ಸಾರಾಂಶ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಸಂಪೂರ್ಣವಾಗಿ ಅಧೋಗತಿಗೆ ಇಳಿದಿದೆ. ಇದಕ್ಕೆ ನೇರವಾಗಿ ಕಾಂಗ್ರೆಸ್ ಸರ್ಕಾರವೇ ಮೂಲ ಕಾರಣ ಎಂದು ಸುನೀಲ್ ಹೆಗಡೆ ತಿಳಿಸಿದರು.
ಹಳಿಯಾಳ: ಮಹಿಳೆಯರಿಗೆ ಕೆಲವು ಗ್ಯಾರಂಟಿ ಯೋಜನೆಗಳನ್ನು ನೀಡಿ ಅಬ್ಬರದ ಪ್ರಚಾರವನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಾಡುತ್ತಿದೆ. ಇನ್ನೊಂದೆಡೆ ಮಹಿಳೆಯರಿಗೆ ರಕ್ಷಣೆಯ ಗ್ಯಾರಂಟಿ ನೀಡುವಲ್ಲಿ ವಿಫಲವಾಗಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಹುಬ್ಬಳ್ಳಿಯಲ್ಲಿ ನೇಹಾ ಪ್ರಕರಣ ಕರಾಳ ನೆನಪು ಮರೆಯುವ ಮುನ್ನವೇ ಅಂಜಲಿ ಎಂಬ ಯುವತಿಯ ಬರ್ಬರವಾಗಿ ಕೊಲೆ ನಡೆದಿದೆ. ಆದರೆ ರಾಜ್ಯ ಸರ್ಕಾರವು ಈ ದುರ್ಘಟನೆಗಳನ್ನು ಗಂಭೀರವಾಗಿ ಪರಿಗಣಿಸದೇ ಅವುಗಳನ್ನು ರಾಜಕೀಯಕ್ಕಾಗಿ ಬಳಸುತ್ತಿದೆ ಎಂದು ಆರೋಪಿಸಿದರು.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಸಂಪೂರ್ಣವಾಗಿ ಅಧೋಗತಿಗೆ ಇಳಿದಿದೆ. ಇದಕ್ಕೆ ನೇರವಾಗಿ ಕಾಂಗ್ರೆಸ್ ಸರ್ಕಾರವೇ ಮೂಲ ಕಾರಣ. ಅಂಜಲಿ ಮತ್ತು ನೇಹಾಳ ಈ ಎರಡೂ ಕೊಲೆ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ನೇರವಾಗಿ ಹೊಣೆಗಾರರಾಗಿದ್ದಾರೆ ಎಂದರು.ನಿಂಬಾಳ್ಕರ ಕೀಳು ಪ್ರತಿಕ್ರಿಯೆ:
ಉತ್ತರ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ ಅವರು ನಟಿ ರಶ್ಮಿ ಮಂದಣ್ಣ ಅವರ ಹೇಳಿಕೆ ನೀಡಿದ ಪ್ರತಿಕ್ರಿಯೆ ತಲೆ ತಗ್ಗಿಸುವಂತಿದೆ. ರಶ್ಮಿಕಾ ಮಂದಣ್ಣ ಅವರು ಮುಂಬಯಿಯಲ್ಲಿರುವ ಅಟಲ್ ಸೇತುವೆ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಆದರೆ ಡಾ. ಅಂಜಲಿಯವರು ಪ್ರತಿಕ್ರಿಯಿಸುವ ಭರಾಟೆಯಲ್ಲಿ ಬಳಸಿದ ಭಾಷೆ ಪದಗಳ ಬಳಕೆ ಅತ್ಯಂತ ಕೀಳಾಗಿದೆ ಎಂದರು.ಈ ಸಂದರ್ಭದಲ್ಲಿ ಮಂಗೇಶ ದೇಶಪಾಂಡೆ, ಸಿದ್ದನ್ನವರ, ಉದಯ ಹೂಲಿ, ಸಂತೋಷ ಘಟಕಾಂಬಳೆ, ತಾನಾಜಿ ಪಟ್ಟೇಕರ, ಯಲ್ಲಪ್ಪ ಹೊನ್ನೋಜಿ, ಚೂಡಪ್ಪಾ ಬೂಬಾಟಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಗೀತಾ ಜಾವಳೇಕರ, ಪುರಸಭೆ ಸದಸ್ಯೆ ಶಾಂತಾ ಹಿರೇಕರ, ರತ್ನಮಾಲಾ ಮುಳೆ, ಮಾಲಾ ಹುಂಡೇಕಾರ ಹಾಗೂ ಇತರರು ಇದ್ದರು.