ಪುತ್ತೂರು ಮಹಾಲಿಂಗೇಶ್ವರ ದೇವಳ ಅನ್ನಛತ್ರದ ಸ್ಟೀಮ್ ಬಾಯ್ಲರ್ ಘಟಕ ಉದ್ಘಾಟನೆ

| Published : May 09 2025, 12:47 AM IST

ಪುತ್ತೂರು ಮಹಾಲಿಂಗೇಶ್ವರ ದೇವಳ ಅನ್ನಛತ್ರದ ಸ್ಟೀಮ್ ಬಾಯ್ಲರ್ ಘಟಕ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಅನ್ನಛತ್ರಕ್ಕೆ ಕೆನರಾ ಬ್ಯಾಂಕ್‌ನ ರು. ೧೦ ಲಕ್ಷ, ಕರ್ಣಾಟಕ ಬ್ಯಾಂಕ್‌ನ. ೫ ಲಕ್ಷ ಹಾಗೂ ದಾನಿಗಳ ದೇಣಿಗೆಯಲ್ಲಿ ರು. ೧೬ ಲಕ್ಷ ವೆಚ್ಚದಲ್ಲಿ ಅಳವಡಿಸಲಾದ ಸ್ಟೀಮ್ ಬಾಯ್ಲರ್ ಘಟಕ ಮಂಗಳವಾರ ಚಾಲನೆಗೊಂಡಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಅನ್ನಛತ್ರಕ್ಕೆ ಕೆನರಾ ಬ್ಯಾಂಕ್‌ನ ರು. ೧೦ ಲಕ್ಷ, ಕರ್ಣಾಟಕ ಬ್ಯಾಂಕ್‌ನ. ೫ ಲಕ್ಷ ಹಾಗೂ ದಾನಿಗಳ ದೇಣಿಗೆಯಲ್ಲಿ ರು. ೧೬ ಲಕ್ಷ ವೆಚ್ಚದಲ್ಲಿ ಅಳವಡಿಸಲಾದ ಸ್ಟೀಮ್ ಬಾಯ್ಲರ್ ಘಟಕ ಮಂಗಳವಾರ ಚಾಲನೆಗೊಂಡಿತು. ದೇವಳದ ಪ್ರಧಾನ ಅರ್ಚಕ ವೇ.ಮೂ. ವಸಂತ ಕುಮಾರ್ ಕೆದಿಲಾಯ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟನೆ ನೆರವೇರಿಸಿದ ಶಾಸಕ ಅಶೋಕ್ ರೈ ಮಾತನಾಡಿ, ದೇವಾಲಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಶುಕ್ರವಾರ ಮಾಸ್ಟರ್ ಪ್ಲಾನ್ ಅನುಷ್ಠಾನಕ್ಕೆ ತರುವ ಬಗ್ಗೆ ಸಭೆ ಕರೆಯಲಾಗಿದೆ. ಅಧಿಕಾರಿಗಳು, ಸಮಿತಿಯವರು, ತಾಂತ್ರಿಕ ವಿಭಾಗದವರು ಇದರಲ್ಲಿ ಭಾಗವಹಿಸಲಿದ್ದಾರೆ. ೨೦ ಮಂದಿಯ ಜೀರ್ಣೋದ್ಧಾರ ಸಮಿತಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು.

ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನ್ಯಾಯಾಲಯದಲ್ಲಿ ತಡೆಗಳಿಲ್ಲ. ದೇವಾಲಯದ ಜಾಗದಲ್ಲಿ ಸ್ವಾಧೀನ ಇದ್ದರೆ, ಆದೇಶವಿಲ್ಲದೆ ಎಬ್ಬಿಸುವ ಹಾಗಿಲ್ಲ ಎಂದು ಹೇಳಲಾಗಿದೆ. ಈ ಆದೇಶದಿಂದ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಲೀ, ದೇವಸ್ಥಾನದ ಜಾಗಕ್ಕಾಗಲೀ ಯಾವುದೇ ತೊಂದರೆಗಳಿಲ್ಲ. ಈಗ ನೀಡಿದ ಆದೇಶ ಪ್ರಶ್ನೆ ಮಾಡುವ ಜತೆಗೆ ದೇವಸ್ಥಾನದ ಎಲ್ಲಾ ಜಾಗ ಹಿಂಪಡೆಯಲಾಗುವುದು. ನ್ಯಾಯ ಕಟ್ಟಲೆಗೆ ಹೋಗುವವರು ಮಹಾಲಿಂಗೇಶ್ವರನ ಮೇಲೆ ಹೋಗುತ್ತಿರುವುದೆಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಹೋರಾಟ ಮಾಡುತ್ತಿರುವುದು, ವಾದ ಮಾಡುತ್ತಿರುವುದು ಯಾರ ವಿರುದ್ಧ ಎಂಬುದನ್ನು ಜನ ಅರ್ಥಮಾಡಬೇಕಾಗಿದೆ ಎಂದು ಶಾಸಕರು ತಿಳಿಸಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಕೆನರಾ ಬ್ಯಾಂಕ್ ರೀಜನಲ್ ಹೆಡ್ ರಂಜನ್ ಕುಮಾರ್, ಕರ್ಣಾಟಕ ಬ್ಯಾಂಕ್ ಚೀಫ್ ಮ್ಯಾನೇಜರ್ ಶ್ರೀಹರಿ, ಅಸಿಸ್ಟೆಂಟ್ ಮ್ಯಾನೇಜರ್ ಅಶೋಕ್ ಮೂಲ್ಯ, ರಾಜ್ಯ ನಗರಾಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಹಾಗೂ ಪುತ್ತೂರು ತಾಲೂಕು ನೋಡೆಲ್ ಅಧಿಕಾರಿಯಾದ ಎಚ್.ಕೆ.ಕೃಷ್ಣಮೂರ್ತಿ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ. ಈಶ್ವರ ಬೇಡೇಕರ್, ಕೃಷ್ಣವೇಣಿ, ನಳಿನಿ ಪಿ. ಶೆಟ್ಟಿ, ದಿನೇಶ್ ಕುಲಾಲ್ ಪಿ. ವಿ., ಮಹಾಬಲ ರೈ ಒಳತ್ತಡ್ಕ, ಸುಭಾಶ್ ರೈ ಬೆಳ್ಳಿಪ್ಪಾಡಿ, ವಿನಯ ಕುಮಾರ್ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ಕೆ. ವಿ. ಶ್ರೀನಿವಾಸ ಮತ್ತಿತರರು ಇದ್ದರು.