ಯಲಬುರ್ಗಾ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ತೊಂಡಿಹಾಳದಲ್ಲಿ ಭಾರಿ ಮಳೆಗೆ ಹಳ್ಳ ತುಂಬಿ ಹರಿದು ಜನಜೀವನ ಅಸ್ತವ್ಯಸ್ತವಾಗಿತ್ತು.
ತಾಲೂಕಿನ ತೊಂಡಿಹಾಳ, ಬಂಡಿಹಾಳ, ಕುಕನೂರಿನ ಬಿನ್ನಾಳ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಹಳ್ಳ ತುಂಬಿ ಹರಿದಿದೆ. ಜಮೀನುಗಳು ಜಲಾವೃತವಾಗಿವೆ. ತೊಂಡಿಹಾಳದಿಂದ ನರೇಗಲ್ ಸಂಪರ್ಕಿಸುವ ಮುಖ್ಯ ರಸ್ತೆಗೆ ಅಡ್ಡಲಾಗಿ ಹರಿಯುವ ಹಳ್ಳ ತುಂಬಿ ಬಂದಿದ್ದು, ಊರ ಹೊರ ವಲಯದಲ್ಲಿರುವ ಹೈಸ್ಕೂಲ್ ವಿದ್ಯಾರ್ಥಿಗಳು ರಸ್ತೆ ದಾಟಲು ಹರಸಾಹಸಪಟ್ಟರು. ಬಳಿಕ ಟ್ರ್ಯಾಕ್ಟರ್ ಮೂಲಕ ಅವರನ್ನು ರಸ್ತೆ ದಾಟಿಸಲಾಯಿತು. ರೈತರು, ವಾಹನ ಸವಾರರಿಗೆ ಸಂಚಾರಕ್ಕೆ ತೊಂದರೆಯಾಯಿತು.ತೊಂಡಿಹಾಳ-ಬಂಡಿಹಾಳ ಹಳ್ಳ ತುಂಬಿ ಬಂದಿದೆ. ರಭಸದಿಂದ ಹರಿದ ನೀರು ರಸ್ತೆ ಮೇಲೆಯೂ ಹರಿದಿದೆ. ರಸ್ತೆ ಮೇಲೆ ಮಳೆ ನೀರು ಹರಿದು ಸಂಚಾರ ಅಸ್ತವ್ಯಸ್ತವಾಗಿತ್ತು. ತೊಂಡಿಹಾಳ-ನರೇಗಲ್ ಸಂಪರ್ಕಿಸುವ ಮುಖ್ಯರಸ್ತೆಗೆ ಸೇತುವೆ ನಿರ್ಮಾಣಕ್ಕಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದಾಗ ಶಾಸಕ ಬಸವರಾಜ ರಾಯರಡ್ಡಿ ₹೩.೯೦ ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದರು. ಅದಕ್ಕೆ ಅಡಿಗಲ್ಲು ಕೂಡ ಹಾಕಲಾಗಿದೆ. ಆದರೆ ಇದುವರೆಗೂ ಕಾಮಗಾರಿ ಪ್ರಾರಂಭಿಸಿಲ್ಲ. ಹೀಗಾಗಿ ಮಳೆಗಾಲದಲ್ಲಿ ಈ ಭಾಗದ ಜನರು ರಸ್ತೆ ದಾಟಲು ತೊಂದರೆ ಪಡುವಂತಾಗಿದೆ.
ತೊಂಡಿಹಾಳ ಗ್ರಾಮದ ಹೊರ ವಲಯದಲ್ಲಿ ಹೈಸ್ಕೂಲ್ ಇರುವುದರಿಂದ ಮಳೆ ಬಂದರೆ ಹಳ್ಳ ತುಂಬಿ ಬಂದು ರಸ್ತೆ ಮುಳುಗಡೆಯಾಗುತ್ತದೆ. ಕಾರಣ ರಸ್ತೆ ದಾಟಲು ರೈತರು, ವಿದ್ಯಾರ್ಥಿಗಳು ಮತ್ತು ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಮಳೆಗಾಲ ಪ್ರಾರಂಭವಾದರೂ ಮಂಜೂರಾದ ಕಾಮಗಾರಿ ಆರಂಭಿಸದಿರುವುದು ಬೇಸರ ತರಿಸಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ನಾನಾ ಕಡೆ ಸಾಧಾರಣ ಮಳೆ: ತಾಲೂಕಿನ ನಾನಾ ಕಡೆ ಸಾಧಾರಣ ಮಳೆಯಾಗಿದೆ. ರೈತರು ಮುಂಗಾರು ಬಿತ್ತನೆ ಪ್ರಾರಂಭಿಸಿದ್ದು, ಬಿತ್ತನೆಗೆ ಅನುಕೂಲವಾಗಲಿದೆ. ಈಗಾಗಲೇ ಬಿತ್ತನೆಗೊಂಡ ಬೆಳೆಗಳಿಗೆ ಸಹಕಾರಿಯಾಗಲಿದೆ.
ಮಳೆಯಿಂದ ತಾಲೂಕಿನ ತೊಂಡಿಹಾಳ-ನರೇಗಲ್ ಸಂಪರ್ಕಿಸುವ ರಸ್ತೆ ಮಧ್ಯೆ ಹರಿಯುವ ಹಳ್ಳ ತುಂಬಿ ಬಂದಿದ್ದು, ರಸ್ತೆ ದಾಟುವಾಗ ಯಾರಿಗೂ ತೊಂದರೆಯಾಗದಂತೆ ಸ್ಥಳದಲ್ಲಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಯಲಬುರ್ಗಾ ತಹಸೀಲ್ದಾರ್ ಪ್ರಕಾಶ ನಾಶಿ ತಿಳಿಸಿದ್ದಾರೆ.