ಗಣಪತಿ ವಿಸರ್ಜನೆಯ ಮೆರವಣಿಗೆ ವೇಳೆ ಕಲ್ಲು ತೂರಾಟ

| Published : Sep 12 2024, 01:52 AM IST

ಸಾರಾಂಶ

ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಿಡಿಗೇಡಿಗಳು ನಡೆಸುತ್ತಿದ್ದ ಕಲ್ಲು ತೂರಾಟ ಇದೇ ಮೊದಲೇನಲ್ಲ. ಕಳದೆ ವರ್ಷವೂ ದರ್ಗಾ ಬಳಿ ಗಣಪತಿ ಮೆರವಣಿಗೆ ನಡೆಯುವ ವೇಳೆ ಕಲ್ಲು ತೂರಾಟ ನಡೆಸಲಾಗಿತ್ತು. ಆಗಲೂ ಯಾರ ವಿರುದ್ಧವೂ ಕ್ರಮ ಕೈಗೊಂಡಿರಲಿಲ್ಲ. ಈಗ ಮತ್ತೆ ಅದು ಮರುಕಳಿಸಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗಣಪತಿ ವಿಸರ್ಜನೆಗೆ ಮುನ್ನ ಪಟ್ಟಣದಲ್ಲಿ ನಡೆಯುತ್ತಿದ್ದ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಪಟ್ಟಣದ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಬುಧವಾರ ರಾತ್ರಿ ನಡೆದಿದೆ. ಘಟನೆಯಿಂದ ಪಟ್ಟಣದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ.

ಕಲ್ಲು ತೂರಾಟ ನಡೆಸಿದ ಘಟನೆಯಿಂದ ಹಿಂದೂ-ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಪರಸ್ಪರರು ಕಲ್ಲು ತೂರಾಟ ಮಾಡಿ, ಬಾಟಲಿಗಳನ್ನು ಎಸದೆ ಪರಿಣಾಮ 8 ಮಂದಿ ಹಿಂದೂ ಕಾರ್ಯಕರ್ತರು ಗಾಯಗೊಂಡಿದ್ದು, ಪೊಲೀಸ್ ಪೇದೆಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ನಾಲ್ಕೈದು ಬಾರಿ ಲಾಠಿ ಪ್ರಹಾರ ನಡೆಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸ ನಡೆಸುತ್ತಿದ್ದಾರೆ.

ನಾಗಮಂಗಲ ಟಿ.ಬಿ.ಬಡಾವಣೆಯ ಬದರಿಕೊಪ್ಪಲಿನ ಗಜಪಡೆ ಯುವಕರ ಸಂಘದಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಬುಧವಾರ ಸಂಜೆ ಬದರಿಕೊಪ್ಪಲಿನಿಂದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದ ಮೂಲಕ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಹೊರಟು ತಾಲೂಕು ಕಚೇರಿ ಬಳಿಯ ಮಂಡ್ಯ ಸರ್ಕಲ್‌ಗೆ ಆಗಮಿಸಿದರು.

ನಂತರ ಅಲ್ಲಿಂದ 200 ಮೀಟರ್ ದೂರದವರೆಗೆ ಮೈಸೂರು ರಸ್ತೆಯಲ್ಲಿ ತೆರಳಿ ಯೂಟರ್ನ್ ಪಡೆದು ವಾಪಸ್ಸಾಗುವ ಸಲುವಾಗಿ ಅಲ್ಲಿರುವ ದರ್ಗಾ ಬಳಿ ಮೆರವಣಿಗೆ ತೆರಳುತ್ತಿದ್ದಂತೆ ಕಿಡಿಗೇಡಿಗಳು ಗಣಪತಿ ಮೂರ್ತಿ ಮೆರವಣಿಗೆ ನಡೆಸುತ್ತಿದ್ದವರ ಮೇಲೆ ಏಕಾಏಕಿ ಕಲ್ಲು-ಬಾಟಲಿಗಳನ್ನು ತೂರಿದ್ದಾರೆ.

ಇದರಿಂದ ಉದ್ರಿಕ್ತಗೊಂಡ ಯುವಕರ ಗುಂಪು ಕಿಡಿಗೇಡಿಗಳ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಇದೇ ವೇಳೆಗೆ ಮುಸ್ಲಿಂ ಗುಂಪಿನವರೆಲ್ಲರೂ ಒಂದಾಗಿ ಮೆರವಣಿಗೆ ನಡೆಸುತ್ತಿದ್ದವರ ಮೇಲೆ ಮತ್ತಷ್ಟು ತೀವ್ರವಾಗಿ ಕಲ್ಲು ತೂರಾಟ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರೂ ಕೂಡ ಸ್ಥಳಕ್ಕೆ ಧಾವಿಸಿ ಪ್ರತಿದಾಳಿ ನಡೆಸಿದ್ದಾರೆ.

ಮಂಡ್ಯ-ನಾಗಮಂಗಲ ರಸ್ತೆಯಲ್ಲಿ ಮುಸ್ಲಿಮರ ಗುಂಪು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರೆ, ಟಿ.ಮರಿಯಪ್ಪ ಸರ್ಕಲ್ ಬಳಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ನರೆದಿದ್ದರು. ಎರಡೂ ಕಡೆಯಿಂದ ಕಲ್ಲು-ಬಾಟಲಿಗಳ ತೂರಾಟ ಜೋರಾಗಿಯೇ ನಡೆದಿತ್ತು.ಮುಸ್ಲಿಂ ಕಿಡಿಗೇಡಿಗಳಿಂದ ಪೊಲೀಸರು ಲಾಂಗ್ ವಶಪಡಿಸಿಕೊಂಡರು.

ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಮೂರ್ನಾಲ್ಕು ಬಾರಿ ಲಾಠಿ ಪ್ರಹಾರ ನಡೆಸಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರಲಿಲ್ಲ. ಅಲ್ಲಲ್ಲಿ ಗುಂಪುಗೂಡುತ್ತಿದ್ದ ಉಭಯ ಗುಂಪಿನವರು ಕಲ್ಲು ತೂರಾಟದಲ್ಲಿ ನಿರತರಾಗಿದ್ದರು. ಮೆರವಣಿಗೆ ನಡೆಸುತ್ತಿದ್ದ ಯುವಕರ ಗುಂಪು ಪೊಲೀಸ್ ಠಾಣೆ ಬಳಿಗೆ ತೆರಳಿ ಅಲ್ಲೇ ಗಣೇಶ ಮೂರ್ತಿಯನ್ನಿಟ್ಟು ಪ್ರತಿಭಟನೆಗಿಳಿದರು. ಕಲ್ಲು ತೂರಾಟ ನಡೆಸಿ ಘರ್ಷಣೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಿಡಿಗೇಡಿಗಳು ನಡೆಸುತ್ತಿದ್ದ ಕಲ್ಲು ತೂರಾಟ ಇದೇ ಮೊದಲೇನಲ್ಲ. ಕಳದೆ ವರ್ಷವೂ ದರ್ಗಾ ಬಳಿ ಗಣಪತಿ ಮೆರವಣಿಗೆ ನಡೆಯುವ ವೇಳೆ ಕಲ್ಲು ತೂರಾಟ ನಡೆಸಲಾಗಿತ್ತು. ಆಗಲೂ ಯಾರ ವಿರುದ್ಧವೂ ಕ್ರಮ ಕೈಗೊಂಡಿರಲಿಲ್ಲ. ಈಗ ಮತ್ತೆ ಅದು ಮರುಕಳಿಸಿದ್ದು, ಶಾಂತಿಯುತವಾಗಿ ನಡೆಯುತ್ತಿದ್ದ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಎ.ಆರ್.ಸುಮಿತ್, ಸಿಪಿಐ ನಿರಂಜನ್, ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್ ಸ್ಥಳದಲ್ಲಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ನಡೆಸುತ್ತಿದ್ದರು.

ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ರಾಜ್ಯ ಸಶಸ್ತ್ರ ಪಡೆಯ ತುಕಡಿ, ಎರಡು ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಘರ್ಷಣೆ ಸಮಯದಲ್ಲಿ ಮಂಡ್ಯ ಸರ್ಕಲ್ ಬಳಿ ವಿದ್ಯುತ್ ಸ್ಥಗಿತಗೊಂಡಿತ್ತು.

ಹೆದ್ದಾರಿಯಲ್ಲಿ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ವಿದ್ದರು. ಮಂಡ್ಯ ರಸ್ತೆ ಹಾಗೂ ಮೈಸೂರು ರಸ್ತೆ ಬದಿಯಲ್ಲಿ ನಿಂತಿದ್ದ ಕೆಲ ವಾಹನಗಳನ್ನು ಜಖಂಗೊಳಿಸಿದ್ದಾರೆ.