ಗುಂಡಿಟ್ಟು ಕೊಲ್ಲಬೇಕೆಂಬ ಹೇಳಿಕೆಗೆ ಈಗಲೂ ಬದ್ಧ: ಕೆ.ಎಸ್‌.ಈಶ್ವರಪ್ಪ

| Published : Feb 10 2024, 01:46 AM IST / Updated: Feb 10 2024, 12:42 PM IST

KS Eshwarappa
ಗುಂಡಿಟ್ಟು ಕೊಲ್ಲಬೇಕೆಂಬ ಹೇಳಿಕೆಗೆ ಈಗಲೂ ಬದ್ಧ: ಕೆ.ಎಸ್‌.ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ದೇಶ ವಿಭಜನೆ ಮಾತನಾಡುವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ನಾನು ದಾವಣಗೆರೆಯಲ್ಲಿ ಹೇಳಿದ ಮಾತಿಗೆ ಈಗಲೂ ಬದ್ಧನಾಗಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ದೇಶ ವಿಭಜನೆ ಮಾತನಾಡುವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ನಾನು ದಾವಣಗೆರೆಯಲ್ಲಿ ಹೇಳಿದ ಮಾತಿಗೆ ಈಗಲೂ ಬದ್ಧನಾಗಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರ ವಿಭಜನೆ ಮಾತನಾಡುವವರನ್ನ ಗುಂಡಿಕ್ಕಿ ಕೊಲ್ಲುವ ಕಾಯ್ದೆ ತನ್ನಿ ಎಂದು ಪ್ರಧಾನಿ ಮೋದಿ ಅವರಿಗೆ ಹೇಳಿದ್ದೇನೆ. ಜವಾಬ್ದಾರಿ ಇಲ್ಲದೇ ನಾನು ಹೇಳಲ್ಲ. 

24 ಗಂಟೆಯೊಳಗೆ ಮಾತನ್ನು ವಾಪಸ್ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಕೇಸ್ ದಾಖಲು ಎಂಬ ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ. ಅವರಿಗೆ ತಾಕತ್ತಿದ್ದರೆ ಕೇಸ್ ಹಾಕಲಿ ಎಂದು ಸವಾಲು ಹಾಕಿದರು.

ದೇಶದಲ್ಲಿ ಹನುಮಧ್ವಜ ಹಾರಿಸಲು ಅವಕಾಶ ಇಲ್ಲವಲ್ಲ‌ ಎಂದು ಬೇಸರವಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರದ ಧೋರಣೆಯೇ ಕಾರಣ. ಹನುಮಧ್ವಜ ವಿಚಾರದಲ್ಲಿ ಮಂಡ್ಯ ಬಂದ್ ಯಶಸ್ವಿಯಾಗಿದೆ. ಕಾಂಗ್ರೆಸ್ ನವರಿಗೆ ನಿರ್ನಾಮ ಆದರೂ ಬುದ್ದಿ ಬಂದಿಲ್ಲ.‌ 

ಮುಂದೆ ಇದಕ್ಕೆ ಜನರೇ ಉತ್ತರ ನೀಡುತ್ತಾರೆ.‌ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ರೀತಿ ಎಲ್ಲ ನಡೆಯುತ್ತಿದೆ. ಮುಂದೆ ಇದೇ ಕಾಂಗ್ರೆಸ್ಸಿಗ್ಗರು ಜೈ ಶ್ರೀರಾಮ್, ಹರಹರ ಮಹಾದೇವ ಅನ್ನೋ ಕಾಲ ಬರುತ್ತೆ ಎಂದು ಭವಿಷ್ಯ ನುಡಿದರು.‌

ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್ಐಆರ್ ದಾಖಲು ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಮುಸ್ಲಿಮರ ತುಷ್ಟೀಕರಣ ಮಾಡುತ್ತಿದೆ. 

ಇದರ ಭಾಗವಾಗಿಯೇ ಪರೀಕ್ಷೆ ಸೇರಿದಂತೆ ಎಲ್ಲ ರೀತಿಯಲ್ಲೂ ಅವರಿಗೆ ಅನುಕೂಲ ಮಾಡಿಕೊಡುತ್ತಿದೆ. ಎಷ್ಟೇ ಎಫ್ಐಆರ್ ದಾಖಲಿಸಲಿ ನಾವು ಹೆದರುವುದಿಲ್ಲ. ರಾಷ್ಟ್ರಭಕ್ತರಾದ ನಾವು ಇದನ್ನು ಎದುರಿಸುತ್ತೇವೆ ಎಂದು ಖಾರವಾಗಿ ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ಮುಂದುವರಿಕೆ ಎಂಬ ಕೆಂಪಣ್ಣ ಹೇಳಿಕೆಗೆ ಪ್ರತಿಕ್ರಿಯೆಗೆ ನೀಡಿದ ಅವರು, ಯಾವ ಇಲಾಖೆಯಲ್ಲಿ ಯಾವ ಅಧಿಕಾರಿಗಳು, ಸಚಿವರು ಕಮಿಷನ್ ಕೇಳಿದ್ದಾರೆ ಎಂದು ಕೆಂಪಣ್ಣ ಬಹಿರಂಗಪಡಿಸಲಿ ಎಂದು ಸವಾಲು ಎಸೆದರು.

ಟಾಪ್‌ ಕೋಟ್‌ ಸಂಸದ ಡಿ.ಕೆ‌.ಸುರೇಶ್ ದಕ್ಷಿಣ ಭಾರತ ವಿಭಜಿಸುವ ಹೇಳಿಕೆ ನೀಡಿದ್ದಾರೆ. ವಿನಯ್ ಕುಲಕರ್ಣಿ ಹಾಗೂ ಡಿ.ಕೆ‌.ಶಿವಕುಮಾರ್ ಬೆಂಬಲ ನೀಡಿದ್ದಾರೆ. ಆದರೆ, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಇದನ್ನು ಖಂಡಿಸಿದ್ದಾರೆ. ಹೀಗಿರುವಾಗ ಎಚ್.ಕೆ.ಪಾಟೀಲ್ ಈ ರೀತಿ ಮಾತನಾಡಿರುವುದು ಅಚ್ಚರಿ ತಂದಿದೆ - ಕೆ.ಎಸ್‌. ಈಶ್ವರಪ್ಪ, ಮಾಜಿ ಡಿಸಿಎಂ