ಸಾರಾಂಶ
ರಾಜ್ಯ ಸರ್ಕಾರಕ್ಕೆ ಹುಬ್ಬಳ್ಳಿ-ಧಾರವಾಡ ಶಾಸಕ ಅರವಿಂದ ಬೆಲ್ಲದ ತರಾಟೆ
ಕನ್ನಡಪ್ರಭ ವಾರ್ತೆ ಸುರಪುರ
ಹುಬ್ಬಳ್ಳಿ-ಧಾರವಾಡ ಶಾಸಕ ಅರವಿಂದ ಬೆಲ್ಲದ ನೇತೃತ್ವದ ಬಿಜೆಪಿ ಪಕ್ಷದ ಬರಗಾಲ ಅಧ್ಯಯನ ತಂಡ ತಾಲೂಕಿನ ಕೆಂಭಾವಿ ವಲಯದ ಐನಾಪೂರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ರಾಜ್ಯ ಸರ್ಕಾರ ಕಾರ್ ಖರೀದಿ, ಪಲ್ಲಂಗ ಖರೀದಿ ಬಿಟ್ಟು ರೈತರಿಗೆ ನೆರವಾಗಬೇಕು. ಬರಗಾಲ ಹಿನ್ನೆಲೆ ರೈತರಿಗೆ ಸಮರ್ಪಕ ಪರಿಹಾರ ಒದಗಿಸಬೇಕು ಎಂದು ಹೇಳಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಅನುದಾನ ನೀಡಿದ್ದರೂ ರಾಜ್ಯ ಸರ್ಕಾರ ಅದನ್ನು ವಿನಿಯೋಗಿಸಲು ಸಂಪೂರ್ಣ ವಿಫಲವಾಗಿದೆ. ಈ ಭಾರಿ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಕೂಡಲೇ ರೈತರಿಗೆ ಸೂಕ್ತ ಪರಿಹಾರ ಒದಗಿಸಿ ನೆರವಾಗಬೇಕು ಎಂದರು.ನಮ್ಮ ಪಕ್ಷದ ವತಿಯಿಂದ ಒಟ್ಟು 8 ತಂಡಗಳು ಬರಗಾಲ ಅಧ್ಯಯನ ಕೈಗೊಂಡಿದ್ದು, ಅಂತಿಮ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಐನಾಪುರ ಗ್ರಾಮದ ಬಸಯ್ಯ ಸ್ವಾಮಿ ಎಂಬುವವರ ಜಮೀನಿನಲ್ಲಿ ಬೆಳೆದ ಹತ್ತಿ ಬೆಳೆಯನ್ನು ವೀಕ್ಷಿಸಲಾಯಿತು. ಸಂಸದ ಅಮರೇಶ್ವರ ನಾಯಕ, ಮಾಜಿ ಶಾಸಕ ನರಸಿಂಹ ನಾಯಕ (ರಾಜೂಗೌಡ), ಪಕ್ಷದ ಮುಖಂಡರಾದ ರಾಜಾ ಹನುಮಪ್ಪ ನಾಯಕ (ತಾತಾ), ಡಾ.ಚಂದ್ರಶೇಖರ ಸುಬೇದಾರ, ಅಮೀನರೆಡ್ಡಿ ಯಾಳಗಿ, ಸುರೇಶ ಸಜ್ಜನ್, ಕೆ.ಕರೆಪ್ಪ, ಎಚ್.ಸಿ. ಪಾಟೀಲ್, ಗುರು ಕಾಮಾ, ರಾಜುಗೌಡ ಉಕ್ಕಿನಾಳ, ರಾಜು ಗೂಗಲ್, ಅಡಿವೆಪ್ಪ ಜಾಕಾ, ಶ್ರೀದೇವಿ ಶೆಟ್ಟಿಹಾಳ, ದೇವೇಂದ್ರ ಕಾನಿಹಾಳ, ಭೀಮರಾಯ ಭಂಡಾರಿ ಸೇರಿ ಹಲವರಿದ್ದರು.