ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಗು ಜನಿಸಿದ ಒಂದು ಗಂಟೆಯೊಳಗೆ ಸ್ತನ್ಯಪಾನ ಪ್ರಾರಂಭಿಸುವ ಮೂಲಕ ಶಿಶುಮರಣ ಪ್ರಮಾಣ ತಗ್ಗಿಸಬಹುದು. ಜನಿಸಿದ ಮಗುವಿಗೆ ಬೇರೆ ಯಾವುದೇ ಆಹಾರ ನೀಡದೆ ತಾಯಿಯ ಎದೆಹಾಲನ್ನೇ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ಸುನಿಲ್ಕುಮಾರ್ ಹೇಳಿದರು.ನಗರದ ಬುದ್ಧನಗರ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಪ್ಪು ವದಂತಿಗಳಿಗೆ ಕಿವಿಗೊಡದೆ, ಮಗುವಿಗೆ ಆರು ತಿಂಗಳವರೆಗೆ ಕೇವಲ ತಾಯಿಯ ಎದೆಹಾಲನ್ನೇ ನೀಡಬೇಕು. ಎದೆಹಾಲಿನಷ್ಟು ಪೌಷ್ಟಿಕಾಂಶಭರಿತ ಆಹಾರ ಮತ್ತೊಂದಿಲ್ಲ. ಸ್ತನ್ಯಪಾನ ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಿಸುವುದರ ಜತೆಗೆ ತಾಯಿ-ಮಗುವಿನ ಬಾಂಧವ್ಯ ಗಟ್ಟಿಗೊಳಿಸುತ್ತದೆ ಎಂದರು.ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ಡಿ.ಎಂ.ಅಭಿನವ ಮಾತನಾಡಿ, ಆರು ತಿಂಗಳವರೆಗೆ ಎದೆಹಾಲುಣಿಸಿದ ಬಳಿಕ ಪೂರಕ ಆಹಾರ ಆರಂಭಿಸಿ, ಎರಡು ವರ್ಷದವರೆಗೆ ಸ್ತನ್ಯಪಾನ ಮುಂದುವರಿಸಬೇಕು. ಹಾಲುಣಿಸಿದ ಬಳಿಕ ಮಗುವನ್ನು ಹೆಗಲ ಮೇಲಿರಿಸಿ ತೇಗು ಬರುವಂತೆ ಬೆನ್ನನ್ನು ಮೆಲ್ಲಗೆ ತಟ್ಟಬೇಕು ಎಂದರು.
ಟಿಎಚ್ಒ ಡಾ.ಬಿ.ವಿಗಿರೀಶ್ ಮಾತನಾಡಿ ಸ್ತನ್ಯಪಾನ ಮಾಡುವಾಗ ತಾಯಿ ಕೈ ಹಾಗೂ ಸ್ತನಗಳ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಶಾಂತ ವಾತಾವರಣದಲ್ಲಿ ಮಗುವಿಗೆ ಹಾಲುಣಿಸಬೇಕು ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಹಾಡಿನ ಮೂಲಕ ಎದೆಹಾಲಿನ ಮಹತ್ವ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಕೃಷ್ಣನಾಯಕ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜೆ.ಆರ್.ಗೌರಮ್ಮ, ಗೋವಿಂದರೆಡ್ಡಿ ಕೊಣ್ಣೂರ, ವೈದ್ಯಾಧಿಕಾರಿ ಡಾ. ಸುರೇಂದ್ರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ.ಶ್ರೀನಿವಾಸ್ ಮೂರ್ತಿ, ಆಶಾಮೆಂಟರ್ ಕವಿತಾ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಕರಕಪ್ಪ ಮೇಟಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು. ಆಶಾ ಕಾರ್ಯಕರ್ತೆಯರು, 45ಕ್ಕೂ ಹೆಚ್ಚು ಗರ್ಭಿಣಿ ಬಾಣಂತಿಯರು, ತಾಯಂದಿರು ಹಾಗೂ ಐಇಸಿ ಸಿಬ್ಬಂದಿ ಜಬ್ಬರ್ ಸಾಹೇಬ್ ಮತ್ತಿತರರು ಹಾಜರಿದ್ದರು.