ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲಐತಿಹಾಸಿಕ ಮತ್ತು ಪಾಕೃತಿಕ ಸೌಂದರ್ಯದ ತಾಣ ಸೂಳೆ ಮಂಟಪ (ಗೆಳತಿಗುಡ್ಡ)ದಲ್ಲಿ ಜೂ.22ರಂದು ರಾಜ್ಯ ಮಟ್ಟದ ಕವಿ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಕನ್ನಡ ಸಂಘದ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಾಹಿತಿ ನಾ.ಸು.ನಾಗೇಶ ತಿಳಿಸಿದರು.ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 15ನೇ ಶತಮಾನದಲ್ಲಿ ನಾಗಮಂಗಲವನ್ನು ಆಳುತ್ತಿದ್ದ ತಿಮ್ಮಣ್ಣ ಡಣಾಯಕನ ಬಾಳಗೆಳತಿ ನೆಲೆಸಿದ್ದ ಪಟ್ಟಣದ ಹೊರವಲಯ ಕೆ.ಆರ್.ಪೇಟೆ ರಸ್ತೆಯ ಐತಿಹಾಸಿಕ ಸ್ಥಳದಲ್ಲಿ ಪಟ್ಟಣದ ಗೆಳತಿಗುಡ್ಡ ಪರಿಸರಕೂಟ, ಕನ್ನಡ ಸಂಘ ಮತ್ತು ಸಾಹಿತ್ಯ ಚಾವಡಿಯ ಸಂಯುಕ್ತಾಶ್ರಯದಲ್ಲಿ ಕಾವ್ಯರಚನೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ತಿಮ್ಮಣ್ಣ ಡಣಾಯಕನ ಬಾಳಗೆಳತಿ ವಾಸಸ್ಥಾನದ ಪಳಯುಳಿಕೆಯಾಗಿ ಆ ಗುಡ್ಡದಲ್ಲಿ ಈಗ ಒಂದು ವಿಶಾಲ ಹಾಸುಬಂಡೆಯ ಮೇಲೆ ಕೇವಲ ಮಂಟಪವಿದೆ. ಪಕ್ಕದ ಇನ್ನೊಂದು ಹಾಸುಬಂಡೆಯೊಂದರ ಕೆಳಭಾಗದಲ್ಲಿ ಇಟ್ಟಿಗೆಯಿಂದ ನಿರ್ಮಿತವಾಗಿರುವ ಶಯ್ಯಾಗಾರದ ಕೊಠಡಿಯಿದ್ದು ಬಹುತೇಕ ಮುಚ್ಚಿಹೋಗುತ್ತಿದೆ ಎಂದರು.ಅರಣ್ಯ ಇಲಾಖೆ ರಕ್ಷಣೆಯಲ್ಲಿರುವ ಈ ಪ್ರದೇಶವನ್ನು ವಿಹಾರ ಪಥ ಮತ್ತು ವಿಶ್ರಾಂತಿ ಕಲ್ಲುಬೆಂಚುಗಳನ್ನೊಳಗೊಂಡ ನೈಸರ್ಗಿಕ ಉದ್ಯಾನವನ್ನಾಗಿ ಅಭಿವೃದ್ಧಿ ಪಡಿಸಿದರೆ ಸುಂದರವಾದ ವಿಹಾರ ಸ್ಥಳವಾಗುತ್ತದೆ. ಈ ಎಲ್ಲಾ ಸಂಗತಿಗಳನ್ನು ಸಾರ್ವಜನಿಕರ ಮತ್ತು ಜನಪ್ರತಿನಿಧಿಗಳ ತರುವ ಸಣ್ಣ ಪ್ರಯತ್ನವಾಗಿ ಪಾಕೃತಿಕ ಸೌಂದರ್ಯದ ತಾಣವಾಗಿರುವ ಈ ಸ್ಥಳದಲ್ಲಿಯೇ ಕವಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ಹೇಳಿದರು.ಇಂದಿನ ದಿನಮಾನದಲ್ಲಿ ಸೂಳೆ ಎಂಬ ಪದವು ಸಾಮಾಜಿಕವಾಗಿ ನಡತೆಗೆಟ್ಟವಳು ಅಥವಾ ದೇಹ ಮಾರಿಕೊಂಡು ಬದುಕುವವಳು ಎನ್ನುವ ಅರ್ಥದಲ್ಲಿ ಭಾವಿಸಲ್ಪಡುತ್ತಿದೆ. ಆದರೆ, ಕೊಂಚ ಪ್ರಾಚೀನ ಕಾಲದವರೆಗೂ ಈ ಪದವು ಕೇವಲ ದೇಹ ವಿಕ್ರಯದ ಕಸುಬಾಗದೆ ಕಲಾವಿದೆಯಾಗಿಯೂ ಸಮಾಜದ ಕಟ್ಟಳೆಯ ಹಾಗೂ ನೀತಿಯ ಭಾಗವಾಗಿಯೂ ಸಾಮಾಜಿಕ ಸ್ಥಾನಮಾನ ಪಡೆದಿದ್ದ ಕುಲದ ಪದವಾಗಿತ್ತು. ಹಾಗಾಗಿ ಅಂದಿನ ಕಾಲದಲ್ಲಿ ಈ ಪದವು ಸಾಮಾಜಿಕ ಪ್ರಧಾನ್ಯತೆ, ಗೌರವವನ್ನೂ ಪಡೆದಿದ್ದ ಪದ ಮತ್ತು ಕುಲವಾಗಿತ್ತು. ಕಲಾವಿದೆಯಾದ್ದರಿಂದ ಈಕೆ ಸೃಜನಶೀಲ ವ್ಯಕ್ತಿಯೂ ಆಗಿದ್ದಳು. ಭೌತಿಕ ಸಾಂಗತ್ಯವೇ ಪ್ರಧಾನವಾಗದೆ, ಬೌದ್ಧಿಕ ಸಾಂಗತ್ಯವನ್ನು ನೀಡುವ ಸಂಬಂಧವು ಗೆಳೆತನವನ್ನು ಸೂಚಿಸುತ್ತದೆ. ಈ ಅಸಾಧಾರಣ ವ್ಯಕ್ತಿ ಅಂದು ರಾಜನ ಸೂಳೆ ಅಥವಾ ಗೆಳತಿಯೇ ಆಗಿದ್ದಳು. ಆದ್ದರಿಂದ ಆಡುಮಾತಿನಲ್ಲಿ ಸೂಳೆಮಂಟಪವೆಂದು ಕರೆಯುತ್ತಿದ್ದ ಈ ಸ್ಥಳವನ್ನು ಗೆಳತಿಗುಡ್ಡ ಎಂದು ಕರೆಯಲಾಗಿದೆ.
ವಕೀಲ ಜೆ.ಕೆ.ರಮೇಶ್ಗೌಡ ಮಾತನಾಡಿ, ಕಾವ್ಯ ರಚನೆ ಬಗ್ಗೆ ಆಸಕ್ತಿ ಹೊಂದಿರುವವರು ಭಾಗವಹಿಸಬೇಕು ಮತ್ತು ಸಾಹಿತ್ಯಾಸಕ್ತರೂ ಕೂಡ ಒಳಗೊಳ್ಳಬೇಕೆಂಬ ಕಾರಣಕ್ಕೆ ರಾಜ್ಯಮಟ್ಟದ ಕವಿ ಸಮ್ಮೇಳನವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಭಾಗವಾಗಿ ಎರಡು ಕವಿಗೋಷ್ಠಿಗಳಿದ್ದು, ಪೂರ್ವಭಾವಿಯಾಗಿ ಆಯ್ಕೆಯಾಗಿರುವ ರಾಜ್ಯದ ವಿವಿಧ ಭಾಗಗಳ 36 ಕವಿಗಳು ತಮ್ಮ ಕವಿತೆಗಳನ್ನು ವಾಚಿಸಲಿದ್ದಾರೆ ಎಂದರು.ಕವನ ವಾಚಿಸಲು ಆಯ್ಕೆಯಾಗದಿರುವ ಇನ್ನಿತರೆ ಕವಿಗಳನ್ನೂ ಸಹ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಖ್ಯಾತ ವಿದ್ವಾಂಸ ಹಾಗೂ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮತ್ತು ಕವಯತ್ರಿ ಪಿ.ಚಂದ್ರಿಕಾ ಅವರ ಮಾರ್ಗದರ್ಶನದಲ್ಲಿ ಅಂದು ಬೆಳಗ್ಗೆಯಿಂದ ಸಂಜೆವರೆಗೂ ಕಾರ್ಯಕ್ರಮ ನಡೆಯಲಿದೆ. 36 ಕವಿತೆಗಳನ್ನು ಆಯ್ಕೆ ಮಾಡಿದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಟಿ.ಎನ್.ವಾಸುದೇವಮೂರ್ತಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಸಮ್ಮೇಳನಕ್ಕೆ ಭಾಗವಹಿಸುವ ಕವಿಗಳು ಮತ್ತು ಸಾಹಿತ್ಯಾಸಕ್ತರಿಗೆ ಪ್ರವೇಶ ಉಚಿತವಾಗಿದೆ. ಕಾರ್ಯಕಮದ ದಿನದಂದು ಪಟ್ಟಣದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ವಾಹನ ಸೌಕರ್ಯ ಮತ್ತು ಮಧ್ಯಾಹ್ನದ ಭೋಜನ, ಚಹಾ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.ಕವಿಗಳು, ಸಾಹಿತ್ಯ ಪ್ರೇಮಿಗಳು ಹೆಚ್ಚಿನ ಮಾಹಿತಿಗಾಗಿ ಎನ್.ಕೆ.ನರಸಿಂಹಪ್ರಸಾದ್ ಮೊ.9980670370 ಮತ್ತು ರಮೇಶ್ಗೌಡ ಮೊ.9980309060ಗೆ ಸಂಪರ್ಕಿಸುವಂತೆ ಮನವಿ ಮಾಡಿದರು. ಸಾಹಿತಿ ಮಹಮ್ಮದ್ ಕಲೀಂಉಲ್ಲಾ ಗೋಷ್ಠಿಯಲ್ಲಿ ಇದ್ದರು.