ಸಾರಾಂಶ
ಹಿರೇಕೆರೂರು:ಅಪರಾಧಗಳಿಂದ ದೂರವಿದ್ದು, ಮನುಷ್ಯ ಸುರಕ್ಷಿತವಾದ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಲೋಕಾಯುಕ್ತ ಇನ್ಸ್ಪೆಕ್ಟರ್ ಮಂಜುನಾಥ ಪಂಡಿತ ಹೇಳಿದರು.
ಅವರು ತಾಲೂಕಿನ ಎತ್ತಿನಹಳ್ಳಿ ಎಂಕೆ ಗ್ರಾಮದಲ್ಲಿ ಹಿರೇಕೆರೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಅಪರಾಧಗಳು ನಮ್ಮ ಬದುಕಿನ ನೆಮ್ಮದಿಯನ್ನು ಹಾಳು ಮಾಡುವುದರೊಂದಿಗೆ ನಮ್ಮ ಅವಲಂಬಿತರು ಕೂಡ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಅದಕ್ಕಾಗಿ ಸಾರ್ವಜನಿಕರು ಜಾಗೃತಿ ವಹಿಸಬೇಕಾದ ಅಗತ್ಯವಿದೆ ಎಂದರು.
ತಿಳಿಯದೇ ಮಾಡಿದ ತಪ್ಪನ್ನು ಕೂಡ ಕಾನೂನು ಎಂದಿಗೂ ಕ್ಷಮಿಸಲಾರದು ಎಂದರು. ಮೊಬೈಲ್ ಫೋನ್ ಬಳಕೆಯಲ್ಲಿ ತುಂಬಾ ಎಚ್ಚರ ವಹಿಸಬೇಕಾ ಅಗತ್ಯವಿದೆ. ನಮಗೆ ಗೊತ್ತಿಲ್ಲದಂತೆ ನಮ್ಮನ್ನ ಅಪರಾಧಿ ಸ್ಥಾನಕ್ಕೆ ನಿಲ್ಲುವಂತ ಕ್ಷಣಗಳನ್ನು ಎದುರಿಸಬೇಕಾಗುತ್ತದೆ ಎಂದರು. ಪೊಲೀಸರೊಂದಿಗೆ ಭಯಪಡದೆ ಧೈರ್ಯವಾಗಿ ಆರೋಪಿಗಳನ್ನು ಹಿಡಿಯಲು ಸಹಕರಿಸಬೇಕು ಎಂದರು.ಇನ್ನೋರ್ವ ಅತಿಥಿ ಹಿರೇಕೆರೂರು ಕೆನರಾ ಬ್ಯಾಂಕ್ ನ ಮ್ಯಾನೇಜರ್ ರವಿಶಂಕರ ಎಂ.ಜಿ ಮಾತನಾಡಿ, ರೈತರಿಗೆ ಬ್ಯಾಂಕಿನಿಂದ ದೊರೆಯುವ ಸೌಲಭ್ಯಗಳು ಮತ್ತು ವಿದ್ಯಾರ್ಥಿಗಳಿಗೆ ಬ್ಯಾಂಕಿನಲ್ಲಿ ಸಿಗುವ ಸಾಲ ಸೌಲಭ್ಯಗಳನ್ನು ಕುರಿತು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಸ್ಥರಾದ ಬಸವಂತಪ್ಪ ಬಸರಹಳ್ಳಿ ವಹಿಸಿದ್ದರು. ಅತಿಥಿಗಳಾಗಿ ಮಾಲತೇಶ ಹಾಲಪ್ಪ ರೆಡ್ಡೇರ, ಸದಾಶಿವಪ್ಪ ಜವನವರ, ಗಿರಿಯಪ್ಪ ಬಣಕಾರ, ಪ್ರಾಧ್ಯಾಪಕರಾದ ಹೇಮಲತಾ.ಕೆ., ಪ್ರಸನ್ನಕುಮಾರ. ಜೆ., ಎನ್ ಎಸ್ ಎಸ್ ಶಿಬಿರಾ ಧಿಕಾರಿಗಳಾದ ಹರೀಶ್.ಡಿ ಮತ್ತು ಗೀತಾ.ಎಂ ಮತ್ತು ಸಹ ಶಿಬಿರಾಧಿಕಾರಿ ಡಾ.ಕಾಂತೇಶ ರೆಡ್ಡಿ ಗೋಡಿಹಾಳ, ಬಸವರಾಜ ಮಾಗಳದ ಮೊದಲಾದವರು ಉಪಸ್ಥಿತರಿದ್ದರು.