ಎಂದರು.

ಶೋಭಯಾತ್ರೆ:

ಹಿಂದೂ ಸಮಾಜೋತ್ಸವ ಅಂಗವಾಗಿ ನಗರದ ಜಯಚಾಮರಾಜೇಂದ್ರ ವೃತ್ತದ ಬಳಿ ಇರುವ ನೆಲದಾಂಜನೇಯ ದೇವಾಲಯದಿಂದ ಹಿಂದೂ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಬಸ್ ನಿಲ್ದಾಣ, ಸಿದ್ದಲಿಂಗಯ್ಯ ವೃತ್ತ, ಸ್ವಾಮಿ ವಿವೇಕಾನಂದ ವೃತ್ತ, ರುಮಾಲೆ ಭದ್ರಣ್ಣ ವೃತ್ತ, ಜಗಜ್ಯೋತಿ ಬಸವೇಶ್ವರ ವೃತ್ತದ ಮೂಲಕ ಭಗತ್‌ಸಿಂಗ್ ಕ್ರೀಡಾಂಗಣದವರೆಗೆ ಶೋಭಾಯಾತ್ರೆ ಜರುಗಿತು.

ಶತಶಕ್ತಿ ದೇವತಾ ಪೂಜೆ:

ಇದೇ ಮೊದಲ ಬಾರಿಗೆ ದೊಡ್ಡಬಳ್ಳಾಪುರದಲ್ಲಿ 100 ದೇವಾನುದೇವತೆಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಧರ್ಮಸ್ಥಳ ದೇವಾಲಯ ಮಾದರಿಯಲ್ಲಿ ರೂಪಿಸಿದ್ದ ಕಾರ್ಯಕ್ರಮ ಮುಖ್ಯ ವೇದಿಕೆ ಗಮನ ಸೆಳೆಯಿತು. ಗುರುವಾರ ಬೆಳಿಗ್ಗೆ ತಾಲೂಕಿನ ಎಲ್ಲಾ ಶಕ್ತಿ ದೇವತೆಗಳ ಪ್ರತಿಷ್ಠಾಪನ ಕಾರ್ಯಕ್ರಮ, ಸುದರ್ಶನ ಹೋಮ ನಡೆಯಿತು. ತಾಲೂಕಿನ ವಿವಿಧ ಭಜನೆ ಮಂಡಳಿಗಳಿಂದ ಭಕ್ತಿ ಪಾರಾಯಣ ನಡೆಯಿತು. ಮಧ್ಯಾಹ್ನ ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

ಶಾಸಕ ಧೀರಜ್‌ ಮುನಿರಾಜ್‌, ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಕೆ.ಎಂ.ಮುನಿರಾಮೇಗೌಡ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.

29ಕೆಡಿಬಿಪಿ2-

ದೊಡ್ಡಬಳ್ಳಾಪುರದಲ್ಲಿ ಹಿಂದೂ ಸಮಾಜೋತ್ಸವ ಅಂಗವಾಗಿ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಧರ್ಮಸ್ಥಳ ದೇವಾಲಯ ಮಾದರಿ ರೂಪಿಸಿ, 100 ದೇವರನ್ನು ಪ್ರತಿಷ್ಠಾಪಿಸಲಾಗಿತ್ತು.

29ಕೆಡಿಬಿಪಿ3-

ದೊಡ್ಡಬಳ್ಳಾಪುರದಲ್ಲಿ ಹಿಂದೂ ಸಮಾಜೋತ್ಸವ ಅಂಗವಾಗಿ ಬೃಹತ್‌ ಶೋಭಾಯಾತ್ರೆ ನಡೆಯಿತು.