ಕನ್ನಡಪ್ರಭವಾರ್ತೆ ತುರುವೇಕೆರೆ

ತಾಲೂಕಿನಲ್ಲಿ ಹಲವು ಗ್ರಾಮಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು. ತಾಲೂಕಿನ ತೊರೆಮಾವಿನಹಳ್ಳಿ ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಮೂಲಭೂತ ಸೌಕರ್ಯ ಅನುದಾನದಲ್ಲಿ ಸುಮಾರು 1 ಕೋಟಿ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಎನ್.ಎಚ್.50 ಎ ರಸ್ತೆಯಿಂದ ತೊರೆಮಾವಿನಹಳ್ಳಿ ಗ್ರಾಮದವರೆಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಲವು ದಿನಗಳಿಂದ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕೆಂಬುದು ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿತ್ತು. ಈ ರಸ್ತೆಯಲ್ಲಿ ಜನರು ಸಂಚರಿಸಲು ಬಹಳ ಕಷ್ಟಪಡಬೇಕಿತ್ತು. ಒಂದು ಕೋಟಿ ವೆಚ್ಚದಲ್ಲಿ ಕೆಲ ಭಾಗ ಡಾಂಬಾರು ರಸ್ತೆ ಮತ್ತು ಕೆಲ ಭಾಗ ಸಿಸಿ ರಸ್ತೆ ನಿರ್ಮಾಣ ಮಾಡಲು ಯೋಜನೆ ತಯಾರಾಗಿದೆ. ಹಾಗಾಗಿ ಉತ್ತಮ ರಸ್ತೆಯಾಗಲಿದೆ ಸಾರ್ವಜನಿಕರಿಗೆ ಉಪಯೋಗವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ್ ಕೃಷ್ಣಪ್ಪ, ಬೂವನಹಳ್ಳಿಪುನೀತ್, ಇಂದ್ರಕುಮಾರ್, ಹೊಸಳ್ಳಿ ದೇವರಾಜು, ಶ್ರೀನಿವಾಸ್, ರಾಮಕೃಷ್ಣ, ತಿಮ್ಮೇಗೌಡ, ಶಿವರುದ್ರಪ್ಪ, ತಿಮ್ಮಪ್ಪ ಸೇರಿದಂತೆ ತೊರೆಮಾವಿನಹಳ್ಳಿ, ಭೂವನಹಳ್ಳಿ ಗ್ರಾಮಸ್ಥರು ಇದ್ದರು.