ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರನಗರದ ಚಿಕ್ಕಬಳ್ಳಾಪುರ ರಸ್ತೆಯ ಸಂಗೊಂಡಹಳ್ಳಿ ಬಳಿಯಿರುವ ೧೧ ಎಕರೆ ಸರ್ಕಾರಿ ಜಮೀನಿನಲ್ಲಿ ೩೦೨ ನಿವೇಶಗಳನ್ನು ಹಂಚಿಕೆ ಮಾಡಿ ಮುಂದೆ ಬೇರೆ ಸರ್ಕಾರಿ ಜಾಗಗಳಲ್ಲಿ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ವಸತಿ ಸಚಿವ ಜಮೀರ್ ಅಹ್ಮದ್ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಸತಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ೧.೫ ಲಕ್ಷ ರೂ ಹಾಗೂ ರಾಜ್ಯ ಸರ್ಕಾರ ೧ ಲಕ್ಷ ರು. ಸಹಾಯ ಧನ ನೀಡುವುದು. ಉಳಿದ ಹಣವನ್ನು ಫಲಾನುಭವಿಗಳನ್ನು ಭರಿಸಬೇಕು. ಸುಮಾರು ೭.೫ ಲಕ್ಷ ರು.ಗಳ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಬಹುದಾಗಿದೆ ಎಂದರು.
ಇಂದಿರಾ ಆವಾಸ್ ಯೋಜನೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ವಸತಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಇಂದಿರಾ ಆವಾಸ್ ಯೋಜನೆಯಲ್ಲಿ ೧.೩೮ ಲಕ್ಷ ವಸತಿಗಳನ್ನು ೭.೫ ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಲು ನಿರ್ಧರಿಸಿದೆ, ಇದರಲ್ಲಿ ರಾಜ್ಯ-ಕೇಂದ್ರ ಸರ್ಕಾರದ ಸಹಾಯದ ಧನ ಹೊರತುಪಡಿಸಿ ಉಳಿದ ೪-೫ ಲಕ್ಷ ರು.ಗಳನ್ನು ಫಲಾನುಭವಿಗಳು ಸರ್ಕಾರಕ್ಕೆ ಕಟ್ಟಿದಲ್ಲಿ ನಿರ್ಮಿಸಿ ಕೊಡಬಹುದಿತ್ತು ಎಂದು ಹೇಳಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದು ಮನೆಯನ್ನು ಸಹ ನಿರ್ಮಿಸಿಕೊಡಲಿಲ್ಲ. ಕೊಳಚೆ ಪ್ರದೇಶದ ಅಭಿವೃದ್ದಿ ವಸತಿ ಯೋಜನೆಯಲ್ಲಿ ಅಥವಾ ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಏನಾದರೂ ಹಿಂದಿನ ಬಿಜೆಪಿ ಸರ್ಕಾರ ವಸತಿ ಕಲ್ಪಿಸಿರುವುದನ್ನು ಸಾಬೀತುಪಡಿಸಿದೆ ತಾವು ನಾನು ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಸವಾಲು ಹಾಕಿದರು.ಮುಂದಿನ ಚುನಾವಣೆಯಲ್ಲಿ 150 ಸ್ಥಾನಕಾಂಗ್ರೆಸ್ ಸರ್ಕಾರ ೨೦೨೮ರ ಒಳಗಾಗಿ ವಸತಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ದಾಖಲೆ ಮಾಡಲಿದೆ, ಮುಂಬರಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಗತಿ ಯೋಜನೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ೧೫೦ ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದರು. ಸಿದ್ದರಾಮಯ್ಯರ ೨೦೦೭ ರಲ್ಲಿ ಜನತಾದಳದಲ್ಲಿ ೫೯ ಶಾಸಕರನ್ನು ಹೊಂದಿದ ನಂತರ ಕುಮಾರ ಸ್ವಾಮಿ ಅಧ್ಯಕ್ಷ ಸ್ಥಾನವಹಿಸಿಕೊಂಡ ನಂತರ ಜೆ.ಡಿ.ಎಸ್.ಪಕ್ಷದಲ್ಲಿ ೫೯ ಶಾಸಕರನ್ನು ಪಡೆಯಲು ಸಾಧ್ಯವಾಗಲೇ ಇಲ್ಲ ಎಂದರು.
ಜೆಡಿಎಸ್ಗೆ ಭವಿಷ್ಯ ಇಲ್ಲ ಕುಮಾರಸ್ವಾಮಿ ಎರಡು ಭಾರಿ ಸಿಎಂ ಆದರೂ ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಲಿಲ್ಲ. ವೆಸ್ಟ್ ಎಂಡ್ ಹೋಟೆಲ್ನಲ್ಲಿ ನಡೆದ ಘಟನೆಯಿಂದಾಗಿ ಕುಮಾರಸ್ವಾಮಿ ಜನರ ವಿಶ್ವಾಸ ಕಳೆದುಕೊಂಡಿದ್ದು, ಜೆ.ಡಿ.ಎಸ್ಗೆ ಭವಿಷ್ಯ ಇಲ್ಲದಂತಾಯಿತು, ನಾನು ಮತ್ತು ಸಿದ್ದರಾಮಯ್ಯ ಇಬ್ಬರು ಜೆ.ಡಿ.ಎಸ್ ಪಕ್ಷದಲ್ಲಿ ಇದ್ದವರೇ, ನನಗೆ ಉಪಮುಖ್ಯ ಮಂತ್ರಿ ಮಾಡುತ್ತೇನೆ ಎಂದಿದ್ದವರು ನನಗೆ ವಕ್ಫ ಸಚಿವ ಸ್ಥಾನ ನೀಡಿದರು, ನಂತರ ನಾನು ಕಾಂಗ್ರೆಸ್ ಪಕ್ಷದ ಬಂದ ಮೇಲೆ ೩ ರಿಂದ ೫ ಖಾತೆಗಳ ಸಚಿವ ಸ್ಥಾನ ಸಿಕ್ಕಿದೆ ಎಂದು ನೆನಪಿಸಿಕೊಂಡರು. ಸಿಎಂ ಕುರ್ಚಿ ಖಾಲಿ ಇಲ್ಲಎಲ್ಲರಿಗೂ ಸಿಎಂ ಆಗೋ ಆಸೆ ಸಹಜ, ಆದರೆ ಸಿಎಂ ಸ್ಥಾನ ಖಾಲಿ ಇದ್ದಾಗ ಆ ಮಾತು ಅಷ್ಟೇ ಈ ಕುರಿತು ನೀವುಗಳು ಹುಟ್ಟು ಹಾಕುವ ಪ್ರಶ್ನೆಗಳು ದಿಕ್ಕು ತಪ್ಪಿಸುತ್ತಿದೆ, ೨.೫ ವರ್ಷ ಆಗ್ರಿಮೆಂಟ್ ಎನ್ನುತ್ತೀರಿ, ಡಿ.ಕೆ.ಶಿ ಸಿಎಂ ಆಗುತ್ತಾರೆ. ದಲಿತರು ಮುಖ್ಯ ಮಂತ್ರಿ ಆಗುತ್ತಾರೆ ಎನ್ನುವುದೆಲ್ಲಾ ಗಾಳಿ ಮಾತುಗಳು ಆಗುತ್ತದೆ, ಸಿದ್ದರಾಮಯ್ಯ ಅವರು ತಮ್ಮ ೫ ವರ್ಷ ಅವಧಿ ಪೂರ್ಣಗೊಳಿಸಲಿದ್ದಾರೆ ಎಂಬುವುದನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಖಚಿತ ಪಡಿಸಿದೆ ಎಂದು ಮಾಧ್ಯಮದ ಪ್ರಶ್ನೆಗಳಿಗೆ ಬ್ರೇಕ್ ಹಾಕಿದರು.ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಎಂಎಲ್ಸಿ ಎಂ.ಎಲ್.ಅನಿಲ್ಕುಮಾರ್, ಶಾಸಕರಾದ ಕೊತ್ತೂರು ಜಿ.ಮಂಜುನಾಥ್, ಜಿ.ಕೆ.ವೆಂಕಟಶಿವಾರೆಡ್ಡಿ, ಕೂಡಾ ಅಧ್ಯಕ್ಷ ಮಹಮ್ಮದ್ ಹನೀಫ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಹಾಲು ಒಕ್ಕೂಟದ ನಿರ್ದೇಶಕ ಷರೀಫ್, ನಗರಸಭೆ ಸದಸ್ಯರು ಇದ್ದರು.