ಸಾರಾಂಶ
ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿದ ಪ್ರಯುಕ್ತ ಆಳಂದ ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರಿಗೆ ರಾಜ್ಯಪಾಲರಿಂದ ಅತ್ಯುತ್ತಮ ಸಹಾಯಕ ಮತದಾರ ನೊಂದಣಿ ಅಧಿಕಾರಿ ಪ್ರಶಸ್ತಿ ಲಭಿಸಿದ್ದಕ್ಕೆ ಅಫಜಲ್ಪುರ ತಾಲೂಕಿನ ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆಯವರು ಸಂತಸ ವ್ಯಕ್ತ ಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚವಡಾಪುರ
2024ರ ರಾಷ್ಟ್ರೀಯ ಮತದಾರರ ದಿನದ ಪ್ರಯುಕ್ತ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿದ ಪ್ರಯುಕ್ತ ಆಳಂದ ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರಿಗೆ ರಾಜ್ಯಪಾಲರಿಂದ ಅತ್ಯುತ್ತಮ ಸಹಾಯಕ ಮತದಾರ ನೊಂದಣಿ ಅಧಿಕಾರಿ ಪ್ರಶಸ್ತಿ ಲಭಿಸಿದ್ದಕ್ಕೆ ಅಫಜಲ್ಪುರ ತಾಲೂಕಿನ ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆಯವರು ಸಂತಸ ವ್ಯಕ್ತ ಪಡಿಸಿದ್ದಾರೆ.ಮುಖ್ಯಗುರು ಮಹಾಂತೇಶ ಹಾಲಗಡ್ಲಿ, ಶಿಕ್ಷಕ ಯಲ್ಲಾಲಿಂಗ ತಳವಾರ ಮಾತನಾಡಿ ಈ ಹಿಂದೆ ಅಫಜಲ್ಪುರ ತಾಲೂಕು ದಂಡಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದ ಯಲ್ಲಪ್ಪ ಸುಬೇದಾರ ಅವರು ಬಹಳ ಸರಳ ಮತ್ತು ಜನಸ್ನೇಹಿ ಅಧಿಕಾರಿಯಾಗಿದ್ದಾರೆ. ಅವರು ಆಡಳಿತದಲ್ಲಿದ್ದಷ್ಟು ಸಮಯ ತಾಲೂಕಿನ ರೈತರು, ಹಿರಿಯರು, ಸಾರ್ವಜನಿಕರು ತಹಸೀಲ್ ಕಚೇರಿಗೆ ಯಾವುದೇ ಭಯವಿಲ್ಲದೆ ಬಂದು ಹೋಗುವಂತ ವಾತಾವರಣ ಸೃಷ್ಟಿಸಿದ್ದರು. ಅದರಲ್ಲೂ ರೈತರು, ಹಿರಿಯ ನಾಗರಿಕರಿಗೆ ಉತ್ತಮ ರೀತಿಯಲ್ಲಿ ಕಂದಾಯ ಇಲಾಖೆ ಸೇವೆಗಳು ತಲುಪುವಂತೆ ಮಾಡುತ್ತಿದ್ದರು. ಅಲ್ಲದೆ ಯಾವುದೇ ಸಮಸ್ಯೆಗಳ ಕುರಿತು ಸಾರ್ವಜನಿಕರು ಸಂಪರ್ಕ ಮಾಡಿದರೆ ಅದಕ್ಕೆ ಉತ್ತಮವಾಗಿ ಸ್ಪಂದಿಸಿ ಸಮಸ್ಯೆ ಸರಿಪಡಿಸುವ ಕೆಲಸ ಮಾಡುತ್ತಿದ್ದರು. ಈಗ ಆಳಂದ ತಹಸೀಲ್ದಾರರಾಗಿ ಉತ್ತಮ ಆಡಳಿತ ನಡೆಸುತ್ತಿದ್ದು ಅವರ ಕಾರ್ಯವೈಖರಿಯನ್ನು ಗುರುತಿಸಿ ಸರ್ಕಾರದ ಮಟ್ಟದ ರಾಜ್ಯ ಪ್ರಶಸ್ತಿ ಲಭಿಸಿದೆ. ಇದು ಅವರ ಕಾರ್ಯವೈಖರಿಗೆ ಸಿಕ್ಕ ಪ್ರಶಸ್ತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಬಸವರಾಜ ಪುಲಾರಿ, ಭೀಮರಾಯ ಬಿಜಾಪುರ, ರಾಜಶೇಖರ ಧೂಳಬಾ, ಶಿವಶರಣ ವಾಲೆ, ಅಂಬಿಕಾರ ಆರಬಳ್, ಕಾವೇರಿ ಬಟಗೇರಿ ಇದ್ದರು.