ಕನ್ನಡಪ್ರಭ ವಾರ್ತೆ, ತುಮಕೂರುರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದು ರಾಜ್ಯ ಸರ್ಕಾರ ತುರ್ತು ಪರಿಹಾರಕ್ಕಾಗಿ ಹತ್ತು ಸಾವಿರ ಕೋಟಿ ರು. ಬಿಡುಗಡೆ ಮಾಡಬೇಕು. ಸರ್ಕಾರ ರೈತರ ಮನೆ ಬಾಗಿಲಿಗೆ ಹೋಗಿ ಅವರ ಸಂಕಷ್ಟ ಪರಿಹರಿಸಬೇಕು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ. ಸುರೇಶ್‌ಗೌಡರು ಒತ್ತಾಯಿಸಿದರು.ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡದೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಮಂತ್ರಿಗಳು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ ಹೊರತು ತಮ್ಮ ಸರ್ಕಾರದ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ ಎಂದು ಟೀಕಿಸಿದರು.ರಾಜ್ಯದ 240 ತಾಲೂಕುಗಳ ಪೈಕಿ 141 ತಾಲೂಕುಗಳಲ್ಲಿ ಬರ ಬಿದ್ದಿದೆ. ತುಮಕೂರು ಸೇರಿದಂತೆ 31 ಜಿಲ್ಲೆಗಳಲ್ಲಿ 24 ಜಿಲ್ಲೆಗಳು ಬರಪೀಡಿತವಾಗಿವೆ. ಒಟ್ಟು ಶೇಕಡ 42 ರಷ್ಟು ಮಳೆ ಕೊರತೆ ಇದೆ ಎಂದು ಅಂದಾಜು ಮಾಡಲಾಗಿದೆ. ಈಚಿನ ವರ್ಷಗಳಲ್ಲಿ ಕರ್ನಾಟಕ ಇಂಥ ಭೀಕರ ಬರದ ಸ್ಥಿತಿಯನ್ನು ಎದುರಿಸಿರಲಿಲ್ಲ. ಇಂಥ ಗಂಭೀರ ಸ್ಥಿತಿಯನ್ನು ಎದುರಿಸಲು ರಾಜ್ಯ ಸರ್ಕಾರ ತಕ್ಷಣ ಕನಿಷ್ಠ 10,000 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು. ಸಂಕಷ್ಟದಲ್ಲಿ ರೈತರಿಗೆ ಮಿಡಿದು ತನಗೆ ಹೃದಯ ಇದೆ ಎಂದು ತೋರಿಸಬೇಕು. ಮಳೆಯ ಕೊರತೆಯಿಂದಾಗಿ ಮುಂಗಾರು ಬೆಳೆ ಬಿತ್ತನೆ ಹಿಂದೆ ಬಿದ್ದಿದೆ ಎಂದರು.ಕೃಷಿ ಬೆಳೆಯ ಕಠಿಣ ಸ್ಥಿತಿ ಒಂದು ಕಡೆಯಾದರೆ ಮೇವಿನ ಕೊರತೆ ಕಾಣಿಸಿಕೊಂಡು ಜಾನುವಾರುಗಳಿಗೆ ತೀವ್ರ ಸಂಕಷ್ಟ ಎದುರಾಗುವ ಸ್ಥಿತಿ ಇದೆ. ಕೂಡಲೇ ಮೇವು ಬ್ಯಾಂಕ್ ಸ್ಥಾಪನೆ ಮಾಡಬೇಕು. ಇಂಥ ಸ್ಥಿತಿಯನ್ನು ಎದುರಿಸಬೇಕಾದ ಸರ್ಕಾರ ಸಂಪೂರ್ಣ ಸನ್ನದ್ಧ ಸ್ಥಿತಿಯಲ್ಲಿ ಇರಬೇಕಿತ್ತು. ಆದರೆ, ಕರ್ನಾಟಕದಲ್ಲಿ ಸರ್ಕಾರವೇ ಇಲ್ಲ. ಈಗ ರಾಜ್ಯದಲ್ಲಿ ಕಂದಾಯ ಸಚಿವರು ಮಾತ್ರ ಇದಾರೆ. ಕೃಷಿ, ತೋಟಗಾರಿಕಾ, ಜಲಸಂಪನ್ಮೂಲ ಸಚಿವರೇ ಇಲ್ಲ. ಕೃಷಿ ಸಂಬಂಧಿ ಸಚಿವರು ರಾಜ್ಯದಾದ್ಯಂತ ಪ್ರವಾಸ ಮಾಡಿ ರೈತರನ್ನು ಭೇಟಿ ಮಾಡಿ ಬರಗಾಲದ ಸ್ಥಿತಿಯನ್ನು ಈಗಾಗಲೇ ಅಂದಾಜು ಮಾಡಬೇಕಿತ್ತು. ಈಗ ಸಚಿವರಾಗಿ ಪ್ರಮಾಣ ಚನ ಸ್ವೀಕಾರ ಮಾಡಿದವರು ಇಲಾಖೆಯನ್ನು ಅರ್ಥ ಮಾಡಿಕೊಳ್ಳಲು ಕನಿಷ್ಠ ಮೂರು ತಿಂಗಳಾದರೂ ಬೇಕಾಗುತ್ತದೆ ಇಂಥ ಸ್ಥಿತಿಯಲ್ಲಿ ಕೃಷಿಕರನ್ನು ಕಾಪಾಡುವವರು ಯಾರು? ಎಂದು ಪ್ರಶ್ನಿಸಿದರು.ರಾಜ್ಯದ ಸಚಿವರ ತಂಡ ಹೋಗಿ ಅಧ್ಯಯನ ಮಾಡಿ ಇಂಥ ಪತ್ರ ಬರೆಯಬೇಕು. ನಾವೇ ಪೂರ್ವ ಸಿದ್ಧತೆ ಮಾಡಿಕೊಳ್ಳದೇ ಇದ್ದರೆ ಕೇಂದ್ರ ಸರ್ಕಾರ ನಮ್ಮ ನೆರವಿಗೆ ಏಕೆ ಬರುತ್ತದೆ? ಆಮೇಲೆ ಕೇಂದ್ರ ಸಹಾಯ ಮಾಡಲಿಲ್ಲ ಎಂದು ದೂರುವುದಕ್ಕೆ ರಾಜ್ಯ ಸರ್ಕಾರ ಈಗಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ಇದನ್ನು ರಾಜ್ಯ ಬಿಜೆಪಿ ನಾಯಕರು ಸಹಿಸುವುದಿಲ್ಲ ಎಂದರು.ರಾಜ್ಯದಲ್ಲಿ ಭೀಕರ ಬರಸ್ಥಿತಿ ನಿರ್ವಹಣೆ ಮಾಡಬೇಕಾದ ರಾಜ್ಯ ಸರ್ಕಾರದ ನಾಯಕರು ಸಚಿವ ಸಂಪುಟ ವಿಸ್ತರಣೆಗಾಗಿ ಹೈಕಮಾಂಡ್ ಬಾಗಿಲು ಕಾಯುತ್ತಿದೆ. ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ರಾಹುಲ್ ಗಾಂಧಿ ಮನೆಬಾಗಿಲು ಕಾಯುವ ಪರಿಸ್ಥಿತಿಗೆ ತಂದಿರುವುದು ರಾಜ್ಯದ 7 ಕೋಟಿ ಜನರಿಗೆ ಮಾಡಿದ ಅವಮಾನ ಎಂದು ಸುರೇಶ್‌ಗೌಡರು ಟೀಕಿಸಿದರು.ಇಂದು ವಿಜಯೇಂದ್ರ ಬರ ಅಧ್ಯಯನ ಪ್ರವಾಸ:,,,ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಇದೇ 4 ರಂದು ಮಂಗಳವಾರ ತುಮಕೂರು ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡಿದ್ದು, ಪರಿಸ್ಥಿತಿ ಅಧ್ಯಯ, ರೈತರೊಡನೆ ಸಂವಾದ ನಡೆಸಲಿದ್ದಾರೆ . ನಾನು ಕೂಡ ಪ್ರವಾಸದಲ್ಲಿ ಇರುತೇನೆ. ತಾವೂ ಪ್ರವಾಸದಲ್ಲಿ ಇರುವುದಾಗಿ ಹೇಳಿದರು.ರಾಜ್ಯ ಸರ್ಕಾರ ಬರಗಾಲ ಸ್ಥಿತಿ ಎದುರಿಸಲು ತಾನು ಏನು ಮಾಡಬೇಕು ಎಂಬ ಕುರಿತು ಇದುವರೆಗೆ ಯೋಚನೆ ಮಾಡಿಯೇ ಇಲ್ಲ. ತಾನು ಎಷ್ಟು ಹಣ ಬಿಡುಗಡೆ ಮಾಡುತ್ತೇನೆ ಎಂದು ಇದುವರೆಗೆ ಹೇಳಿಲ್ಲ. ಇದು ಹೃದಯವೇ ಇಲ್ಲದ ಸರ್ಕಾರ ಎಂದು ಸುರೇಶ್‌ಗೌಡ ಹೇಳಿದರು.ಈ ವೇಳೆ ವೈ.ಎ ಚ್. ಹುಚ್ಚಯ್ಯ, ಮಾಜಿ ಸದಸ್ಯರಾದ ಗೂಳೂರು ಶಿವಕುಮಾರ್, ಪುಟ್ಟಲಕ್ಷ್ಮಮ್ಮ, ತಾಲೂಕು ಬಿಜೆಪಿ ಅಧ್ಯಕ್ಷ ರಾಜಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಮುಖಂಡರಾದ ಹೊಳಕಲ್ಲು ಆಂಜನಪ್ಪ, ಪ್ರಭಾಕರ್, ವಿಜಯಕುಮಾರ್, ರೇಣುಕಮ್ಮ, ಊರ್ಡಿಗೆರೆ ರವಿ, ಸತೀಶ್, ರಮೇಶ್ ಯಲ್ಲಾಪುರ, ಊರುಕೆರೆ ಪುರುಷೋತ್ತಮ್ ಮೊದಲಾದವರು ಹಾಜರಿದ್ದರು.