ಹರಪನಹಳ್ಳಿ: ಹರಪನಹಳ್ಳಿ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿಗಳ ಬಗ್ಗೆ ಮನೆ ಮನೆಗೆ ಅರಿವು ಮೂಡಿಸಿ ಕಾಂಗ್ರೆಸ್‌ ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ನೂತನ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಿಗೆ ಸಲಹೆ ನೀಡಿದರು.

ಅವರು ಪಟ್ಟಣದ ತಮ್ಮ ನಿವಾಸದ ಬಳಿ ಇರುವ ಕಾಂಗ್ರೆಸ್‌ ಭವನದಲ್ಲಿ ನೂತನವಾಗಿ ನೇಮಕಗೊಂಡ ಇಬ್ಬರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರನ್ನು ಅಭಿನಂದಿಸಿ ಶನಿವಾರ ಮಾತನಾಡಿದರು. ನಮ್ಮ ತಂದೆ ಎಂ.ಪಿ. ಪ್ರಕಾಶ ಅವರು ಕೊನೆ ಕಾಲದಲ್ಲಿ ಸೇರಿಕೊಂಡ ಪಕ್ಷ ಕಾಂಗ್ರೆಸ್‌ ಆಗಿದ್ದು, ನಮ್ಮ ಸಹೋದರ, ಮಾಜಿ ಶಾಸಕ ಎಂ.ಪಿ. ರವೀಂದ್ರ ಅವರು ಸಹ ಇಲ್ಲಿ ಕಾಂಗ್ರೆಸ್‌ ಸಂಘಟನೆ ಮಾಡಿದ್ದಾರೆ. ಅಂತಹ ಕಾಂಗ್ರೆಸ್‌ನ್ನು ನಾನು ಯಾವತ್ತೂ ಬಿಟ್ಟು ಹೋಗಲ್ಲ ಎಂದು ಹೇಳಿದರು.

ನನ್ನ ಮೇಲೆ ಕೆಲವರು ಆರೋಪ ಮಾಡುತ್ತಿದ್ದು, ಅದರಿಂದ ನನ್ನ ಶಕ್ತಿ ದ್ವಿಗುಣಗೊಳ್ಳುತ್ತದೆ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದರೂ ಕಾಂಗ್ರೆಸ್‌ ಸೇರಿದ್ದೇನೆ. ಕಾಂಗ್ರೆಸ್‌ ಸಂಘಟನೆಗೆ ದುಡಿಯುತ್ತೇನೆ ಎಂದು ತಿಳಿಸಿದರು.

ಎಲ್ಲರೂ ನಮ್ಮವರೇ ಎಂದು ತಿಳಿದು ಕಾಂಗ್ರೆಸ್‌ ಸಂಘಟಿಸಿ, ಎಲ್ಲ ಕಾರ್ಯಕರ್ತರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗಿ ಎಂದು ಅವರು ನೂತನ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಿಗೆ ಹೇಳಿದರು.

ಹರಪನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಸಿಟ್ಟಾದವರನ್ನು, ಬಿಟ್ಟು ಹೋದವರನ್ನು ಸೇರಿದಂತೆ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಕಾಂಗ್ರೆಸ್‌ ಸಂಘಟನೆ ಮಾಡೋಣ. ಮುಂಬರುವ ಲೋಕಸಭೆ, ಜಿಪಂ ಹಾಗೂ ತಾಪಂ ಚುನಾವಣೆ ಎದುರಿಸೋಣ ಎಂದರು. ಜಾತ್ಯತೀಯವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.


ಚಿಗಟೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೈದೂರು ಕುಬೇರಪ್ಪ ಮಾತನಾಡಿ, ನನ್ನ ಮೇಲೆ ಅಭಿಮಾನ ಇಟ್ಟು ಚಿಗಟೇರಿ ಬ್ಲಾಕ್‌ಗೆ ಅಧ್ಯಕ್ಷರನ್ನಾಗಿ ಶಾಸಕರು ಮಾಡಿದ್ದಾರೆ. ಅವರ ನಂಬಿಕೆಗೆ ಕುಂದು ಬರದಂತೆ ಕಾಂಗ್ರೆಸ್‌ ಸಂಘಟಿಸುತ್ತೇನೆ ಎಂದು ಹೇಳಿದರು.

ಪುರಸಭಾ ಹಿರಿಯ ಸದಸ್ಯ ಅಬ್ದುಲ್‌ ರಹಿಮಾನ್‌ ಸಾಹೇಬ್, ಮುಖಂಡ ಅಗ್ರಹಾರ ಅಶೋಕ ಮಾತನಾಡಿ, ತಾಲೂಕಿನಲ್ಲಿ ಕಾಂಗ್ರೆಸ್‌ ಸಂಘಟಿಸಿ ಶಾಸಕರ ಕೈ ಬಲಪಡಿಸಬೇಕು ಎಂದು ಹೇಳಿದರು.

ಪುರಸಭಾ ಸದಸ್ಯರಾದ ಟಿ. ವೆಂಕಟೇಶ, ಗೊಂಗಡಿ ನಾಗರಾಜ, ಲಾಟಿದಾದಾಪೀರ, ಉದ್ದಾರ ಗಣೇಶ, ಮುಖಂಡರಾದ ವಸಂತಪ್ಪ, ಟಿಎಚ್‌ಎಂ ಮಂಜುನಾಥ, ಮೈದೂರು ರಾಮಣ್ಣ, ಚಿಕ್ಕೇರಿ ಬಸಪ್ಪ, ಎಲ್‌. ಮಂಜನಾಯ್ಕ, ಎನ್‌. ಶಂಕರ, ಶಿವಕುಮಾರನಾಯ್ಕ, ಕಂಚಿಕೇರಿ ಅಂಜಿನಪ್ಪ, ಶಿವರಾಜ, ಮತ್ತೂರು ಬಸವರಾಜ ಇತರರು ಹಾಜರಿದ್ದರು.