ಸಾರಾಂಶ
ಮುರುಘಾಮಠದ ಅನುಭವ ಮಂಟಪದಲ್ಲಿ ಆಯೋಜನೆ । ಸೂಕ್ತ ವ್ಯವಸ್ಥೆಗೆ ಅಧಿಕಾರಿಗಳಿಗೆ ಸೂಚನೆ
ಕನ್ನಡಪ್ರಭ ವಾರ್ತೆ ಚಿತ್ರದುರ್ಗನಗರದ ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಫೆ.7 ಹಾಗೂ 8ರಂದು 2024-25ನೇ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ. ಕಾರ್ಯಕ್ರಮ ಯಶಸ್ವಿಗೆ ಉಪ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಹೊರ ಜಿಲ್ಲೆಗಳಿಂದ ಆಗಮಿಸುವ ಮಕ್ಕಳು, ಶಿಕ್ಷಕರ ವಸತಿ ಹಾಗೂ ಊಟದ ವ್ಯವಸ್ಥೆಗೆ ಪ್ರಾಮುಖ್ಯತೆ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, 2007ರಲ್ಲಿ ಚಿತ್ರದುರ್ಗ ಜಿಲ್ಲೆಯ ಆತಿಥೇಯದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳ ಜರುಗಿದ್ದವು. ಪುನಃ ಆತಿಥ್ಯ ವಹಿಸುವ ಜವಾಬ್ದಾರಿ ಜಿಲ್ಲೆಗೆ ಲಭಿಸಿದೆ. ಎರಡು ದಿನಗಳ ಕಾಲ 35 ಶೈಕ್ಷಣಿಕ ಜಿಲ್ಲೆಗಳಿಂದ 1378 ವಿದ್ಯಾರ್ಥಿಗಳು ಹಾಗೂ 105ಕ್ಕೂ ಹೆಚ್ಚು ನೋಡಲ್ ಅಧಿಕಾರಿಗಳು ಮತ್ತು ಮಾರ್ಗದರ್ಶಿ ಶಿಕ್ಷಕರು ಭಾಗವಹಿಸಲಿದ್ದಾರೆ ಎಂದರು.ಕಾರ್ಯಕ್ರಮ ಸ್ಮರಣೀಯವಾಗಿಸುವಂತೆ ಶಿಕ್ಷಣ ಇಲಾಖೆ ಸಿದ್ಧತೆಗಳನ್ನು ಆರಂಭಿಸಬೇಕು. ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಅತಿಥಿಗಳ ಆಹ್ವಾನ ಮತ್ತು ಶಿಷ್ಟಾಚಾರದ ಪಾಲನೆ ಸಮಿತಿ ರಚಿಸಬೇಕು. ನಗರಕ್ಕೆ ಆಗಮಿಸುವ ವಿದ್ಯಾರ್ಥಿಗಳ ಮಾರ್ಗದರ್ಶನಕ್ಕಾಗಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಾಹಿತಿ ಕೇಂದ್ರ ತೆರಯಬೇಕು. 5 ಜಿಲ್ಲೆಗಳಿಗೆ ಒಬ್ಬ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇಮಕ ಮಾಡಿ ನಗರಕ್ಕೆ ಆಗಮಿಸುವ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಬಾಲಕ ಹಾಗೂ ಬಾಲಕಿಯರಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಬೇಕು. ನೋಂದಣಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಪ್ರತಿ 2 ಜಿಲ್ಲೆಗಳಿಗೆ ಒಂದು ನೊಂದಣಿಗೆ ಕೌಂಟರ್ ತೆರೆಯಬೇಕು. ವಿದ್ಯಾರ್ಥಿಗಳನ್ನು ಕರೆ ತರಲು ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು.
ಪ್ರತಿಭಾ ಕಾಂರಜಿ ನಡೆಯುವ ಸ್ಥಳದಲ್ಲಿ ತಾತ್ಕಾಲಿಕವಾಗಿ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಬೇಕು. ಇಬ್ಬರು ವೈದ್ಯರು ಸೇರಿದಂತೆ ಅಗತ್ಯ ವೈದ್ಯಕೀಯ ಸಿಬ್ಬಂದಿ, ಔಷಧೋಪಚಾರಗಳು ಸ್ಥಳದಲ್ಲಿ ಲಭ್ಯವಿರಬೇಕು. ತರ್ತು ಸೇವೆಗಾಗಿ ಆ್ಯಂಬುಲೆನ್ಸ್ ಇರಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.ಮಕ್ಕಳಿಗೆ ಕುಡಿಯುಲು ಶುದ್ಧ ಕುಡಿಯುವ ನೀರು ನೀಡಬೇಕು. ಆಹಾರವನ್ನು ಪರೀಕ್ಷೆಗೆ ಒಳಪಡಿಸಿದ ನಂತರವೇ ಮಕ್ಕಳಿಗೆ ವಿತರಿಸಬೇಕು. ಸ್ಪರ್ಧೆಗಳು ಜರುಗುವ ಸ್ಥಳ, ಸಂಪರ್ಕಿಸಬೇಕಾದ ನೋಡಲ್ ಅಧಿಕಾರಿಗಳ ವಿವರಗಳನ್ನು ಮಕ್ಕಳಿಗೆ ಗೋಚರವಾಗುವಂತೆ ಮುದ್ರಿಸಿ ಪ್ರಮುಖ ಸ್ಥಳಗಳಲ್ಲಿ ಲಗತ್ತಿಸಬೇಕು. ಶಿಕ್ಷಣ ಇಲಾಖೆ ಜತೆಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ವಸತಿ ಸಮಿತಿ ಮೇಲುಸ್ತುವಾರಿಗೆ ನೇಮಿಸಬೇಕು. ಪ್ರತಿ ಸ್ಪರ್ಧೆಗಳಿಗೂ ಅನುಭವಿಗಳನ್ನು ತೀರ್ಪುಗಾರರನ್ನಾಗಿ ನೇಮಿಸಬೇಕು. ನಿಷ್ಪಕ್ಷಪಾತವಾಗಿ ತೀರ್ಪುಗಳನ್ನು ನೀಡಬೇಕು. ಯಾವುದೇ ಗೊಂದಲಕ್ಕೆ ಆಸ್ಪದ ನೀಡಬಾರದು. ಬಂದೋಬಸ್ತ್ ಅಗತ್ಯ ಇರುವ ಮಹಿಳಾ ಹಾಗೂ ಪುರುಷ ಪೊಲೀಸರನ್ನು ನಿಯೋಜಿಸಬೇಕು ಎಂದು ಹೇಳಿದರು.
ಐತಿಹಾಸಿಕ ಸ್ಥಳಗಳಿಗೆ ಮಕ್ಕಳ ಪ್ರವಾಸ:ಬೇರೆ ಜಿಲ್ಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಜಿಲ್ಲೆಯ ಐತಿಹಾಸಿಕ ಮಹತ್ವನ್ನು ತಿಳಿಸಿಕೊಡಬೇಕು. ಇದಕ್ಕಾಗಿ ಬ್ರೋಚರ್, ಬ್ಯಾನರ್ಗಳನ್ನು ಸ್ಪರ್ಧೆಗಳು ನಡೆಯುವ ಸ್ಥಳದಲ್ಲಿ ಅಳವಡಿಸಬೇಕು. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಬೇಕು. ಆಯ್ದ ವಿದ್ಯಾರ್ಥಿಗಳಿಗೆ ಜಿಲ್ಲೆಯ ಐತಿಹಾಸಿ ಸ್ಥಳಗಳಿಗೆ ಪ್ರವಾಸ ಏರ್ಪಡಿಸಬೇಕು. ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಗೆ ಆಗಮಿಸವ ವಿದ್ಯಾರ್ಥಿ ಹಾಗೂ ಶಿಕ್ಷಕರು ಜಿಲ್ಲೆಯಿಂದ ಸವಿ ನೆನಪುಗಳೊಂದಿಗೆ ಮರಳುವಂತೆ ಕಾರ್ಯಕ್ರಮ ಆಯೋಜಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಪಿಯು ಉಪನಿರ್ದೇಶಕ ಪುಟ್ಟಸ್ವಾಮಿ, ಡಿಹೆಚ್ಓ ಡಾ.ರೇಣುಪ್ರಸಾದ್ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಇದ್ದರು.