ಸಾರಾಂಶ
ಕ್ಯಾದಿಗೆರೆಯಲ್ಲಿ ಟ್ಯಾಂಕ್ ನಿರ್ಮಾಣಕ್ಕೆ । ₹452 ಕೋಟಿ ವೆಚ್ಚ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ತಾಲೂಕು ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾದಿಗೆರೆ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ವಲಯ ಬ್ಯಾಲೆನ್ಸಿಂಗ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಶನಿವಾರ ಭೂಮಿಪೂಜೆ ನೆರವೇರಿಸಿದರು.ಕ್ಯಾದಿಗೆರೆ ಗ್ರಾಮದ ಮಟ್ಟಿ ಬಸವೇಶ್ವರ ದೇವಸ್ಥಾನದ ಬಳಿ ಹಮ್ಮಿಕೊಳ್ಳಲಾದ ಕಾರ್ಯಕ್ರಮಮದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, 452 ಕೋಟಿ ರು. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ವಾಣಿ ವಿಲಾಸ ಸಾಗರ ಜಲಾಶಯದಿಂದ ಚಿತ್ರದುರ್ಗ ಹಾಗೂ ಹಿರಿಯೂರು ತಾಲೂಕಿನ ಬಿಟ್ಟು ಹೋದ 301 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದೆ ಎಂದರು.
ಬಹುಗ್ರಾಮ ಕುಡಿವ ನೀರಿನ ಯೋಜನೆಯಿಂದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 140 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಕಾಮಗಾರಿಗೆ ಸುಮಾರು 250 ಕೋಟಿ ರು. ವೆಚ್ಚವಾಗಲಿದೆ. ಇದರಲ್ಲಿ 1 ಮಾಸ್ಟರ್ ಬ್ಯಾಲೆನ್ಸಿಂಗ್ ಟ್ಯಾಂಕ್, 9 ವಲಯ ಬ್ಯಾಲೆನ್ಸಿಂಗ್ ಟ್ಯಾಂಕ್ಗಳು ಹಾಗೂ 40 ಓವರ್ ಹೆಡ್ ಟ್ಯಾಂಕ್ಗಳು ಇದೇ ಯೋಜನೆಯಲ್ಲಿ ನಿರ್ಮಾಣವಾಗಲಿವೆ. 9 ವಲಯ ಬ್ಯಾಲೆನ್ಸಿಂಗ್ ಟ್ಯಾಂಕ್ಗಳ ಪೈಕಿ, ಕ್ಯಾದಿಗೆರೆ ಗ್ರಾಮದಲ್ಲಿ ಒಂದು ಬ್ಯಾಲೆನ್ಸಿಂಗ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಈ ಟ್ಯಾಂಕ್ನಿಂದ ದೊಡ್ಡಸಿದ್ದವ್ವನಹಳ್ಳಿ, ಜೆ.ಎನ್.ಕೋಟೆ, ದ್ಯಾಮವ್ವನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ಮಾಹಿತಿ ನೀಡಿದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಶಿವಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ತಿಪ್ಪೇಸ್ವಾಮಿ, ಸದಸ್ಯರಾದ ಕಲ್ಲಪ್ಪ, ಲಕ್ಷ್ಮಿದೇವಿ, ಕಲ್ಲೇಶ್, ವಿದ್ಯಾವತಿ, ರೆಹಮಾನ್ ಸಾಬ್, ರಾಕೇಶ್, ಮಾರುತಿ ಸಾಲಪಯ್ಯ, ಸುಧಮ್ಮ, ಇಂಗಳದಾಳು ಗ್ರಾಪಂ ಅಧ್ಯಕ್ಷ ಶಿರವಲಪ್ಪ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್, ಮುಖಂಡರಾದ ಲಿಂಗಬಸಪ್ಪ, ದೇವೇಂದ್ರಪ್ಪ, ಪಾಪಣ್ಣ, ಚಿತ್ರದುರ್ಗ ನಗರಸಭಾ ಸದಸ್ಯ ರಮೇಶ್ ಇದ್ದರು.