ಕಮಲ್‌ ಕ್ಷಮೆಯಾಚಿಸದೇ ಇದ್ದರೆ ರಾಜ್ಯಾದ್ಯಂತ ಹೋರಾಟ

| Published : Jun 10 2025, 04:00 AM IST

ಕಮಲ್‌ ಕ್ಷಮೆಯಾಚಿಸದೇ ಇದ್ದರೆ ರಾಜ್ಯಾದ್ಯಂತ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಉಚ್ಚ ನ್ಯಾಯಾಲಯವೂ ಕಮಲ್‌ ಹೇಳಿಕೆ ಖಂಡಿಸಿ ಕಾರವಾಗಿ ಪ್ರಶ್ನಿಸಿದೆ. ಕನ್ನಡಿಗರ ಕ್ಷಮೆ ಕೇಳಲು ಸೂಚಿಸಿದಾಗಲೂ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿರುವುದು ಈ ವ್ಯಕ್ತಿಯ ಘನತೆಗೆ ತಕ್ಕುದಲ್ಲ. ಒಬ್ಬ ಭಾಷಾ ಸಂಶೋಧಕ ಅಥವಾ ಭಾಷಾ ಇತಿಹಾಸಕಾರ ಮಾತನಾಡಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಇವ್ಯಾವುದರ ಗಂಧ ಗಾಳಿಯೂ ಇಲ್ಲದ ಕಮಲ್ ಹಾಸನ್ ಮಾತಾಡಿದ್ದು ಸರಿಯಲ್ಲ.

ಧಾರವಾಡ: ಕನ್ನಡ ಭಾಷೆಯು ತಮಿಳಿನಿಂದ ಜನ್ಮತಾಳಿದೆ ಎಂಬ ಹಿರಿಯ ನಟ ಕಮಲ್ ಹಾಸನ್ ಹೇಳಿಕೆಯನ್ನು ವಾಪಸ್‌ ಪಡೆದು ಕ್ಷಮೆಯಾಚಿಸುವಂತೆ ಆಗ್ರಹಿಸಿ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘವು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿತು.

ಕಮಲ್ ಹಾಸನ್ ತಮ್ಮ ಮಾತಿಗೆ ಕ್ಷಮೆ ಕೇಳಿ ಆದ ಪ್ರಮಾದವನ್ನು ಸರಿಪಡಿಸುವುದನ್ನು ಬಿಟ್ಟು ಮೊಂಡುವಾದ ಮಾಡುತ್ತಾ, ಕನ್ನಡಿಗರ ಭಾವನೆಗಳನ್ನು ಕೆಣಕುವ ಕಾರ್ಯ ಮಾಡಲು ಹೊರಟಿರುವುದನ್ನು ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಸಾಹಿತಿಗಳು, ಭಾಷಾ ಸಂಶೋಧಕರು, ವಿದ್ವಾಂಸರು, ಹೋರಾಟಗಾರರು ಖಂಡಿಸಿದರು.

ಕರ್ನಾಟಕ ಉಚ್ಚ ನ್ಯಾಯಾಲಯವೂ ಕಮಲ್‌ ಹೇಳಿಕೆ ಖಂಡಿಸಿ ಕಾರವಾಗಿ ಪ್ರಶ್ನಿಸಿದೆ. ಕನ್ನಡಿಗರ ಕ್ಷಮೆ ಕೇಳಲು ಸೂಚಿಸಿದಾಗಲೂ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿರುವುದು ಈ ವ್ಯಕ್ತಿಯ ಘನತೆಗೆ ತಕ್ಕುದಲ್ಲ. ಒಬ್ಬ ಭಾಷಾ ಸಂಶೋಧಕ ಅಥವಾ ಭಾಷಾ ಇತಿಹಾಸಕಾರ ಮಾತನಾಡಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಇವ್ಯಾವುದರ ಗಂಧ ಗಾಳಿಯೂ ಇಲ್ಲದ ಕಮಲ್ ಹಾಸನ್ ಮಾತಾಡಿದ್ದು ಸರಿಯಲ್ಲ. ಭಾಷೆ ಮತ್ತು ಗಡಿ ವಿಚಾರದಲ್ಲಿ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಜನರ ಭಾವನೆಗಳ ಜತೆ ಚೆಲ್ಲಾಟವಾಡುವುದನ್ನು ಯಾರೂ ಮಾಡಬಾರದು.

ತಮಿಳು ಮತ್ತು ಕನ್ನಡ ಭಾಷಾ ವಿದ್ವಾಂಸರು ಈಗಾಗಲೇ ದ್ರಾವಿಡ ಭಾಷೆಗಳ ಬಗ್ಗೆ ದಾಖಲೆ ಸಹಿತ ನೀಡಿಯಾಗಿದೆ. ದ್ರಾವಿಡ ಭಾಷೆಗಳು ಸಮಾನಾಂತರವಾಗಿ ಬೆಳೆದು ಬಂದಿದ್ದು, ಭಾಷಾ ತಜ್ಞರ ಅಭಿಪ್ರಾಯದಲ್ಲಿ ಯಾವುದೇ ಭಾಷೆ ಇನ್ನೊಂದು ಭಾಷೆಗೆ ಜನ್ಮ ಕೊಡದು. ಕನ್ನಡ ಭಾಷೆಯ ಇತಿಹಾಸ ಕ್ರಿಸ್ತ ಪೂರ್ವ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಒಟ್ಟಾರೆ, ಕಮಲ್ ಹಾಸನ್ ಬೇಜವಾಬ್ದಾರಿ ಹೇಳಿಕೆ ಮತ್ತು ನಡೆಯ ಬಗ್ಗೆ ನಮಗೆ ಅಸಮಾಧಾನ ಇದೆ. ಕೂಡಲೇ ಕಮಲ್ ಹಾಸನ್ ಕ್ಷಮೆ ಕೋರಲಿ. ಇಲ್ಲದಿದ್ದರೆ ಅನಿವಾರ್ಯವಾಗಿ ರಾಜ್ಯದಾದ್ಯಂತ ಉಗ್ರವಾದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಸಂಘವು ಮನವಿಯಲ್ಲಿ ಎಚ್ಚರಿಸಿದೆ.

ಇದೇ ವೇಳೆ ಜಾನಪದ ಕಲಾವಿದರು ಕಮಲ್ ಹಾಸನ್‌ ಹೇಳಿಕೆ ವಿರೋಧಿಸಿ ಹಾಡು ಪ್ರಸ್ತುತ ಪಡಿಸಿದರು. ಜಿಲ್ಲಾಡಳಿತದ ಪರವಾಗಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮನವಿ ಸ್ವೀಕರಿಸಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಸಂಜೀವ ಕುಲಕರ್ಣಿ, ಸತೀಶ ತುರಮರಿ, ಡಾ. ವೀರಣ್ಣಾ ರಾಜೂರ, ಡಾ. ರಾಜೇಶ್ವರಿ ಮಹೇಶ್ವರಯ್ಯ, ಪ್ರಕಾಶ ಉಡಿಕೇರಿ, ರಾಜು ಪಾಟೀಲ ಕುಲಕರ್ಣಿ, ಸಂಜೀವ ಧುಮಕನಾಳ, ಡಾ. ಲಿಂಗರಾಜ ಪಾಟೀಲ, ಆನಂದ ಪಾಟೀಲ, ಬಿ.ಐ. ಈಳಿಗೇರ ಸೇರಿದಂತೆ ಹಲವರಿದ್ದರು.