ಸಾರಾಂಶ
ರೈತರ ಮಕ್ಕಳಿಗಿದ್ದ ರೈತ ವಿದ್ಯಾರ್ಥಿ ನಿಧಿಯನ್ನು ನಿಲ್ಲಿಸಲಾಗಿದೆ. ಆರ್.ಟಿ.ಸಿ ಎಂ.ಆರ್. ಇ.ಸ್ಟ್ಯಾಂಪ್ಗಳು ಮತ್ತು ಕಂದಾಯ ಇಲಾಖೆಯ ಇತರೆ ಶುಲ್ಕಗಳನ್ನು ದುಬಾರಿ ಮಾಡಲಾಗಿದೆ. ಇಂತಹ ರೈತ ವಿರೋಧಿ ಸರಕಾರವನ್ನು ಎದುರಿಸಲು ವಿರೋಧ ಪಕ್ಷ ಸಮರ್ಥವಾಗಿಲ್ಲ ಎಂಬುದು ದುರಾದೃಷ್ಟಕರ ಎಂದರು.
ಕನ್ನಡಪ್ರಭ ವಾರ್ತೆ ಪುತ್ತೂರು
ರೈತರ ಮತ ಪಡೆದು ಬಹುಮತದೊಂದಿಗೆ ಅಧಿಕಾರ ಪಡೆದುಕೊಂಡಿರುವ ರಾಜ್ಯ ಸರಕಾರ ರೈತರ ಸವಲತ್ತಿನ ಹಕ್ಕುಗಳನ್ನು ಕಸಿಯುತ್ತಿದ್ದು, ಈ ಕೀರ್ತಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲುತ್ತದೆ ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಅಧ್ಯಕ್ಷ ಹಡ್ಯ ರಮೇಶ ರಾಜು ಆರೋಪಿಸಿದ್ದಾರೆ. ಅವರು ಶನಿವಾರ ಪುತ್ತೂರು ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೃಷಿಗೆ ಸಹಾಯ ಆಗುತ್ತಿದ್ದ ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್ ಯೋಜನೆಗೆ ಹಿಂದಿನ ರಾಜ್ಯ ಸರ್ಕಾರ ೪ ಸಾವಿರ ರು. ಜೊತೆ ಸೇರಿಸುತ್ತಿತ್ತು. ಆದರೆ ಇದೀಗ ರಾಜ್ಯದ ೪ ಸಾವಿರವನ್ನು ಸರ್ಕಾರ ತಡೆ ಹಿಡಿದಿದೆ. ಪ್ರತಿ ಲೀಟರ್ ಹಾಲಿಗೆ ೧.೫೦ ರು. ಕಡಿಮೆ ಮಾಡಲಾಗಿದೆ. ರೈತರ ಮಕ್ಕಳಿಗಿದ್ದ ರೈತ ವಿದ್ಯಾರ್ಥಿ ನಿಧಿಯನ್ನು ನಿಲ್ಲಿಸಲಾಗಿದೆ. ಆರ್.ಟಿ.ಸಿ ಎಂ.ಆರ್. ಇ.ಸ್ಟ್ಯಾಂಪ್ಗಳು ಮತ್ತು ಕಂದಾಯ ಇಲಾಖೆಯ ಇತರೆ ಶುಲ್ಕಗಳನ್ನು ದುಬಾರಿ ಮಾಡಲಾಗಿದೆ. ಇಂತಹ ರೈತ ವಿರೋಧಿ ಸರಕಾರವನ್ನು ಎದುರಿಸಲು ವಿರೋಧ ಪಕ್ಷ ಸಮರ್ಥವಾಗಿಲ್ಲ ಎಂಬುದು ದುರಾದೃಷ್ಟಕರ ಎಂದರು.ಭಾರತೀಯ ಕಿಸಾನ್ ಸಂಘ ರಾಜ್ಯ ಸರಕಾರದ ರೈತ ವಿರೋಧಿ ನೀತಿಯ ವಿರುದ್ಧ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಕುಮ್ಕಿ ಹೋರಾಟ ಸಮಿತಿ ಮುಖಂಡರಾದ ಸತ್ಯನಾರಾಯಣ ಭಟ್ ಎಂ.ಜಿ. ಮಾತನಾಡಿ, ರೈತರ ಬಹುಕಾಲದ ಬೇಡಿಕೆಯಾದ ಕುಮ್ಕಿ, ಕಾನ, ಬಾಣೆ ಭೂಮಿಯ ಸಾಗುವಳಿ ಚೀಟಿಯನ್ನು ಕಾನೂನು ಮಾಡಿ ರೈತರಿಗೆ ಕೊಡಬೇಕು. ಆದರೆ ಈಗಾಗಲೇ ಮಂಗಳೂರಿನಲ್ಲಿ ಜಿಲ್ಲಾಧಿಕಾರಿಗಳು ರೈತರನ್ನು ಹುಡುಕಿ ಹುಡುಕಿ ನೋಟಿಸ್ ನೀಡುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ರಾಜ್ಯ ಸರಕಾರದ ಆದೇಶವನ್ನು ನಾವು ಮಾಡಲೇಬೇಕು ಎನ್ನುತ್ತಾರೆ. ರೈತರ ಮೂಲದಾಖಲೆಯಲ್ಲಿರುವ ಕೃಷಿ ಭೂಮಿಯನ್ನು ಸರಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಭಾರತೀಯ ಕಿಸಾನ್ ಸಂಘದ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ, ಜಿಲ್ಲಾ ಮಹಿಳಾ ಪ್ರಮುಖ್ ಶಾಂಭವಿ ಹಾಜರಿದ್ದರು.