ಸಾರಾಂಶ
ಗದಗ: ಐಎಂಎ ಗದಗ ಮತ್ತು ಐಎಂಎ ಕರ್ನಾಟಕ ರಾಜ್ಯ ಶಾಖೆಯ ಸಹಯೋಗದೊಂದಿಗೆ ಜೂನ್ 14 ಮತ್ತು 15ರಂದು ಗದಗದಲ್ಲಿ ಕೆ.ಎಚ್. ಪಾಟೀಲ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ 2 ದಿನಗಳ ರಾಜ್ಯ ಮಟ್ಟದ ವೈದ್ಯಕೀಯ ಕಾನೂನು ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದು ಡಾ. ಪವನ ಪಾಟೀಲ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ವೃತ್ತಿಪರರಿಗೆ ಕಾನೂನು ಅಂಶಗಳ ಕುರಿತು ಶಿಕ್ಷಣ ನೀಡುವುದು, ವೈದ್ಯರ ಮೇಲೆ ದಾಖಲಾಗುವ ಮೊಕದ್ದಮೆ ಭಯ ನಿವಾರಣೆ ಮಾಡುವುದು ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ.
ಸಮ್ಮೇಳನವನ್ನು ಕಾನೂನು, ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸಲಿದ್ದಾರೆ. ಇದೇ ವೇಳೆ ರಾಷ್ಟ್ರೀಯ ಐಎಂಎ ಅಧ್ಯಕ್ಷ ಡಾ. ದಿಲೀಪ್ ಬಾಲಿ, ಕರ್ನಾಟಕ ವೈದ್ಯಕೀಯ ಮಂಡಳಿಯ ಅಧ್ಯಕ್ಷ ಡಾ. ಮೈ.ಸಿ. ಯೋಗಾನಂದ ರೆಡ್ಡಿ, ಐಎಂಎ ಕೆಎಸ್ಬಿ ಅಧ್ಯಕ್ಷ ಡಾ. ಚಿನ್ನವಾಲರ್, ಜಿಮ್ಸ್ ನಿರ್ದೇಶಕ ಡಾ. ಬಸವರಾಜ್ ಬೊಮ್ಮಹಳ್ಳಿ, ರಾಷ್ಟ್ರೀಯ ಐಎಂಎ ಉಪಾಧ್ಯಕ್ಷ ಡಾ. ಜಿ. ಬಿಡಿನಹಾಳ ಉಪಸ್ಥಿತರಿರುವರು ಎಂದರು.ಡಾ. ರಾಧಿಕಾ ಕುಲಕರ್ಣಿ ಮಾತನಾಡಿ, ಕಾನೂನಿನ ಜ್ಞಾನ ವೈದ್ಯಕೀಯ ವೃತ್ತಿಯಲ್ಲಿ ಅಗತ್ಯ ಅವಶ್ಯಕತೆಯಾಗಿದೆ. ಈ ಸಮ್ಮೇಳನ ವೈದ್ಯರಿಗೆ ಕಾನೂನು ಜ್ಞಾನದ ಮೂಲಕ ಆತ್ಮವಿಶ್ವಾಸ ನೀಡಲಿದೆ. ವೈದ್ಯರಿಗೆ ನ್ಯಾಯಾಲಯದ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುವಂತೆ ನ್ಯಾಯಾಲಯ ಅಧಿವೇಶನಗಳು ಏರ್ಪಡಿಸಲಾಗುತ್ತಿದ್ದು, ವಕೀಲರು ಮತ್ತು ಪೊಲೀಸ್ ಅಧಿಕಾರಿಗಳೂ ಭಾಗವಹಿಸಲಿದ್ದಾರೆ. ಇತ್ತೀಚಿನ ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳ ತೀರ್ಪುಗಳು ಚರ್ಚೆಗೆ ಬರಲಿದ್ದು, ವೈದ್ಯರಿಗೆ ತಜ್ಞರಿಂದ ನೇರವಾಗಿ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.ಮೆಡಿಕಲ್ ಎಥಿಕ್ಸ್, ಪೊಲೀಸ್ ವರ್ತನೆ ಮುಂತಾದ ಮಹತ್ವದ ವಿಷಯಗಳ ಪ್ರಬಂಧಗಳು ಈ ಬಾರಿಯ ಸಮ್ಮೇಳನದ ಆಕರ್ಷಣೆಯಾಗಿದೆ. ಗದಗ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಈ ಮಟ್ಟದ ಕಾರ್ಯಕ್ರಮ ನಡೆಯುತ್ತಿದೆ. ಈಗಾಗಲೇ 450ಕ್ಕೂ ಹೆಚ್ಚು ವೈದ್ಯರು ನೋಂದಾಯಿಸಿಕೊಂಡಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಾ. ಅನುಪಮಾ ಪಾಟೀಲ, ಡಾ. ಶಶಿಧರ ರೇಷ್ಮೆ, ಡಾ. ತುಕಾರಾಂ ಸೂರಿ ಮುಂತಾದವರು ಉಪಸ್ಥಿತರಿದ್ದರು.