ಕನ್ನಡಪ್ರಭ ವಾರ್ತೆ ಮಧುಗಿರಿ

ರಾಜ್ಯದ ಪೊಲೀಸರು ಶಿಸ್ತು, ದಕ್ಷತೆಯಿಂದ ,ಕರ್ತವ್ಯ ನಿರ್ವಹಿಸುವ ಮೂಲಕ ದೇಶದಲ್ಲೇ ಪ್ರಖ್ಯಾತಿ ಪಡೆದಿದ್ದು, ಸಮರ್ಥವಾಗಿ ನ್ಯಾಯ ಒದಗಿಸುವ ಇಲಾಖೆ ಎಂದರೆ ಅದು ಕರ್ನಾಟಕ ಪೊಲೀಸ್ ಇಲಾಖೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಮಧುಗಿರಿಯಲ್ಲಿ ಪೊಲೀಸ್ ವಸತಿ ಗೃಹ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೆಸ್ಕಾಂ ಎಇಇ ಹಾಗೂ ಪೊಲೀಸ್ ಠಾಣೆ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಕೊರಟಗೆರೆಯ- ತುಂಬಾಗಾನಹಳ್ಳಿಯಲ್ಲಿ 500 ಕೋಟಿ ರು.ವೆಚ್ಚದಲ್ಲಿ 12 ನೇ ಕೆಎಸ್‌ಆರ್‌ಪಿ ಬ್ಯಾಟಲಿಯನ್ ಸ್ಥಾಪಿಸಿ 1 ಸಾವಿರ ಪೊಲೀಸರಿಗೆ ತರಬೇತಿ ನೀಡಿ ಕಳುಹಿಸುತ್ತಿದ್ದು, ಇದರ ಫಲ ರಾಜ್ಯದ ಜನರ ಹಿತ ರಕ್ಷಣೆ. ಬೆಂಗಳೂರು ನಗರ ಹೆಣ್ಣುಮಕ್ಕಳಿಗೆ ಸುರಕ್ಷಿತ ಎಂದ ಅವರು, ಪೊಲೀಸರಿಗೆ ರಾಜ್ಯದಲ್ಲಿ ಸಾವಿರಾರು ವಸತಿ ಕಲ್ಪಿಸಿದ್ದು, ಪ್ರಸ್ತುತ ಮಧುಗಿರಿಯಲ್ಲಿ 36 ಮತ್ತು ಕೊರಟಗೆರೆಯಲ್ಲಿ 36 ಒಟ್ಟು 72 ಮನೆಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದೇನೆ ಎಂದರು.

ವಿರೋಧ ಪಕ್ಷ ಬಿಜೆಪಿಯ ಟೀಕೆ ಟಿಪ್ಪಣಿಗಳಿಗೆ ನಾವು ಸೊಪ್ಪುಹಾಕಲ್ಲ, ನಾವು 5 ಗ್ಯಾರಂಟಿ ಅನುಷ್ಠಾನಗೊಳಿಸಿದಾಗ ರಾಜ್ಯ ದಿವಾಳಿಯಾಗುತ್ತದೆ ಎಂದು ರಾಜ್ಯದಿಂದ ಹಿಂಡಿದು ಪ್ರಧಾನ ಮಂತ್ರಿವರೆಗೂ ಗ್ಯಾರಂಟಿಗಳ ಬಗ್ಗೆ ಟೀಕಿಸಿದ್ದ ಬಿಜೆಪಿಗರು ಪಕ್ಕದ ರಾಜ್ಯಗಳ ಚುನಾವಣೆಯಲ್ಲಿ ನಮ್ಮ ಗ್ಯಾರಂಟಿ ಯೋಜನೆ ಕಾಫಿ ಮಾಡಿ ಅನುಷ್ಠಾನಕ್ಕೆ ತಂದರು. ಸಿಎಂ ಸಿದ್ದರಾಮಯ್ಯ ಈ ನಾಡಿನ ಬಡವರ, ಧ್ವನಿ ಇಲ್ಲದವರ,ಶೋಷಣೆಗೆ ಒಳಗಾದವರ ಪರ ಕೆಲಸ ಮಾಡುತ್ತಿದ್ದು, ಇವರ ಟೀಕೆಗೆ ನಾವು ಹೆದರಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.


ಶಾಸಕ ಕೆ.ಎನ್‌.ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಭಾಗದ ಯುವಕ-ಯುವತಿಯರು ಉದ್ಯೋಗ ಅರಸಿ ಬೆಂಗಳೂರಿಗೆ ಹೋಗುತ್ತಿದ್ದು ಇದನ್ನು ತಪ್ಪಸಿ ನಮ್ಮ ಭಾಗದಲ್ಲಿ ಜವಳಿ ಪಾರ್ಕ್ ಸ್ಥಾಪಿಸಿ ಉದ್ಯೋಗ ಒದಗಿಸುವುದೇ ನಮ್ಮ ಗುರಿ ಎಂದ ರಾಜಣ್ಣ ಬಡವರ ಪಾಲಿಗೆ ಅನ್ನಭಾಗ್ಯ ಸ್ವಾಭಿಮಾನದ ಜೀವನ ನಡೆಸಲು ವರದಾನವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಡಿಜಿಪಿ ಅರುಣ್ ಚಕ್ರವರ್ತಿ, ಎಡಿಜಿಪಿ ಮುರುಗನ್‌, ಐಜಿ ಲಾಭುರಾಮ್, ಎಸ್ಪಿ ಅಶೋಕ್‌ ,ಡಿಸಿ ಶುಭಕಲ್ಯಾಣ್ ಪೊಲೀಸ್ ಅಧಿಕಾರಿಗಳಾದ ಗೋಪಾಲ್, ಪುರುಷೋತ್ತಮ್, ಪ್ರಕಾಶ್, ಡಿವೈಎಸ್ಪಿ ಮಂಜುನಾಥ್,ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಎಸಿ ಗೋಟೂರು ಶಿವಪ್ಪ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ,ತಹಸೀಲ್ದಾ ಶ್ರೀನಿವಾಸ್ ,ಇಒ ಲಕ್ಷ್ಮಣ್,ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೈರಪ್ಪ ಇತರರಿದ್ದರು.