ವಂದೇಮಾತರಂ ಗೀತೆಯ ೧೫೦ನೇ ವರ್ಷಾಚರಣೆಯನ್ನು ಅರ್ಥಪೂರ್ಣಗೊಳಿಸಲು ನಮ್ಮ ಕಾಲೇಜಿನ ವತಿಯಿಂದ ವಂದೇಮಾತರಂ ರಾಷ್ಟ್ರೀಯ ಗೀತಗಾಯನ ಸ್ಪರ್ಧೆಯನ್ನು ರಾಜ್ಯಮಟ್ಟದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದೇವೆ.
ಕನ್ನಡಪ್ರಭ ವಾರ್ತೆ ಕುಮಟಾ
ವಂದೇಮಾತರಂ ಗೀತೆಯ ೧೫೦ನೇ ವರ್ಷಾಚರಣೆಯನ್ನು ಅರ್ಥಪೂರ್ಣಗೊಳಿಸಲು ನಮ್ಮ ಕಾಲೇಜಿನ ವತಿಯಿಂದ ವಂದೇಮಾತರಂ ರಾಷ್ಟ್ರೀಯ ಗೀತಗಾಯನ ಸ್ಪರ್ಧೆಯನ್ನು ರಾಜ್ಯಮಟ್ಟದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದೇವೆ ಎಂದು ಗೋರೆಯ ಕೆನರಾ ಎಕ್ಸಲೆನ್ಸ ಕಾಲೇಜು ಸಂಸ್ಥಾಪಕ ಅಧ್ಯಕ್ಷ ಡಾ. ಜಿ.ಜಿ. ಹೆಗಡೆ ತಿಳಿಸಿದರು.ಗೋರೆ ಕೆನರಾ ಎಕ್ಸಲೆನ್ಸ ಪಿಯು ಕಾಲೇಜಿನಲ್ಲಿ ಸ್ಪರ್ಧೆಯ ಪೋಸ್ಟರ್ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಇದು ಪ್ರಥಮ ಬಾರಿಗೆ ಉತ್ತರ ಕನ್ನಡ ಜಿಲ್ಲೆಯಿಂದ ರಾಜ್ಯಮಟ್ಟದಲ್ಲಿ ನಡೆಯುವ ಸ್ಪರ್ಧೆಯಾಗಿದ್ದು ರಾಜ್ಯದ ಎಲ್ಲೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವ ವಿಶ್ವಾಸವಿದೆ.2 ಹಂತಗಳಲ್ಲಿ ಸ್ಪರ್ಧೆ ನಡೆಸಲಾಗುತ್ತಿದ್ದು, ಮೊದಲ ಹಂತದಲ್ಲಿ ವಿದ್ಯಾರ್ಥಿಗಳು ೩.೧೦ ನಿಮಿಷದ ವಂದೇಮಾತರಂ ಪೂರ್ಣ ಗೀತೆ ಗಾಯನದ ವಿಡಿಯೋ ಕಳುಹಿಸಬೇಕು. ವೀಡಿಯೋ ಕಳಿಸಲು ಆ. ೩೧ ಕೊನೆಯ ದಿನಾಂಕವಾಗಿದೆ. ಇಲ್ಲಿ ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಎರಡನೇ ಹಂತ(ಅಂತಿಮ)ದ ಸ್ಪರ್ಧೆ ನಡೆಸಲಾಗುವುದು. ಅಂತಿಮ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವು ಸೆ. ೯ರಂದು ಗೋರೆ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ನಡೆಸಲಾಗುವುದು. ಇಲ್ಲಿ ಸ್ಪರ್ಧಾಳುಗಳು ನಿರ್ಣಾಯಕರ ಸಮ್ಮುಖ ಹಾಡಬೇಕು. ಪ್ರಥಮ ಸ್ಥಾನಕ್ಕೆ ₹೧೦ ಸಾವಿರ, ದ್ವಿತೀಯ ₹೬ ಸಾವಿರ ಹಾಗೂ ತೃತೀಯ ₹೪ ಸಾವಿರ ನೀಡಲಾಗುತ್ತದೆ. ತಲಾ ₹೧ ಸಾವಿರಗಳಂತೆ ೫ ಸಮಾಧಾನಕರ ಬಹುಮಾನ ನೀಡಲಾಗುವುದು. ಭಾಗವಹಿಸುವ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ಇ-ಸರ್ಟಿಫಿಕೇಟ್ ನೀಡಲಾಗುವುದು. ಸ್ಪರ್ಧೆಯ ನಿರ್ಣಾಯಕರಾಗಿ ಅಶೋಕೆಯ ಸ್ವರಾತ್ಮ ಗುರುಕುಲದ ಪ್ರಾಚಾರ್ಯ ಡಾ. ಹರೀಶ ಹೆಗಡೆ ಕಾರ್ಯನಿರ್ವಹಿಸಲಿದ್ದಾರೆ. ವೀಡಿಯೋ ಕಳುಹಿಸಬೇಕಾದ ವಾಟ್ಸಾಪ್ ಸಂಖ್ಯೆ ೮೩೧೦೮೯೧೩೬೮ ಎಂದರು.
ಪ್ರಾಚಾರ್ಯ ಕಿರಣ ಭಟ್ಟ, ಉಪಪ್ರಾಚಾರ್ಯೆ ರಮ್ಯಾ ಸಭಾಹಿತ್, ಆಡಳಿತಾಧಿಕಾರಿ ಶಶಾಂಕ ಶಾಸ್ತ್ರಿ, ಉಪನ್ಯಾಸಕರಾದ ಗಣಪತಿ ಭಟ್ಟ, ಪೂಜಾ ಭಟ್ಟ, ಗಾಯತ್ರಿ ಹೆಗಡೆ, ಲೀನಾ ಗೊನೆಹಳ್ಳಿ ಉಪಸ್ಥಿತರಿದ್ದರು.