ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಮಳವಳ್ಳಿ ಉಪಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸಲು ಶ್ರಮಿಸಲಾಗುವುದು ಎಂದು ಮನ್ಮುಲ್ ನೂತನ ನಿರ್ದೇಶಕ ಡಿ. ಕೃಷ್ಣೇಗೌಡ ಭರವಸೆ ನೀಡಿದರು.ಪಟ್ಟಣದ ಮನ್ಮುಲ್ ಉಪಕಚೇರಿಯಲ್ಲಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಮತ್ತು ನೌಕರರ ಕಲ್ಯಾಣ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಡೆದ ಸದಸ್ಯ ಫಲಾನುಭವಿಗಳಿಗೆ ಚೆಕ್ ವಿತರಣೆ, ಕೃತಕ ಗರ್ಭಧಾರಣೆ ಕಾರ್ಯಕರ್ತರಿಗೆ ಸಮವಸ್ತ್ರ ಹಾಗೂ ರೈತರಿಗೆ ಮೇವಿನ ಜೋಳವನ್ನು ವಿತರಿಸಿ ಮಾತನಾಡಿದರು.
ಉಪ ಕಚೇರಿಗೆ ಸೇರಿದ 2 ಎಕರೆ ಖಾಲಿ ಜಾಗದಲ್ಲಿ ಕಚೇರಿ ಹಾಗೂ ತರಬೇತಿಗಾಗಿ ಸಭಾಂಗಣವನ್ನು ನಿರ್ಮಿಸಲು ಆಗತ್ಯ ಕ್ರಮ ಕೈಗೊಳ್ಳಲಾಗುವುದು. ನಿರ್ದೇಶಕರಾಗಿ ಆಯ್ಕೆ ಮಾಡಿದ ಮತದಾರರು ಹಾಗೂ ಶಾಸಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನ್ಯಾಯಾಲಯದಿಂದ ಫಲಿತಾಂಶ ಬರಲು ಮೂರು ತಿಂಗಳು ತಡವಾಗಿತ್ತಾದ್ದರೂ ಮುಂದಿನ ದಿನಗಳಲ್ಲಿ ರೈತರಿಗೆ ಸಿಗಬೇಕಾದ ಸೌಲಭ್ಯವನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.ಮನ್ಮುಲ್ ಉಪಕಚೇರಿ ಮುಖ್ಯಸ್ಥ ಡಾ. ಸದಾಶಿವ ಮಾತನಾಡಿ, ಸರಳತೆ ಹಾಗೂ ರೈತ ಕುಟುಂಬದಿಂದ ಬಂದು ರೈತರ ಬಗ್ಗೆ ಕಾಳಜಿ ಹೊಂದಿರುವ ನೂತನ ನಿರ್ದೇಶಕ ಕೃಷ್ಣೇಗೌಡ ಅವರಿಗೆ ಮನ್ಮುಲ್ ಕಚೇರಿ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ. ಮಳವಳ್ಳಿ ಉಪಕಚೇರಿ ಮಂಡ್ಯ ಒಕ್ಕೂಟ ಹಾಗೂ ರೈತರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ತಾಲೂಕಿನಲ್ಲಿ 151 ಸಂಘಗಳಿದ್ದು, 85 ಸಾಮಾನ್ಯ ಸಂಘ, 34 ಬಿಎಂಸಿಗಳ ಮೂಲಕ 6 ಆರ್ಎಂಟಿಗಳ ಮೂಲಕ ಒಂದು ಲಕ್ಷದ ಇಪ್ಪತ್ತು ಸಾವಿರ ಲೀಟರ್ ಹಾಲನ್ನು ಗೆಜ್ಜಲಗೆರೆಗೆ ಕಳುಹಿಸಿ ಕೊಡಲಾಗುತ್ತಿದೆ. ಹೆಚ್ಚುವರಿ ಹಾಲನ್ನು 2 ಪಿಜಿಸಿ ವಾಹನದ ಮೂಲಕ ಒಕ್ಕೂಟಕ್ಕೆ ಕಳುಹಿಸಲಾಗುತ್ತದೆ. ಜೊತೆಗೆ ಮನ್ಮುಲ್ ವತಿಯಿಂದ ರೈತರಿಗೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.ಮನ್ಮುಲ್ ನಿರ್ದೇಶಕ ಆರ್.ಎನ್ ವಿಶ್ವಾಸ್ ಮಾತನಾಡಿ, ಒಕ್ಕೂಟದ ವತಿಯಿಂದ ಹೆಚ್ಚಿನ ಅನುದಾನ ತಂದು ರೈತರ ಹೈನುಗಾರಿಕೆಗೆ ಒತ್ತು ನೀಡಲಾಗುವುದು. ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರ ಸಲಹೆ ಮೇರೆಗೆ ಇಬ್ಬರು ನಿರ್ದೇಶಕರು ಒಗ್ಗಟ್ಟಿನಿಂದ ಸಂಘಗಳ ಅಭಿವೃದ್ಧಿಗೆ ಕೈ ಜೋಡಿಸುವುದಾಗಿ ತಿಳಿಸಿದರು.
ಮುಖಂಡರಾದ ಬಂಕ್ ಮಹದೇವು ಸೇರಿ ಪಶು ವೈದ್ಯರು, ಒಕ್ಕೂಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.